ಪುಟ್ಟಣ್ಣಯ್ಯ ರೈತರ ನಿಜವಾದ ಬೆನ್ನೆಲುಬಾಗಿದ್ದರು: ಪ್ರೊ.ಜಿ.ಟಿ.ವೀರಪ್ಪ
ಮಂಡ್ಯ, ಫೆ.21: ರೈತ ಈ ದೇಶದ ಬೆನ್ನೆಲುಬಾದರೆ, ರೈತಪರ ಹೋರಾಟಗಾರರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ರೈತರ ನಿಜವಾದ ಬೆನ್ನೆಲುಬಾಗಿ ಕೃಷಿಕರ ಸಂಕಷ್ಟಗಳನ್ನು ಪರಿಹರಿಸಲು ಹಗಲಿರುಳು ಹೋರಾಟ ನಡೆಸಿದ ಧೀಮಂತ ನಾಯಕ ಎಂದು ಲೇಖಕ ಪ್ರೊ.ಜಿ.ಟಿ.ವೀರಪ್ಪ ಹೇಳಿದ್ದಾರೆ.
ನಗರದ ಕಾಯಕಯೋಗಿ ಫೌಂಡೇಷನ್ ಕಚೇರಿಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಂಯುಕ್ತ ವೇದಿಕೆ, ಜಿಲ್ಲಾ ಸವಿತಾ ಸಮಾಜ, ಅರುಣೋದಯ ಟ್ರಸ್ಟ್, ಮಡಿವಾಳ ಸಮಾಜ ಹಾಗೂ ವಿವಿಧ ಪ್ರಗತಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಪುಟ್ಟಣ್ಣಯ್ಯ ಭೌತಿಕವಾಗಿ ನಮ್ಮನ್ನು ಅಗಲಿದ್ದರೂ ಅವರ ಆದರ್ಶ, ರೈತಪರ ಚಿಂತನೆ, ಹೋರಾಟದ ನಾಯಕತ್ವ, ಜನಪರ ಆಲೋಚನೆಗಳಿಗೆ ಎಂದಿಗೂ ಸಾವಿಲ್ಲ. ಅವರ ವಿಚಾರಗಳು ನಮ್ಮ ನಡುವೆ ಸದಾ ಬದುಕಿರುತ್ತವೆ. ದೀನ, ದಲಿತ, ಶೋಷಿತ, ಹಿಂದುಳಿದ, ರೈತ ಮಹಿಳೆಯರ ಬಗ್ಗೆ ಅವರಿಗಿದ್ದ ಕಾಳಜಿ ಅವರ್ಣನೀಯ ಹಾಗೂ ಅನುಕರಣೀಯವಾಗಿವೆ ಎಂದು ಅವರು ಹೇಳಿದರು.
ಕಾಯಕಯೋಗಿ ಫೌಂಡೆಷ್ನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ ಅವರ ಸ್ಮರಣಾರ್ಥವಾಗಿ ಸರಕಾರ ವಿ.ಸಿ.ಫಾರಂನ ಕೃಷಿ ವಿದ್ಯಾಲಯದಲ್ಲಿ ಕಾಯಕ ಭವನವನ್ನು ನಿರ್ಮಾಣ ಮಾಡಿ ಕೃಷಿಕರ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಒತ್ತಾಯಿಸಿದರು.
ಬಿಜೆಪಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್, ರೋಟರಿ ಕ್ಲಬ್ ಅಧ್ಯಕ್ಷ ಎ.ಸಿ.ರಮೇಶ್, ಸವಿತಾ ಸಮಾಜದ ಅಧ್ಯಕ್ಷ ವಿ.ಆಂಜನಪ್ಪ, ನಗರಸಭೆ ಸದಸ್ಯ ಎಂ.ಎಚ್.ವನೇಶ್, ಆನಂದ್, ಅರುಣೋದಯ ಟ್ರಸ್ಟ್ ಅಧ್ಯಕ್ಷೆ ಅರುಣ ಜ್ಯೋತಿ, ಮಡಿವಾಳ ಸಮಾಜದ ಮುಖಂಡರಾದ ಬಿ.ಟಿ.ಗುರುರಾಜ್, ಶಿವಣ್ಣ, ಸೋಮಶೇಖರ್, ವೆಂಕಟೇಶ್, ಲಿಂಗರಾಜು, ಚಿಕ್ಕವೀರಶೆಟ್ಟಿ, ಶಿವಲಿಂಗಯ್ಯ, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.