ಬಿಜೆಪಿ ಸರ್ಕಾರ ಹಕ್ಕು ಪತ್ರ ನೀಡುವುದನ್ನು ಬಿಟ್ಟು ಜೈಲು ಶಿಕ್ಷೆ ವಿಧಿಸಿತ್ತು: ಸಚಿವ ಕಾಗೋಡು ತಿಮ್ಮಪ್ಪ
ನೂತನ ಕೆಜಿಎಫ್ ತಾಲೂಕು ಉದ್ಘಾಟನಾ ಸಮಾರಂಭ
ಕೋಲಾರ,ಮಾ.22: ‘ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕು ಪತ್ರ ನೀಡುವುದನ್ನು ಬಿಟ್ಟು ಹಿಂದಿನ ಬಿಜೆಪಿ ಸರ್ಕಾರ ಜೈಲು ಶಿಕ್ಷೆ ವಿಧಿಸಿತ್ತು, ಅದನ್ನು ತಪ್ಪಿಸುವ ಉದ್ದೇಶದಿಂದ ಹಕ್ಕು ಪತ್ರ ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ’ ಎಂದು ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಜಿಲ್ಲೆಯ ನೂತನ ಕೆಜಿಎಫ್ ತಾಲೂಕು ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಬಡವರಿಗೆ ಬಿಜೆಪಿ ಸರ್ಕಾರ ಹಕ್ಕು ಪತ್ರ ವಿತರಣೆ ಮಾಡುವುದನ್ನು ಬಿಟ್ಟು, ಜೈಲು ಶಿಕ್ಷೆ ಹಾಗೂ ಇಷ್ಟು ವರ್ಷ ಸಜೆ ಎಂದು ಶಿಕ್ಷೆ ವಿಧಿಸಿತ್ತು. ಈ ತೂಗುಗತ್ತಿಯಿಂದ ತಪ್ಪಿಸಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸಿದೆ ಎಂದು ಹೇಳಿದರು.
ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವ ವ್ಯಕ್ತಿಗಳು ಕಂದಾಯ ಇಲಾಖೆಗೆ ಅರ್ಜಿ ಹಾಕಿಕೊಂಡರೆ ಹಕ್ಕು ಪತ್ರ ವಿತರಿಸಿದರೆ, ಸಕ್ರಮ ಮಾಡಿ ಹಕ್ಕು ಪತ್ರ ನೀಡಲಾಗುವುದು ಎಂದು ವಿವರಿಸಿದರು.
‘ಕಂದಾಯ ಇಲಾಖೆ ಮಾತೃ ಇಲಾಖೆ ಇದ್ದಂತೆ, ಇಲ್ಲಿನ ಅಧಿಕಾರಿಗಳು ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಸೇವೆಗೆ ಗೌರವ ಸಿಗುತ್ತದೆ. ನಮ್ಮ ರಾಜ್ಯದಲ್ಲಿ ಸಂಸ್ಕೃತಿಯ ಕೊರತೆಯಿದೆ. ಇದರಿಂದಾಗಿ ಕಂದಾಯ ಇಲಾಖೆಯ ವಿವಿಧ ವಿಭಾಗಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳು ಬಾಕಿ ಇದೆ. ಹೇಗೆ ವಿಲೇವಾರಿ ಮಾಡಬೇಕು ಎಂಬುದರ ಬಗ್ಗೆ ಅಧಿಕಾರಿಗಳಿಗೆ ಪಾಠ ಮಾಡಿದ್ದೇನೆ, ಆದರೂ ಬಾಕಿ ಉಳಿದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಜಿಎಫ್ ಎಂದರೆ ಕೇವಲ ಭೂ ಪ್ರದೇಶವಲ್ಲ, ಇಡೀ ಪ್ರಪಂಚಕ್ಕೆ ಚಿನ್ನ ಕೊಟ್ಟಂತಹ ಪ್ರದೇಶ. ಬ್ರಿಟೀಷರ ಕಾಲದಲ್ಲಿ ರಾಷ್ಟ್ರದ ಗಮನ ಸೆಳೆದಂತಹ ಕೆಜಿಎಫ್ನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂಬ ಬಹುದಿನಗಳ ಬೇಡಿಕೆ ಈಡೇರಿದ್ದು, ಪಾರದರ್ಶಕ ಆಡಳಿತ ನೀಡಲು ಜನರು ಸಹಕಾರ ನೀಡಬೇಕು ಎಂದು ಕೋರಿದರು.
ಸ್ವಚ್ಛ ಮತ್ತು ಪಾರದರ್ಶಕ ಆಡಳಿತ ನಡೆಸಿದರೆ ಜಪಾನನ್ನು ಮೀರಿಸಬಹುದು. ಕಂದಾಯ ಇಲಾಖೆ ಮಾತೃ ಇಲಾಖೆ ಇದ್ದಂತೆ. ಹೆಣ್ಣಿಗೆ ಅವಕಾಶ ಕಲ್ಪಿಸಿಕೊಟ್ಟರೆ ಸಮಾಜವನ್ನು ಬದಲಾಯಿಸುತ್ತದೆ ಎಂದು ರಾಜ್ಯ ಸರ್ಕಾರ ಪ್ರತಿ ಕ್ಷೇತ್ರದಲ್ಲೂ ಶೇ.50ರಷ್ಟು ಮೀಸಲಾತಿ ಕಲ್ಪಿಸಿದೆ. ತಾಯಿ ಸ್ಥಾನದಲ್ಲಿ ನಿಂತು ಸಮಾಜ ಬದಲಾವಣೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಸಕಾಲ ಪದ್ದತಿ ಜಾತಿಗೆ ತಂದ ಮೇಲೆ ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ. ಕಾನೂನು ಅಡಿಯಲ್ಲಿ ಜನರು ಸಹ ನಿಯಾಮಾನುಸಾರ ಅರ್ಜಿ ಹಾಕಬೇಕು. ಹೊಸ ಸಂಸ್ಕೃತಿ ಜಾರಿಗೆ ತರಲು ಸಹಕರಿಸಬೇಕು. ಆಡಳಿತ ಚಿನ್ನದಂತೆ ಎದ್ದು ಕಾಣಬೇಕು ಎಂದು ಹೇಳಿದರು.
