ಶಿವಮೊಗ್ಗ: ಮತದಾರರ ಜಾಗೃತಿ ಕಾರ್ಯಕ್ರಮ
ಶಿವಮೊಗ್ಗ, ಮಾ. 15: 'ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆಗಳು ಅತ್ಯಂತ ಮಹತ್ವದ್ದಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಸದೃಢವಾಗಿ ಬೆಳೆಸಲು, ಚುನಾವಣೆಗಳಲ್ಲಿ ಮತದಾರರು ತಪ್ಪದೆ ಮತದಾನ ಕಾರ್ಯದಲ್ಲಿ ಭಾಗವಹಿಸಬೇಕು' ಎಂದು ಶಿವಮೊಗ್ಗ - ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ) ದ ಆಯುಕ್ತ ಮೂಕಪ್ಪ ಎಂ. ಕರಭೀಮಣ್ಣವರ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ನಗರದ ವಿನೋಬನಗರದಲ್ಲಿರುವ ಸೂಡಾ ಕಚೇರಿ ಆವರಣದಲ್ಲಿ ವಿಧಾನಸಭೆ ಚುನಾವಣೆಯ ಅಂಗವಾಗಿ ಆಯೋಜಿಸಲಾಗಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ 'ಪ್ರತಿಜ್ಞಾ ವಿಧಿ' ಬೋಧಿಸಿದ ನಂತರ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ಮತದಾನ ಕಾರ್ಯವು ಅತ್ಯಂತ ಪವಿತ್ರವಾದುದಾಗಿದೆ. ಹಾಗೆಯೇ ನಾಗರೀಕರಿಗೆ ಸಂವಿಧಾನ ಬದ್ದವಾಗಿ ಲಭ್ಯವಾದ ಮಹತ್ವದ ಹಕ್ಕಾಗಿದೆ. ಈ ಹಕ್ಕನ್ನು ಸಮರ್ಥವಾಗಿ ಚಲಾಯಿಸುವ ಮೂಲಕ, ಉತ್ತಮ ಆಡಳಿತ ವ್ಯವಸ್ಥೆ ಹೊಂದುವ ಅವಕಾಶ ಮತದಾರರಿಗಿದೆ. ಈ ಕಾರಣದಿಂದ ಮತದಾರರು ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಈ ಮೂಲಕ ಚುನಾವಣೆಯ ಘನತೆ - ಗೌರವ ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಖಚಿತಪಡಿಸಿಕೊಳ್ಳಿ: ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಗೆ ಕ್ರಮಕೈಗೊಂಡಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ? ಯಾವ ಭಾಗದಲ್ಲಿದೆ? ಹೆಸರು ತಪ್ಪಾಗಿ ಮುದ್ರಿತವಾಗಿದೆಯೇ? ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು. ಚುನಾವಣಾ ಆಯೋಗದ ವೆಬ್ಸೈಟ್ಗೂ ಭೇಟಿಯಿತ್ತು, ನಿರ್ದಿಷ್ಟ ಪುಟದಲ್ಲಿ ಎಪಿಕ್ ಕಾರ್ಡ್ ಸಂಖ್ಯೆ ನಮೂದಿಸಿಯೂ ತಮ್ಮ ಹೆಸರು ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಮೂಕಪ್ಪ ಎಂ. ಕರಭೀಮಣ್ಣವರ್ ಮತದಾರರಿಗೆ ಸಲಹೆ ನೀಡಿದ್ದಾರೆ.
ಚುನಾವಣೆಯ ದಿನದಂದು ಕಾರ್ಮಿಕರಿಗೆ ಕಡ್ಡಾಯವಾಗಿ ರಜೆ ಘೋಷಣೆ ಮಾಡಬೇಕು. ಈ ಮೂಲಕ ಅವರಿಗೆ ಮತದಾನ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು. ಹಾಗೆಯೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದ ಕಾರ್ಮಿಕರ ಹೆಸರು ಸೇರ್ಪಡೆಗೆ ನಿಯಮಾನುಸಾರ ಗಮನಹರಿಸಬೇಕು ಎಂದು ರಿಯಲ್ ಎಸ್ಟೇಟ್ ಡೆವಲಪರ್ಸ್ಗಳಿಗೆ ಮನವಿ ಮಾಡಿದರು.
'ನನ್ನ ಮತ ನನ್ನ ಹಕ್ಕು' ಎಂಬ ಕಲ್ಪನೆ ಪ್ರತಿಯೋರ್ವ ಮತದಾರರಲ್ಲಿಯೂ ಬರಬೇಕು. ಜೊತೆಗೆ ಮತದಾನ ಕಾರ್ಯವು ಪವಿತ್ರವಾದ ಕಾರ್ಯವಾಗಿದೆ ಎಂಬುವುದರ ಅರಿವಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ನಾನಾ ರೀತಿಯ ಕಾರ್ಯಕ್ರಮಗಳನ್ನು ಸ್ವೀಪ್ ಅಡಿ ಹಮ್ಮಿಕೊಳ್ಳಲಾಗಿದೆ ಇದೇ ಸಂದರ್ಭದಲ್ಲಿ ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಉಪ ನೊಂದಣಾಧಿಕಾರಿ ಕಚೇರಿಯ ಉಪ ನೊಂದಣಾಧಿಕಾರಿ ಇ.ಎಸ್.ರಂಗಸ್ವಾಮಿ, ನಿವೃತ್ತ ಅಧಿಕಾರಿ ಬಾಲಸುಬ್ರಹ್ಮಣ್ಯ, ಸಮನ್ವಯ ಕಾಶಿ, ಸೂಡಾ ಅಧಿಕಾರಿ ಧನಲಕ್ಷ್ಮಿ ಸೇರಿದಂತೆ ಮೊದಲಾದವರಿದ್ದರು.
ಖಚಿತಪಡಿಸಿಕೊಳ್ಳಿ
'ಮತದಾನ ಮಾಡುವುದಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ? ಇಲ್ಲವೆ? ಏನಾದರೂ ದೋಷವಿದೆಯೇ? ಎಂಬುವುದನ್ನು ಮತದಾರರು ಪರಿಶೀಲಿಸಿಕೊಂಡರೆ ಒಳ್ಳೆಯದು. ಇದರಿಂದ ಮತದಾನದ ದಿನದಂದು ಯಾವುದೇ ಗೊಂದಲವಿಲ್ಲದೆ ತಮ್ಮ ಹಕ್ಕು ಚಲಾಯಿಸಬಹುದಾಗಿದೆ. ಮತದಾನ ಕಾರ್ಯವು ಅತ್ಯಂತ ಮಹತ್ವ, ಪವಿತ್ರವಾದ ಕಾರ್ಯವಾಗಿದೆ. ಪ್ರತಿಯೋರ್ವರು ಮತದಾನ ಕಾರ್ಯದಲ್ಲಿ ಭಾಗವಹಿಸಬೇಕು' ಎಂದು ಉಪ ನೊಂದಣಾಧಿಕಾರಿ ಇ.ಎಸ್.ರಂಗಸ್ವಾಮಿಯವರು ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ.