ಮೈಸೂರು: ಮಾ.21 ರಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ರ ಪುಸ್ತಕ ಬಿಡುಗಡೆ
ಮೈಸೂರು,ಮಾ.17: ದಲಿತ ನಾಯಕ ಹಿರಿಯ ಸ್ವಾಭಿಮಾನಿ ರಾಜಕಾರಣಿ ಹಾಗೂ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ರಚಿಸಿರುವ 'ಸ್ವಾಭಿಮಾನ ರಾಜಕಾರಣದ ಹಿನ್ನೆಲೆ ನಂಜನಗೂಡು ವಿಧಾನಸಭಾ ಚುನಾವಣೆ- ವಿಶ್ಲೇಷಣೆ' ಎಂಬ ಪುಸ್ತಕ ಮಾ.21 ರಂದು ಬಿಡುಗಡೆಗೊಳ್ಳಲಿದೆ ಎಂದು ಮಾಜಿ ಮುಡಾ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿ.ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳ ಬಳಗದ ವತಿಯಿಂದ ಕಲಾಮಂದಿರದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.
ಈ ಸಂದರ್ಭ ಹಿರಿಯ ಸಾಹಿತಿ ಡಾ.ಸಿ.ಪಿ ಕೃಷ್ಣಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಪತ್ರಿಕೋಧ್ಯಮಿ ಕೆ.ಬಿ ಗಣಪತಿ ಅವರು ಪುಸ್ತಕ ಕುರಿತು ಮಾತನಾಡಲಿದ್ದಾರೆ. ಈ ಸಂದರ್ಭ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
8 ಬಾರಿ ಲೋಕಸಭಾ ಹಾಗೂ 5 ಬಾರಿ ವಿಧಾನಸಭಾ ಚುನಾವಣೆ ಎದುರಿಸಿರುವ ಹಿರಿಯ ರಾಜಕಾರಣಿ ವಿ. ಶ್ರೀನಿವಾಸ್ ಪ್ರಸಾದ್ ಅವರನ್ನು ಮಂತ್ರಿಮಂಡಲದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಮನನೊಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸ್ವಾಭಿಮಾನದ ನೆಲೆಗಟ್ಟಿನಲ್ಲಿ ಮತ್ತೊಮ್ಮೆ ಚುನಾವಣೆ ಎದುರಿಸಿ, ಇದೀಗ ಈ ಪುಸ್ತಕ ರಚಿಸಿದ್ದಾರೆ. ತಮ್ಮ ಈ ಪುಸ್ತಕದಲ್ಲಿ ಅವರ ರಾಜಕೀಯ ಪ್ರವೇಶ, ಸಿದ್ದರಾಮಯ್ಯ ಅವರ ರಾಜಕೀಯ ಪ್ರವೇಶ ಅವರ ವರ್ತನೆ ಬಗ್ಗೆ ಅಂತರಾಳದಲ್ಲಿ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ. ಅದರಂತೆ ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮತ್ತು ಅದಕ್ಕೆ ಕಾರಣ ಕುರಿತು ವಿಶ್ಲೇಷಿಸಿ ಸುಮಾರು 100 ಪುಟಗಳಲ್ಲಿ ಸಮಗ್ರವಾಗಿ ಲೇಖನವನ್ನು ಬರೆದಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಮಾನಿ ಬಳಗದ ಮುಖಂಡರಾದ ವೆಂಕಟರಾಜು, ಜೆ.ರವಿ, ಶಿವಕುಮಾರ್ ಮತ್ತು ಭರತ್ ರಾಮಸ್ವಾಮಿ ಹಾಜರಿದ್ದರು.