ಮೆಟ್ರೋ ಸಿಬ್ಬಂದಿ ಮುಷ್ಕರ : ಎಸ್ಮಾ ಜಾರಿಗೆ ಹೈ ಕೋರ್ಟ್ ತಡೆ
ಬೆಂಗಳೂರು, ಮಾ.9: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಾ.22 ರಿಂದ ಮುಷ್ಕರ ಹಮ್ಮಿಕೊಳ್ಳಲು ಮೆಟ್ರೋ ಸಿಬ್ಬಂದಿ ನಿರ್ಧರಿಸಿದ್ದು, ಬಿಎಂಆರ್ಸಿಎಲ್ ಜಾರಿ ಮಾಡಲು ಮುಂದಾಗಿದ್ದ ಎಸ್ಮಾ ವಿರುದ್ಧ ಹೈಕೋರ್ಟ್ನಿಂದ ತಡೆ ಆದೇಶ ತರಲಾಗಿದೆ ಎಂದು ಮೆಟ್ರೋ ಸಿಬ್ಬಂದಿ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈಲ್ವೆ ಉದ್ಯಮ ಕೇಂದ್ರ ವ್ಯಾಪ್ತಿಯಲ್ಲಿ ಬರುವುದರಿಂದ ಕೇಂದ್ರ ಸರಕಾರ ಕಾರ್ಮಿಕರ ಮೇಲೆ ಎಸ್ಮಾ ಜಾರಿ ಮಾಡಬಹುದೇ ಹೊರತು ರಾಜ್ಯ ಸರಕಾರಕ್ಕೆ ಅವಕಾಶವಿಲ್ಲ. ಹೀಗಾಗಿ, ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿ, ಸರಕಾರದ ಆದೇಶವನ್ನು ನ್ಯಾಯಾಲಯ ತಡೆ ಹಿಡಿದು ತೀರ್ಪು ನೀಡಿದೆ. ಆದುದರಿಂದ ನಮ್ಮ ಬೇಡಿಕೆಗಳನ್ನು ನಿಗದಿತ ಅವಧಿಯೊಳಗೆ ಈಡೇರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಅನಿವಾರ್ಯವಾಗಿ ಮುಷ್ಕರ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಸಂಘಟನೆಯನ್ನು ಹತ್ತಿಕ್ಕುವ ಸಲುವಾಗಿ ಆಡಳಿತ ಮಂಡಳಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಬಿಎಂಆರ್ಸಿಎಲ್ ಆಡಳಿತ ಮಂಡಳಿ ಕಾರ್ಮಿಕರ ಸಮಸ್ಯೆಗಳನ್ನು ಈಡೇರಿಸುವ ಬದಲಿಗೆ, ಎಸ್ಮಾ ಜಾರಿ ಮಾಡಲಾಗುತ್ತದೆ ಎಂದು ಹೆದರಿಸುತ್ತಿದ್ದಾರೆ ಎಂದ ಅವರು, ಮೆಟ್ರೋ ನಿಯಮದಂತೆ ಮುಷ್ಕರ ನಡೆಸುವ ಕುರಿತು ಹಾಗೂ ನಮ್ಮ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಮಾ.7 ರಂದು ಮನವಿ ಪತ್ರ ಸಲ್ಲಿಸಿದ್ದು, 14 ದಿನಗಳ ಗಡುವು ನೀಡಲಾಗಿದೆ. ಅಷ್ಟರೊಳಗೆ ನಮ್ಮ ಸಂಘದೊಂದಿಗೆ ಮಾತುಕತೆ ನಡೆಸಿದರೆ ಮುಷ್ಕರವನ್ನು ಕೈ ಬಿಡಲಾಗುತ್ತದೆ ಎಂದು ಅವರು ಹೇಳಿದರು.
ಶಾಂತಿನಗರ, ಮೆಜೆಸ್ಟಿಕ್, ಬೈಯಪ್ಪನಹಳ್ಳಿ ಸೇರಿದಂತೆ ಹಲವು ಮೆಟ್ರೋ ನಿಲ್ದಾಣಗಳ ಬಳಿ ಪ್ರತಿಭಟನಾ ಬ್ಯಾಡ್ಜ್ ಧರಿಸಿ, ಘೋಷಣೆಗಳನ್ನು ಕೂಗಿ ಪ್ರತಿಭಟನಾ ಪ್ರದರ್ಶನದ ಮೂಲಕ ಆಕ್ರೋಶ ವ್ಯಕ್ತಪಡಿಸಲಿದ್ದಾರೆ. ಅಂದು ಮೆಟ್ರೋ ಪ್ರಯಾಣದಲ್ಲಿ ವಿಳಂಬವಾಗಲಿದೆ ಎಂದು ಅವರು ವಿವರಿಸಿದರು.
ಬೇಡಿಕೆಗಳು: ನಮ್ಮ ಸಂಘವನ್ನು ಮಾನ್ಯತೆ ಮಾಡಬೇಕು. ಸೇವಾ ನಿಯಮಗಳ ಬದಲಿಗೆ ಸ್ಥಾಯಿ ಆದೇಶಗಳ ಪಾಲನೆ ಮಾಡಬೇಕು. ನಮ್ಮ ಬೇಡಿಕೆಗಳ ಪಟ್ಟಿಯನ್ನು ಒಪ್ಪಿಕೊಳ್ಳಬೇಕು. ಸಂಘದ ಸದಸ್ಯರಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು. ನೌಕರರ ಕುಂದುಕೊರತೆಗಳನ್ನು ನಿವಾರಿಸಬೇಕು. ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ಧು ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.