ಮಡಿಕೇರಿ; ಪ್ರತಿಭಟನೆಯಿಂದ ನಗರಸಭೆಯಲ್ಲಿ ಸುಧಾರಣೆಯಾಗಿದೆ : ನಗರ ಬಿಜೆಪಿ ಸಮರ್ಥನೆ
ಮಡಿಕೇರಿ,ಫೆ.22:ನಗರಸಭೆಯ ಕಾರ್ಯವೈಖರಿ ವಿರುದ್ಧ ಇತ್ತೀಚೆಗೆ ಬಿಜೆಪಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು, ಆಡಳಿತ ವ್ಯವಸ್ಥೆಯಲ್ಲಿ ಕೊಂಚ ಸುಧಾರಣೆಯಾಗಿದೆ ಎಂದು ನಗರ ಬಿಜೆಪಿ ಸಮಿತಿಯ ಅಧ್ಯಕ್ಷರಾದ ಮಹೇಶ್ ಜೈನಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಧರಣಿಯನ್ನು ಹಾಸ್ಯಾಸ್ಪದವೆಂದು ಕಾಂಗ್ರೆಸ್ ಟೀಕೆ ಮಾಡಿದೆ. ಆದರೆ, ನಗರಸಭೆಯಲ್ಲಿ ಕಾಂಗ್ರೆಸ್ ವರ್ತನೆಯೆ ಹಾಸ್ಯಾಸ್ಪದವಾಗಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗುತ್ತಿದೆ ಎಂದು ಆರೋಪಿಸಿದರು. ನಾಲ್ವರು ಬಿಜೆಪಿ ಸದಸ್ಯರ ನಿರ್ಧಾರದಂತೆ ಪ್ರತಿಭಟನೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಸದಸ್ಯ ಹೆಚ್.ಎಂ.ನಂದ ಕುಮಾರ್ ಆರೋಪಿಸಿದ್ದಾರೆ. ಆದರೆ, ಬಿಜೆಪಿ ಕಾಂಗ್ರೆಸ್ನಂತೆ ಒಬ್ಬ ವ್ಯಕ್ತಿಯ ಮೇಲೆ ನಿಂತ ಪಕ್ಷವಲ್ಲ. ಪಕ್ಷದ ನಗರ ಸಮಿತಿಯ ನಿರ್ಧಾರದಂತೆ ಎಲ್ಲರ ಒಪ್ಪಿಗೆಯ ಮೇರೆಗೆ ಪ್ರತಿಭಟನೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ನಾಲ್ವರು ಸದಸ್ಯರ ವಿರುದ್ಧ ಕಾಂಗ್ರೆಸ್ಸಿಗರು ಮಾಡಿರುವ ಆರೋಪವನ್ನು ಮೊದಲು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ ಮಹೇಶ್ ಜೈನಿ, ಬಿಜೆಪಿ ಪ್ರತಿಭಟನೆ ನಡೆಸಿದ ನಂತರ ಆಡಳಿತ ವ್ಯವಸ್ಥೆಯಲ್ಲಿ ಕೊಂಚ ಸುಧಾರಣೆಯಾಗಿದೆ ಎಂದು ಸಮರ್ಥಿಸಿಕೊಂಡರು. ನಾಲ್ವರ ವಿರುದ್ಧ ಮಾಡಿರುವ ಆರೋಪಕ್ಕೆ ದಾಖಲೆ ಇದ್ದರೆ ನಂದಕುಮಾರ್ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದ ಅವರು, ಆಧಾರ ರಹಿತ ಆರೋಪಗಳ ಮೂಲಕ ಜನರ ಹಾದಿ ತಪ್ಪಿಸುವ ಕೆಲಸ ಮಾಡಬಾರದೆಂದರು.
ಜಾತ್ಯತೀತ ಜನತಾದಳ ನಡೆಸಿರುವ ಧರಣಿ ಸತ್ಯಾಗ್ರಹ ಕೆ.ಎಂ.ಗಣೇಶ್ ಅವರ ರಾಜಕೀಯ ಅಸ್ತಿತ್ವದ ಹೋರಾಟವೆಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ನಲ್ಲಿದ್ದಾಗ ಮನಸ್ಸು ಮಾಡಿದ್ದರೆ, ತಮ್ಮದೆ ವಾರ್ಡ್ನಲ್ಲಿ ಬೇಕಾದಷ್ಟು ಅಭಿವೃದ್ಧಿ ಕಾರ್ಯಗಳನ್ನು ಗಣೇಶ್ ಅವರು ಮಾಡಬಹುದಿತ್ತೆಂದು ಅಭಿಪ್ರಾಯಪಟ್ಟರು. ಬಿಜೆಪಿಯ ಅಹೋರಾತ್ರಿ ಧರಣಿಯ ನಂತರ ದಿಢೀರಾಗಿ ಜ್ಞಾನೋದಯವಾದಂತೆ ಗಣೇಶ್ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಸಧ್ಯದಲ್ಲೆ ದಾಖಲೆ ಬಿಡುಗಡೆ ಮಾಡುವುದಾಗಿ ಮಹೇಶ್ ಜೈನಿ ತಿಳಿಸಿದರು.
ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮೇಶ್ ಸುಬ್ರಮಣಿ ಮಾತನಾಡಿ, ಮೂಡಾ ಅಧ್ಯಕ್ಷರಾದ ಚುಮ್ಮಿ ದೇವಯ್ಯ ಅವರು, ಬಿಜೆಪಿ ವಿರುದ್ಧ ಹೇಳಿಕೆ ನೀಡುವುದನ್ನು ಬಿಟ್ಟು, ತಮ್ಮ ಕಛೇರಿಯಲ್ಲಿ ಬಾಕಿ ಇರುವ ಕಡತಗಳನ್ನು ಮೊದಲು ವಿಲೇವಾರಿ ಮಾಡಲಿ ಎಂದು ಒತ್ತಾಯಿಸಿದರು. ನಿನ್ನೆ, ಮೊನ್ನೆ ರಾಜಕೀಯಕ್ಕೆ ಬಂದ ತೆನ್ನಿರ ಮೈನಾ, ಯುಜಿಡಿ ಯೋಜನೆಯ ಬಗ್ಗೆ ಮಾಹಿತಿಯ ಕೊರತೆಯಿಂದ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್, ಉಪಾಧ್ಯಕ್ಷ ರಾಜೇಶ್, ಮಹಿಳಾ ಮೋರ್ಚಾದ ಅಧ್ಯಕ್ಷರಾದ ಅನಿತಾ ಪೂವಯ್ಯ ಹಾಗೂ ಅರುಣ್ ಶೆಟ್ಟಿ ಉಪಸ್ಥಿತರಿದ್ದರು.