ಮಂಡ್ಯ: ಪುಟ್ಟಣ್ಣಯ್ಯ ರಾಜಕೀಯ ಉತ್ತರಾಧಿಕಾರಿಗೆ ಸಿಎಂ ಬೆಂಬಲ
ರೈತ ಹೋರಾಟಗಾರರ ಮೊಕದ್ದಮೆ ಹಿಂಪಡೆಯುವ ಭರವಸೆ
ಮಂಡ್ಯ, ಮಾ.8: ರೈತಸಂಘದ ವರಿಷ್ಠ, ಮಾಜಿ ಶಾಸಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ರಾಜಕೀಯ ಉತ್ತರಾಧಿಕಾರಿಗೆ ತನ್ನ ಸಂಪೂರ್ಣ ಬೆಂಬಲವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ರೈತಸಂಘ ಹಾಗೂ ಹಸಿರುಸೇನೆ ವತಿಯಿಂದ ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪುಟ್ಟಣ್ಣಯ್ಯನವರಿಗೆ ಹಸಿರು ನಮನ ಕಾರ್ಯಕ್ರಮ ಪಾಲ್ಗೊಂಡು ಅವರು ಅವರು ಮಾತನಾಡಿದರು.
ಪುಟ್ಟಣ್ಣಯ್ಯ ತಮ್ಮ ಕ್ಷೇತ್ರದಲ್ಲಿ ಏನೇನು ಮಾಡಬೇಕೆಂದಿದ್ದರು ಅದನ್ನೆಲ್ಲಾ ಮಂಜೂರು ಮಾಡುತ್ತೇನೆ. ಜತೆಗೆ ಹೋರಾಟಗಾರರ ವಿರುದ್ಧ ಮೇಲಿನ ಮೊಕದ್ದಮೆಗಳನ್ನು ಸಚಿವ ಸಂಪುಟದ ಉಪಸಮಿತಿ ಜತೆ ಚರ್ಚಿಸಿ ಹಿಂಪಡೆಯಲಾಗುವುದು. ಪಾಂಡವಪುರದಲ್ಲಿ ಪುಟ್ಟಣ್ಣಯ್ಯ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.
ಜಾತ್ಯತೀತ ರಾಜಕಾರಣಿ:
ಪುಟ್ಟಣ್ಣಯ್ಯ ರಾಜ್ಯ ಕಂಡಂತಹ ಒಬ್ಬ ಅಪರೂಪದ ಜಾತ್ಯತೀತ ರಾಜಕಾರಣಿ. ಸಂವಿಧಾನದ ಜಾತ್ಯತೀತ ಸಮಾಜ ನಿರ್ಮಾಣದ ಆಶಯಕ್ಕೆ ಅಕ್ಷರಶಃ ಬದ್ದರಾಗಿ ಸಾರ್ವಜನಿಕ ಜೀವನದಲ್ಲಿ ಪುಟ್ಟಣ್ಣಯ್ಯ ಬದುಕಿದ್ದರು ಎಂದರೆ ಅತಿಶಯೋಕ್ತಿ ಆಗಲ್ಲ ಎಂದು ಅವರು ಅಭಿಪ್ರಾಯಪಟ್ಟರು. ನಾವು ವೈಯಕ್ತಿಕವಾಗಿ ಒಳ್ಳೆಯ ಸ್ನೇಹಿತರು. ಅದಕ್ಕೆ ನಾನೂ ಎರಡುವರೆ ವರ್ಷ ರೈತಸಂಘದಲ್ಲಿದುದು ಒಂದು ಕಾರಣವಾದರೆ, ಪುಟ್ಟಣ್ಣಯ್ಯನವರ ಎಲ್ಲರನ್ನೂ ಪ್ರೀತಿಸುವ ಜಾತ್ಯತೀತ ಮನೋಭಾವ ಮತ್ತೊಂದು ಕಾರಣ ಎಂದು ಅವರು ಸ್ಮರಿಸಿದರು.
ತಮ್ಮ ಒಳ್ಳೆಯ ಕೆಲಸಗಳಿಂದ ಸತ್ತವರೂ ಬದುಕಿರುತ್ತಾರೆಂಬ ಅಂಬೇಡ್ಕರ್ ಹೇಳಿಕೆಯನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ಜನಪರ ಕೆಲಸ, ಕಾಳಜಿ, ಸಮಾಜಮುಖಿ ಬದ್ಧತೆಯಿಂದ ಪುಟ್ಟಣ್ಣಯ್ಯ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆಂದು ಹೇಳಿದರು.
ವಿಧಾನಸೌಧದಲ್ಲಿ ಯಾವುದೇ ವಿಷಯ ಚರ್ಚೆಗೆ ಬಂದರೂ ಸುತ್ತಿಬಳಸಿ ರೈತರ ವಿಷಯಕ್ಕೆ ಬರೋರು. ಬಹಳ ಓದದೆ, ಬರೆಯದೇ ಇರಬಹುದು. ಆದರೆ, ಪುಟ್ಟಣ್ಣಯ್ಯನವರ ಜೀವನದ ಅನುಭವ, ಬದ್ಧತೆ ಮುಂದೆ ಏನೂ ಅಲ್ಲ ಎಂದು ಅವರು ಶ್ಲಾಘಿಸಿದರು.
ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕನಿಷ್ಠ ವಾರದಲ್ಲಿ ಎರಡು ದಿನ ನನ್ನ ಭೇಟಿಯಾಗುತ್ತಿದ್ದರು. ರಾಜ್ಯಕ್ಕೆ ನಾನೊಬ್ಬನೇ ರೈತ ಪ್ರತಿನಿಧಿಯೆಂದು ಪಟ್ಟುಹಿಡಿದು ರೈತರ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಇದು ನೊಂದವರು, ಬಡವರ ಬಗ್ಗೆ ಅವರಿಗಿದ್ದ ಸ್ಪಂದನೆಯನ್ನು ತೋರುತ್ತದೆ ಎಂದು ಅವರು ತಿಳಿಸಿದರು.
ಯಾವುದೇ ಚುನಾವಣೆ ಸೇರಿದಂತೆ ನಮ್ಮ ಕಾಂಗ್ರೆಸ್ಗೆ ಪುಟ್ಟಣ್ಣಯ್ಯ ಬೆಂಬಲವಾಗಿದ್ದರು. ಕೋಮುವಾದಿಗಳಿಗೆ ವಿರುದ್ಧವಿದ್ದ ಅವರು ಬಿಜೆಪಿ ಏನೆಲ್ಲಾ ಆಸೆ ಆಮಿಷ ತೋರಿದರೂ ಬದಲಾಗುತ್ತಿರಲಿಲ್ಲ ಎಂದು ಅವರು ಸ್ಮರಿಸಿದರು. 80ರ ದಶಕದಲ್ಲಿ ರೈತಸಂಘ ಎಂದರೆ ಇಡೀ ಆಡಳಿತ ವ್ಯವಸ್ಥೆ ಗಡಗಡ ನಡುಗುತ್ತಿತ್ತು. ಅದು ಮರುಕಳಿಸಬೇಕೆಂಬ ಆಶಯ ಪುಟ್ಟಣ್ಣಯ್ಯ ಅವರಿಗಿತ್ತು. ಅಂತಹ ಶಕ್ತಿ ರೈತ ಚಳವಳಿಗೆ ಬರಲಿ, ಜೆಪಿಯವರ ಸಂಪೂರ್ಣ ಕ್ರಾಂತಿ ಸಾಕಾರವಾಗಲಿ ಎಂದು ಅವರು ಕರೆ ನೀಡಿದರು.
ಪ್ರತಿಯೊಬ್ಬ ಯಶಸ್ವಿ ಪುರಷನ ಹಿಂದೆ ಮಹಿಳೆಯರ ತ್ಯಾಗವಿದೆ. ಪುಟ್ಟಣ್ಣಯ್ಯನವರ ಸಾಧನೆಗೆ ಪತ್ನಿ ಸುನೀತಾ ಅವರ ತ್ಯಾಗ ಮುಖ್ಯವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಸಿವ ಶಕ್ತಿ ದೇವರು ನೀಡಲಿ ಎಂದು ಸಿದ್ದರಾಮಯ್ಯ ಆಶಿಸಿದರು.
ಕರ್ನಾಟಕ ಪ್ರಶಸ್ತಿ ನೀಡಲು ಒತ್ತಾಯ: ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಮೂಲಕ ಸರಕಾರ ಇಡೀ ರೈತ ಸಮುದಾಯಕ್ಕೆ ಗೌರವ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಪುಟ್ಟಣ್ಣಯ್ಯ ಅವರ ಜನಪರ ಕಾಳಜಿಯನ್ನು ಶ್ಲಾಘಿಸಿದ ಅವರು, ಅವರ ಪತ್ನಿ ಶಾಸಕ ಸ್ಥಾನಕ್ಕೆ ಸೂಕ್ತವೆಂದು ಅಭಿಪ್ರಾಯಪಟ್ಟರು. ರೈತಶಕ್ತಿ ಒಗ್ಗೂಡಿ ಹೋರಾಟ ರೂಪಿಸಿಕೊಂಡರೆ ಉತ್ತಮ ಭವಿಷ್ಯ ಲಭ್ಯವಾಗಲಿದೆ ಎಂದು ಅವರು ಸಲಹೆ ನೀಡಿದರು. ಕೆಟ್ಟ ಪ್ರಜಾಪ್ರಭುತ್ವವನ್ನು ಸಹಿಸಿಕೊಳ್ಳಬಹುದು. ಆದರೆ, ಸರ್ವಾಧಿಕಾರಿ ಪ್ರಜಾಪ್ರಭುತ್ವ ಬಹಳ ಅಪಾಯಕಾರಿ ಎಂದು ಅವರು ಪ್ರಸ್ತುತ ದೇಶದ ವಿದ್ಯಮಾನಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಶಾಸಕ ಪುಟ್ಟಣ್ಣಯ್ಯ ಅವರ ಉತ್ತರಾಧಿಕಾರಿ ಯಾರಾಗಬೇಕೆಂದು ಉಪಸ್ಥಿತರಿದ್ದ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿ ನೆರೆದಿದ್ದ ಸಭಿಕರ ಅಭಿಪ್ರಾಯ ಕೇಳಿದಾಗ, ಪತ್ನಿ ಸುನೀತಾ ಪುಟ್ಟಣ್ಣಯ್ಯ ಅವರಿಗಿಂತ, ಹೆಚ್ಚು ಚಪ್ಪಾಳೆ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬಂದಿತು.
