ಸಮಾನ-ಸರ್ವರಿಗೂ ಶಿಕ್ಷಣ ಸರಕಾರದ ಧ್ಯೇಯ : ಸಚಿವ ತನ್ವೀರ್ ಸೇಠ್
ಬೆಂಗಳೂರು, ಮಾ. 9: ಶಿಕ್ಷಣ ಎಲ್ಲರಿಗೂ ಎಟಕುವಂತಾಗಲು ಸಮಾನ ಶಿಕ್ಷಣ ಹಾಗೂ ಸರ್ವರಿಗೂ ಶಿಕ್ಷಣ ನೀಡುವುದು ರಾಜ್ಯ ಸರಕಾರದ ಧ್ಯೇಯವಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ಶುಕ್ರವಾರ ಹ್ಯಾವೆ ಸಂಸ್ಥೆ ಸಹಯೋಗದೊಂದಿಗೆ 20 ಸರಕಾರಿ ಪ್ರೌಢಶಾಲೆಗಳಿಗೆ ಗಣಕಯಂತ್ರಗಳನ್ನು ನೀಡುವ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದ ಅವರು, ಸರಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಂತೆ ಉತ್ತಮ ಶಿಕ್ಷಣ ಹಾಗೂ ತಾಂತ್ರಿಕ ಜ್ಞಾನವನ್ನು ನೀಡುವ ದೃಷ್ಟಿಯಿಂದ ಖಾಸಗಿ ಸಂಸ್ಥೆಗಳ ಸಹಾಯದೊಂದಿಗೆ ಉತ್ತಮ ವಾತಾವರಣವನ್ನು ನಿರ್ಮಿಸಲು ಸರಕಾರ ಶ್ರಮಿಸುತ್ತಿದೆ ಎಂದರು.
ಕಾರ್ಪೋರೇಟ್ ಸಂಸ್ಥೆ ಮತ್ತು ಎನ್ಜಿಒಗಳು ಸರಕಾರಿ ಶಾಲೆಗಳನ್ನು ನೇರವಾಗಿ ಆಯ್ಕೆಮಾಡಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬಹುದಾಗಿದೆ. ಬೆಂ.ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ 1ಸಾವಿರ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಸಿದ್ಧರಾಗಿದ್ದಾರೆ ಎಂದರು.
ಶಾಲಾ ಎಸ್ಡಿಎಂಸಿ ಜೊತೆ ಎಂಒಯುಗಳನ್ನು ಮಾಡಿಸಿ ಸಿಎಸ್ಆರ್ ಸಹಯೋಗವನ್ನು ಗುರುತಿಸಿ ಶಾಲಾಭಿವೃದ್ಧಿ ಯೋಜನೆಯನ್ನು ರೂಪಿಸಬಹುದಾಗಿದೆ. ಈ ದಿಸೆಯಲ್ಲಿ ಹ್ಯಾವೆ ಸಂಸ್ಥೆ ತಮ್ಮ ಸಿಎಸ್ಆರ್ ಅನುದಾನದಡಿಯಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ 17 ಪ್ರೌಢಶಾಲೆಗಳು, 1 ಸರಕಾರಿ ಕನ್ನಡ ಮತ್ತು ತಮಿಳು ಪ್ರಾಥಮಿಕ ಶಾಲೆ ಹಾಗೂ 2 ಮೌಲಾನ ಆಝಾದ್ ಮಾದರಿ ಆಂಗ್ಲ ಶಾಲೆಗಳಿಗೆ ಪ್ರತಿ ಶಾಲೆಗೆ 10 ಗಣಕ ಯಂತ್ರಗಳಂತೆ 200 ಗಣಕಯಂತ್ರಗಳನ್ನು ಈಗಾಗಲೇ ವಿತರಿಸಿದ್ದಾರೆ.
ಹ್ಯಾವೆ ಸಂಸ್ಥೆ ಸುಮಾರು 1ಕೋಟಿ ರೂ. ಮೌಲ್ಯದ ಗಣಕಯಂತ್ರಗಳನ್ನು ನೀಡಿರುವುದು ಹರ್ಷ ತಂದಿದೆ, ಗುರುಚೇತನ ಕಾರ್ಯಕ್ರಮದ ಮೂಲಕ 2017-18ನೆ ಸಾಲಿನಲ್ಲಿ 75 ಸಾವಿರ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ಸಾಲಿನಿಂದ 4ರಿಂದ 9ನೆ ತರಗತಿಯ ಒಟ್ಟು 36 ಲಕ್ಷ ಮಕ್ಕಳಿಗೆ ಓಎಂಆರ್ ಶೀಟ್ ಮೂಲಕ ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ 48 ಸಾವಿರ ಸರಕಾರಿ ಶಾಲೆಗಳಿದ್ದು, 48 ಲಕ್ಷ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಶಿಕ್ಷಣ ಮಾನವ ಮೌಲ್ಯಗಳನ್ನು ಕಲಿಸುವ ಮಾರ್ಗವಾಗಬೇಕು ಎನ್ನುವುದು ಸರಕಾರದ ಉದ್ದೇಶವಾಗಿದ್ದು, ಉತ್ತಮ ಶಿಕ್ಷಣ ಹಾಗೂ ಮಕ್ಕಳಿಗೆ ಅವಶ್ಯವಿರುವ ಗಣಕಯಂತ್ರ, ವಿಜ್ಞಾನ ಹಾಗೂ ಗಣಿತ ವಿಷಯ ಕುರಿತಂತೆ ಆಕ್ಟೀಟಿ ಪುಸ್ತಕವನ್ನು ಪ್ರಸ್ತುತ ಸಾಲಿನಿಂದ ಸರಕಾರಿ ಶಾಲೆಗಳಲ್ಲಿ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಸಾಂಕೇತಿಕವಾಗಿ ಮಕ್ಕಳಿಗೆ ಗಣಕಯಂತ್ರಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಪಿ.ಸಿ. ಜಾಫರ್, ಹ್ಯಾವೆ ಕಂಪನಿಯ ವಿಲಿಯಂ ಝಾ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.