ಅರ್ಜಿ ಮರುಪರಿಶೀಲನೆಗೆ ಅವಕಾಶ
ಉಡುಪಿ, ಫೆ.18: 2017-18 ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಶುಲ್ಕ ವಿನಾಯಿತಿ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ- ಯೋಜನೆಯಡಿ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕದೊಳಗೆ ಹಿಂದಿನ ವರ್ಷದ ಎರಡು ಸೆಮಿಸ್ಟರ್ ಅಂಕಪಟ್ಟಿಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗದೇ ಇರುವ ಹಾಗೂ ಪ್ರಸ್ತುತ ತಿರಸ್ಕೃತಗೊಂಡಿರುವ ಅರ್ಜಿಗಳನ್ನು ಮರುಪರಿಶೀಲಿಸುವಂತೆ ಹಲವಾರು ಕಾಲೇಜು ಹಾಗೂ ವಿದ್ಯಾರ್ಥಿಗಳಿಂದ ಬೇಡಿಕೆ ಬಂದಿದೆ.
ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮತ್ತು ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ಯೋಜನೆಗಳಡಿಯಲ್ಲಿ ಪ್ರಸ್ತುತ ತಿರಸ್ಕೃತಗೊಂಡಿರುವ ಅರ್ಜಿಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕೇವಲ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಯೋಜನೆಯಡಿ ಪರಿಗಣಿಸಲು ತೀರ್ಮಾನಿಸಲಾಗಿದೆ.
ಆದ್ದರಿಂದ ಹಿಂದಿನ ಸಾಲಿನ ಎರಡು ಸೆಮಿಸ್ಟರ್ಗಳ ಅಂಕಗಳು ಮತ್ತು ಅಂಕಪಟ್ಟಿಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗದೇ ಇರುವ ಹಾಗೂ ಪ್ರಸ್ತುತ ತಿರಸ್ಕೃತಗೊಂಡಿರುವ ಅರ್ಜಿಗಳ ವಿದ್ಯಾರ್ಥಿಗಳು ಕೂಡಲೇ ಆಯಾಯ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಕಚೇರಿಯಲ್ಲಿ ಸಂಪರ್ಕಿಸಿ, ಅಂಕಗಳು ಮತ್ತು ಅಂಕಪಟ್ಟಿಗಳನ್ನು ಅಪ್ಲೋಡ್ ಮಾಡಿದಲ್ಲಿ ಅಂತಹ ವಿದ್ಯಾರ್ಥಿಗಳ ತಿರಸ್ಕೃತ ಅರ್ಜಿಗಳನ್ನು ಮರುಪರಿಶೀಲಿಸಿ, ಅರ್ಹ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರಾತಿಗೆ ಪರಿಗಣಿಸಲಾಗುವುದು ಎಂದು ಉಡುಪಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.