ಮಹಿಳೆ ಪುರುಷರಿಗೆ ಸಮನಾಗಿ ದುಡಿಯುತ್ತಿದ್ದಾಳೆ: ಶುಭದಾಯಿನಿ
ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ದಿನಾಚರಣೆ
ಮಂಡ್ಯ, ಮಾ.8: ಹೆಣ್ಣೆಂದರೆ ಶಕ್ತಿಸ್ವರೂಪಿಣಿ. ತಾಳ್ಮೆ, ಸಹನೆಯನ್ನು ಸಹಿಸಿಕೊಂಡು ಮನೆಯ ಜವಾಬ್ಧಾರಿ ಜೊತೆಗೆ ಸಮಾಜದ ವಿವಿಧ ರಂಗಗಳಲ್ಲೂ ತನ್ನನ್ನು ತೊಡಗಿಸಿಕೊಂಡು ಪುರುಷರಿಗೆ ಸಮಾನವಾಗಿ ದುಡಿಯುತ್ತಿದ್ದಾಳೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಶುಭದಾಯಿನಿ ಹೇಳಿದ್ದಾರೆ.
ನಗರದ ಬಂದೀಗೌಡ ಬಡಾವಣೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಗುರುವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಕೆಗೆ ಅಧಿಕಾರ ಸಿಕ್ಕಿದರೆ ಯಾವುದೇ ಕಳಂಕ, ಭ್ರಷ್ಟಾಚಾರವಿಲ್ಲದೆ ಸಮರ್ಥವಾಗಿ ನಿಭಾಯಿಸುತ್ತಾಳೆ. ಕಿತ್ತೂರು ರಾಣಿ ಚೆನ್ನಮ್ಮ, ಮದರ್ ಥೆರೇಸಾ ಇವರು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದು, ಅವರು ತೋರಿಸಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಮುನ್ನಡೆದು ಸಮಾಜದ ಅಭಿವೃದ್ಧಿಗೆ ದುಡಿಯೋಣ. ಸಮಾಜದಲ್ಲಿ ಪುರುಷರಷ್ಟೇ ಸಮಾನ ಹಕ್ಕು ಮಹಿಳೆಯರಿಗೂ ಸಿಗಬೇಕು ಎಂದು ಅವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಸ್ವತಂತ್ರ ಭಾರತದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲು ಹಾಕುತ್ತಿದ್ದಾರೆ. ಯುಪಿಎ ಸರಕಾರದ ಅವಧಿಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸಿಗಬೇಕೆಂದು ಹೋರಾಟ ಮಾಡಿದರು. ಆದರೆ, ವಿರೋಧ ಪಕ್ಷಗಳು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಮುಂದಿನ ದಿನಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಅನುಮೋದನೆ ಆಗುವ ಮೂಲಕ ಮಹಿಳೆಯರಿಗೆ ನ್ಯಾಯ ಸಿಗಲಿ ಎಂದು ಆಶಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್ ಮಾತನಾಡಿ, ಪುರುಷರು ಮಹಿಳೆಯರನ್ನು ಸಮಾಜದಲ್ಲಿ ಎರಡನೇ ದರ್ಜೆಯಾಗಿ ನೋಡಬಾರದು. ಶೇ.46ರಷ್ಟು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಸಮಾಜದಲ್ಲಿ ಸಮಾನ ಅವಕಾಶ ಸಿಗಬೇಕು. ಆಕೆಯನ್ನು ಗೌರವದಿಂದ ಕಾಣುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದರು.
ಹಿರಿಯ ಮಹಿಳೆಯರಿಗೆ ಮಹಿಳಾ ದಿನಾಚರಣೆ ಅಂಗವಾಗಿ ಸೀರೆ ವಿತರಿಸಲಾಯಿತು. ಮಾಜಿ ಸಂಸದ ಜಿ.ಮಾದೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಎಪಿಎಂಸಿ ಅಧ್ಯಕ್ಷೆ ಪಲ್ಲವಿ, ತಾಪಂ ಮಾಜಿ ಅಧ್ಯಕ್ಷೆ, ವಿಜಯಾ ರಾಧಾಕೃಷ್ಣ, ನಗರಸಭೆ ಉಪಾಧ್ಯಕ್ಷೆ ಸುಜಾತಮಣಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ, ಚಂದ್ರಕಲಾ ಶಿವರಾಂ, ವಿಜಯಲಕ್ಷ್ಮಿ ರಘುನಂದನ್, ಸಬರಿನ್ ತಾಜ್, ಜ್ಯೋತಿ, ಹನ್ಸಿಯಾಬಾನು, ಇತರರು ಉಪಸ್ಥಿತರಿದ್ದರು