ಕೋಲಾರ: 27ನೇ ದಿನದ ಜೊಂಡು ಸ್ವಚ್ಚತಾ ಕಾರ್ಯ
ಕೋಲಾರ,ಫೆ.18 : ಕೋಲಾರಮ್ಮ ಕೆರೆಯ 27ನೇ ದಿನದ ಜೊಂಡು ಸ್ವಚ್ಚತಾ ಆಂದೋಲನದಲ್ಲಿ ಗೃಹ ರಕ್ಷಕ ದಳದ 200ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ದೊಡ್ಡ ಹಸಾಳ ಗ್ರಾಮ ಪಂಚಾಯಿತಿಯ ಸಿಬ್ಬಂದಿ, ಮೀನುಗಾರರ ಸಹಕಾರ ಸಂಘದ ಸದಸ್ಯರು ನೀರಾವರಿ ಹೋರಾಟಗಾರರು ಭಾಗವಹಿಸಿದ್ದರು.
ಈ ಸ್ವಚ್ಚತಾ ಆಂದೋಲನಕ್ಕೆ ಸ್ಪೂರ್ತಿ ನೀಡಲು ಹೆಚ್ಚುವರಿ ಪೊಲೀಸ್ ಅಧಿಕಾರಿ ಎಂ. ರಾಜೀವ್ ರವರು, ರವಿಕುಮಾರ್, ಮಂಜುನಾಥ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣಸ್ವಾಮಿ, ಮೀನುಗಾರರ ಸಹಕಾರ ಸಂಘದ ನಂಜಪ್ಪ ಮತ್ತಿತರರು ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ನೀರಾವರಿ ಸಂಚಾಲಕ ವಿ.ಕೆ ರಾಜೇಶ್ ಮಾತನಾಡಿ, ಕೋಲಾರಮ್ಮ ಕೆರೆಯ ಜೊಂಡು ಕೆರೆಯನ್ನು ಆವರಿಸಿಕೊಂಡಿದ್ದು, ಈ ಜೊಂಡೊಂದು ದಿನಕ್ಕೆ 2 ಲೀಟರ್ ನೀರನ್ನು ಕುಡಿಯುತ್ತಿದ್ದು, ಈಗಾಗಲೇ ಬಹುತೇಕ ಕೆರೆಯ ನೀರು ಖಾಲಿಯಾಗಿದ್ದು, ಜೊಂಡನ್ನು ಸ್ವಚ್ಚಗೊಳಿಸದಿದ್ದಲ್ಲಿ ಕೋಲಾರಮ್ಮ ಕೆರೆಯು ಬತ್ತಿಹೋಗಲಿದೆ. ಹಾಗಾಗಿ ನೀರನ್ನು ಉಳಿಸುವ ಪ್ರಜ್ಞಾವಂತರು, ಸಂಘಟನೆಗಳು ಈ ಶ್ರಮದಾನ ಆಂದೋಲನದಲ್ಲಿ ಭಾಗವಹಿಸಿ ಕೋಲಾರಮ್ಮ ಕೆರೆಯನ್ನು ರಕ್ಷಿಸಬೇಕು ಎಂದರು.
ಈ ಆಂದೋಲನದಲ್ಲಿ ಎಪಿಎಂ.ಸಿ ಪುಟ್ಟರಾಜು, ವಕೀಲ ಅರುಣ್ ಕುಮಾರ್, ಮಾನವ ಹಕ್ಕುಗಳ ಹಾಗೂ ಪತ್ರಕರ್ತರ ಸಮಿತಿಯ ಮಾರುತಿ ಕುಮಾರ್, ಶ್ರೀನಿವಾಸ್, ಪಾಂಡುರಂಗ, ಸತೀಶ್ ಕುಮಾರ್, ರಮೇಶ್, ನಾಗೇಶ್, ಚಲಪತಿ ಇನ್ನೂ ಅನೇಕ ಮಂದಿ ಭಾಗವಹಿಸಿದ್ದರು.