ನಾನ್ಯಾಕೆ ಬಿಜೆಪಿಗೆ ಹೋಗಲಿ, ಬೇಕಿದ್ದರೆ ಯಡಿಯೂರಪ್ಪನವರೇ ಕಾಂಗ್ರೆಸ್ ಗೆ ಬರಲಿ: ಶಾಮನೂರು ಶಿವಶಂಕರಪ್ಪ
ದಾವಣಗೆರೆ,ಮಾ.12: ಕಳೆದ 50 ವರ್ಷದಿಂದ ಕಾಂಗ್ರೆಸ್ನಲ್ಲಿದ್ದೇನೆ. ಬಿಎಸ್ವೈ ಜೊತೆಗೆ ನಾಣು ಊಟ ಮಾಡಿದಾಕ್ಷಣ ಬಿಜೆಪಿಗೆ ಸೇರುತ್ತೇನಾ ? ನಾನ್ಯಾಕೆ ಬಿಜೆಪಿಗೆ ಹೋಗಲಿ ? ಬೇಕಿದ್ದರೆ ಯಡಿಯೂರಪ್ಪನವರೇ ಕಾಂಗ್ರೆಸ್ಸಿಗೆ ಬರಲಿ ಎಂದು ಹಿರಿಯ ಕಾಂಗ್ರೆಸ್ ನಾಯಕ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರಿನ ಸಮಾವೇಶವೊಂದರಲ್ಲಿ ಯಡಿಯೂರಪ್ಪ ಜೊತೆಗೆ ಊಟ ಮಾಡಿದೆ. ಆದರೆ, ಅದಕ್ಕಾಗಿ ನಾನು ಬಿಜೆಪಿಗೆ ಹೋಗುತ್ತೇನೆ ಎನ್ನೋದು ಶುದ್ಧಸುಳ್ಳು. ಬೇಕಿದ್ದರೆ ಬಿಎಸ್ವೈ ನಮ್ಮ ಪಕ್ಷಕ್ಕೆ ಬರಲಿ. ಸ್ವಾಗತಿಸುತ್ತೇವೆ ಎಂದು ಅವರು ತಿಳಿಸಿದರು.
ಐವತ್ತು ವರ್ಷಗಳಿಂದಲೂ ಕಾಂಗ್ರೆಸ್ಸಿನಲ್ಲಿರುವವನು ನಾನು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲಾ. ಕಾಂಗ್ರೆಸ್ ಬಿಡುತ್ತೇನೆಂಬುದು ಸುಳ್ಳು ಎಂದ ಅವರು, ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ನಮ್ಮ ಹುಡುಗ. ಒಂದು ಸಲ ಬೈಯ್ಯೋದು, ಮತ್ತೊಂದು ಸಲ ಹೊಗಳೋದು ಮಾಡುತ್ತಿರುತ್ತಾನೆ. ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದಲ್ಲಿ ಯಾವುದೇ ಸಭೆ ನಡೆದರೂ, ಏನೇ ಆದರೂ ಅಂತಹ ಪರಿಣಾಮವಾಗಲೀ, ವ್ಯತ್ಯಾಸವಾಗಲೀ ಏನೂ ಆಗುವುದಿಲ್ಲ. ರಾಜ್ಯ ಸರ್ಕಾರ ನ್ಯಾ.ನಾಗಮೋಹನ ದಾಸ್ ಸಮಿತಿ ವರದಿ ಅಂಗೀಕರಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೂ ಏನೂ ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.