ಗಂಧದ ಮರ ಕಳವು:ನಾಲ್ವರ ಬಂಧನ
ಮಂಡ್ಯ, ಮಾ.7: ಮೇಲುಕೋಟೆ ರಕ್ಷಿತಾರಣ್ಯ ವ್ಯಾಪ್ತಿಗೆ ಸೇರಿದ ಹುಣಿಸೆಮರದ ಮಂಟಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗಂಧದ ಮರಗಳನ್ನು ಕಡಿದು ಮಾರಾಟ ಮಾಡಲು ಸಾಗಿಸುತ್ತಿದ್ದ ನಾಲ್ವರು ದುಷ್ಕರ್ಮಿಗಳನ್ನು ಮೇಲುಕೋಟೆ ಅರಣ್ಯ ವಲಯದ ಸಿಬ್ಬಂದಿ ಮಾಲು ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಗಂಧದ ಮರದ ಕಳ್ಳತನದ ಖಚಿತ ಮಾಹಿತಿಯಾಧರಿಸಿ ಅರಣ್ಯದ ಒಳಭಾಗದಲ್ಲೇ ದಾಳಿ ನಡೆಸಿದ ಮೇಲುಕೋಟೆ ಅರಣ್ಯ ವಲಯದ ಅರಣ್ಯಾಧಿಕಾರಿ ರಾಜೇಶ್ವರಿ ಮತ್ತು ಸಿಬ್ಬಂದಿ ನಾಲ್ವರು ಆರೋಪಿಗಳನ್ನು 8 ಕೆ.ಜಿ. ಗಂಧದ ಮರದ ಸಹಿತ ವಶಕ್ಕೆ ಪಡೆದು ಅರಣ್ಯ ಕಾಯ್ದೆಯನ್ವಯ ಪ್ರಕರಣ ದಾಖಲಿಸಿದ್ದಾರೆ.
ಅಲೆಮಾರಿಗಳಂತೆ ವೇಷ ಧರಿಸಿದ ನಾಲ್ವರು ಹಗಲಿನಲ್ಲಿ ಕಾಡಿಗೆ ತೆರಳಿ ಗಂಧದ ಮರಗಳನ್ನು ಹುಡುಕಿ ಕಡಿದು ರಾತ್ರಿ ವೇಳೆ ಕಾಡಿನಿಂದ ಹೊರಕ್ಕೆ ಮರಗಳನ್ನು ಸಾಗಿಸುತ್ತಿದ್ದರು. ಬಂಧಿತರ ವಿವರ ತನಿಖೆಯಿಂದ ಹೊರ ಬರಬೇಕಿದೆ. ದಾಳಿಯಲ್ಲಿ ಉಪವಲಯ ಅರಣ್ಯಾಧಿಕಾರಿ ಸುರೇಶ್, ಮುರುಳಿ, ಮಿತ್ರಾನಂದ, ಅಯ್ಯಪ್ಪ, ವಾಸು ಮತ್ತಿತರರು ಭಾಗವಹಿಸಿದ್ದರು.
Next Story