ತುಮಕೂರು: ಗುತ್ತಿಗೆದಾರರಿಂದ ಕಾರ್ಮಿಕರಿಗೆ ಕಿರುಕುಳ ಆರೋಪಿಸಿ ಪ್ರತಿಭಟನೆ
ತುಮಕೂರು,ಮಾ.08: ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆಯಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರಿಗೆ ಕಿರುಕುಳ ನೀಡುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ವಿರೋಧಿಸಿ ಜಿಲ್ಲಾಸ್ಪತ್ರೆ ಎದುರು ಮಹಿಳಾ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಮಹಿಳಾ ದಿನಾಚರಣೆಯ ದಿನದಂದು ಪ್ರತಿಭಟನೆ ನಡೆಸಿದರು.
ಕಳೆದ 10-15 ವರ್ಷಗಳಿಂದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ 40ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ದುಡಿಯುತ್ತಿದ್ದು, ಗುತ್ತಿಗೆದಾರರ ಮೇಲ್ವಿಚಾರಕರೊಬ್ಬರು ಮಹಿಳಾ ಕಾರ್ಮಿಕರಿಗೆ ಅವಾಚ್ಯ ಶಬ್ದಗಳನ್ನು ಬಳಸಿ ಬೈಯುವುದು, ಮಾನಸಿಕವಾಗಿ ಕಿರುಕುಳ ನೀಡಿ ಕೆಲಸದಿಂದ ತೆಗೆದು ಹಾಕುವುದನ್ನು ತಪ್ಪಿಸಬೇಕು. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಲೈಂಗಿಕ ದೌರ್ಜನ್ಯ ಸಮಿತಿಯನ್ನು ರಚಿಸಬೇಕು. ಕಾರ್ಮಿಕ ಕಾನೂನಿನನ್ವಯ ಇ.ಎಸ್.ಐ. ಪಿಎಫ್, ಬೊನಸ್, ವೇತನ ಚೀಟಿ ನೀಡದೆ ಕಾರ್ಮಿಕರಿಗೆ ಅನ್ಯಾಯವೆಸಗಲಾಗುತ್ತಿದೆ. ಈ ಅಂಶಗಳು ಸೇರಿದಂತೆ ಪ್ರತಿಭಟನಾಕಾರರು ಜಿಲ್ಲಾ ಶಸ್ತ್ರಚಿಕಿತ್ಸಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಂಘದ ಪದಾಧಿಖಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಎಂ.ವಿ.ವೀರಭದ್ರಯ್ಯ, ಕಾರ್ಮಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಇನ್ನು ಮುಂದೆ ಪ್ರತಿ ಎರಡು ತಿಂಗಳಿಗೊಮ್ಮೆ ಕಾರ್ಮಿಕರು ಹಾಗೂ ಗುತ್ತಿಗೆದಾರರ ಸಭೆ ನಡೆಸಲಾಗುವುದು. ಅನಗತ್ಯ ಕಿರುಕುಳಕ್ಕೆ ಕಡಿವಾಣ ಹಾಕುವುದಾಗಿ ಭರವಸೆ ನೀಡಿದರು.
ಈ ವೇಳೆ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ಮುಜೀಬ್, ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಆಸ್ಪತ್ರೆ ಕಾರ್ಮಿಕರ ಸಂಘದ ಮುಖಂಡರಾದ ನೇತ್ರಾ, ರಂಗಮ್ಮ, ಸಲ್ಮಾ, ಲಕ್ಷ್ಮಮ್ಮ, ರಂಗಸ್ವಾಮಿ, ಮುಂತಾದವರು ನೇತೃತ್ವ ವಹಿಸಿದ್ದರು.