ತ್ರಿನೇತ್ರ ಮಹಾಂತ ಸ್ವಾಮೀಜಿ, ಸಾಹಿತಿ ದೇವನೂರು ಮಹಾದೇವ, ಶಾಸಕರಾದ ಎನ್.ಚಲುವರಾಯಸ್ವಾಮಿ, ರಮೇಶ್ಬಾಬು ಬಂಡಿಸಿದ್ದೇಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಕೆಂಪೇಗೌಡ, ರೈತಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್, ಕಾರ್ಯಾಧ್ಯಕ್ಷ ಚಾಮರಸಮಾಲಿ ಪಾಟೀಲ್, ಮಹಿಳಾಧ್ಯಕ್ಷೆ ನಂದಿನಿ ಜಯರಾಂ, ಬಡಗಲಪುರ ನಾಗೇಂದ್ರ, ಕೆ.ಟಿ.ಗೋವಿಂದೇಗೌಡ, ಎ.ಎಲ್.ಕೆಂಪೂಗೌಡ, ಶಂಭೂನಹಳ್ಳಿ ಸುರೇಶ್, ಚುಕ್ಕಿ ನಂಜುಂಡಸ್ವಾಮಿ, ಪಚ್ಚೆ ನಂಜುಂಡಸ್ವಾಮಿ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಚಿಂತಕ ಪ್ರೊ.ಹುಲ್ಕೆರೆ ಮಹಾದೇವ, ಪುಟ್ಟಣ್ಣಯ್ಯ ಅವರ ಆಪ್ತ ಸಹಾಯಕ ಗೋಪಾಲ್, ಪತ್ನಿ ಸುನೀತಾ, ಪುತ್ರ ದರ್ಶನ್, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತಸಂಘದ ಮುಖಂಡರು ಹಾಗೂ ಇತರೆ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸರಕಾರಕ್ಕೆ ಹಕ್ಕೊತ್ತಾಯ
ಮೇಲುಕೋಟೆ ಕ್ಷೇತ್ರದ 103 ಕೋಟಿ ರೂ.ಗಳ ಯೋಜನೆಗೆ ಪುಟ್ಟಣ್ಣಯ್ಯ ಅವರ ಸಲ್ಲಿಸಿದ ಪ್ರಸ್ತಾವನೆಗೆ ಮಂಜೂರಾತಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದ ರೈತಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್, ಪುಟ್ಟಣ್ಣಯ್ಯ ಅವಧಿಯಲ್ಲಿ ಅರ್ಧಕ್ಕೆ ನಿಂತಿರುವ ಕೆಲಸಗಳನ್ನು ಪೂರೈಸುವಂತೆ ಹಕ್ಕೊತ್ತಾಯ ಮಂಡಿಸಿದರು.
ದುದ್ದ ಹೋಬಳಿಯ 54 ಕೆರೆಗಳಿಗೆ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸಬೇಕು. ಪಾಂಡವಪುರದ ಕುಡಿಯುವ ನೀರು, ಯುಜಿಡಿ ಕಾಮಗಾರಿ ಪೂರ್ಣಗೊಳಿಸಬೇಕು. ಪುಟ್ಟಣ್ಣಯ್ಯ ಅವರ ಗ್ರಾಮ ಕ್ಯಾತನಹಳ್ಳಿಯಲ್ಲಿ ಪುಟ್ಟಣ್ಣಯ್ಯ ಅವರೇ ನಡೆಸುತ್ತಿರುವ ಹಾಸ್ಟೆಲ್ಗೆ ಕಟ್ಟಡ ನಿರ್ಮಿಸಬೇಕು. ಪಾಂಡಪವುರ, ಕೆ.ಆರ್.ಪೇಟೆ ತಾಲೂಕಿನಲ್ಲಿರುವ ನಾಮಧಾರಿ ಒಕ್ಕಲಿಗ ಸಮುದಾಯಕ್ಕೆ ನಿವೇಶನ ನೀಡಬೇಕು. ಪಾಂಡವಪುರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಬೇಕು. ವಿ.ಸಿ.ಫಾರಂನ ರೈತ ಭವನಕ್ಕೆ ಪುಟ್ಟಣ್ಣಯ್ಯ ಅವರ ಹೆಸರಿಡಬೇಕು. ಎಲ್ಲ ಹೋರಾಟಗಾರರ ಮೇಲಿನ ಪ್ರಕರಣದ ಹಿಂಪಡೆಯಬೇಕು ಎಂದು ಗಂಗಾಧರ್ ಒತ್ತಾಯಿಸಿ ಸಿಎಂಗೆ ಮನವಿ ಸಲ್ಲಿಸಿದರು.