ಕೆಜಿಫ್ನಲ್ಲಿ ಕಾರ್ಮಿಕ ಇಲಾಖೆ ನಿರ್ಮಿಸಿರುವ ಮನೆಗಳಲ್ಲೇ ಕಾರ್ಮಿಕರು ವಾಸವಿದ್ದಾರೆ. ಆ ಭೂಮಿ ಕೇಂದ್ರ ಸರ್ಕಾರದ ಅದೀನದಲ್ಲಿ ಇರುವುದರಿಂದ 94ಸಿ ಅಡಿಯಲ್ಲಿ ಹಕ್ಕು ಪತ್ರ ಕೊಡಲು ಬರುವುದಿಲ್ಲ, ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
‘ಜಪಾನ್ ಮಾದರಿಯಲ್ಲಿ ಭೂ ದಾಖಲೆಗಳನ್ನು ಪರಿಸಲು ರಾಜ್ಯದಲ್ಲಿ ಕ್ರಮಕೈಗೊಳ್ಳಬೇಕು’ ಎಂದು ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು. ಭೂ ದಾಖಲೆ ಸರಿಪಡಿಸಿಕೊಳ್ಳಲು ಕಂದಾಯ ಇಲಾಖೆಗೆ ಅರ್ಜಿ ಹಾಕಿದರೆ ತಿಂಗಳುಗಳು ಕಳೆದರೂ ಪರಿಹಾರ ಸಿಗುವುದಿಲ್ಲ. ಇದರಿಂದಾಗಿ ಜಪಾನ್ ಮಾದರಿ ಪದ್ದತಿಯನ್ನು ಇಲ್ಲೂ ಅನುಷ್ಠಾನಗೊಳಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಹಿಂದೆ ಕೇಂದ್ರದಲ್ಲಿ ಎನ್ಡಿಎ ಸರ್ಕಾರದ ಅಧಿಕಾರದಲ್ಲಿದ್ದಾಗ ಅಂದಿನ ಪ್ರಧಾನ ಮಂತ್ರಿ ವಾಜಪೇಯಿ ಅವರು ಕೆಜಿಎಫ್ನ ಬಿಜಿಎಂಎಲ್ ಗಣಿಯನ್ನು ಮುಚ್ಚಲಾಯಿತು. ಇದರಿಂದಾಗಿ ಸಾಕಷ್ಟು ಕಾರ್ಮಿಕ ಕುಟುಂಬಗಳು ಬೀದಪಲಾಗಿದ್ದು, ಅವರ ಮಕ್ಕಳಿಗೆ ಉದ್ಯೋಗದ ಅವಕಾಶ ಕಲ್ಪಿಸಲು ಬೃಹತ್ ಕೈಗಾರಿಕೆ ಕೇಂದ್ರ ಸ್ಥಾಪನೆ ಮಾಡಲು ಚಿಂತಿಸಲಾಗಿದೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ಗ್ಲೋಬಲ್ ಟೆಂಡರ್ ಮೂಲಕ ಗಣಿ ಆರಂಭಿಸುವಂತೆ ಸೂಚಿಸಿತ್ತು. ಆದರೆ ಕೇಂದ್ರ ಬಿಜೆಪಿ ಕೇಂದ್ರ ಸರ್ಕಾರ ಜಿಂಕ್, ಹೋಲ್ ಇತರೆ ಲೋಹಗಳನ್ನು ಹೊರತು ಪಡಿಸಿ ಟೆಂಡರ್ ಕರೆಯುವಂತೆ ಆದೇಶ ಮಾಡಿತು. ಈ ಗೊಂದಲದಿಂದ ಕುಂಠಿತಗೊಂಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಜಿಎಫ್ನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂಬುದು ಬಹುದಿನಗಳ ಬೇಡಿಕೆ ಈಡೇರಿದೆ. ಜಪಾನ್ ಮಾದರಿಯಲ್ಲಿ ಕೋಲಾರ ಜಿಲ್ಲೆಯನ್ನು ನಿರ್ಮಾಣ ಮಾಡಬೇಕು. ಖಾತೆ, ಪೋಡಿಗಾಗಿ ರೈತರು ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು.
ಶಾಸಕಿ ವೈ.ರಾಮಕ್ಕ, ನಗರಸಭೆ ಅಧ್ಯಕ್ಷ ಮುರಳಿ, ಜಿಲ್ಲಾಧಿಕಾರಿ ಜಿ.ಸತ್ಯವತಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಶುಭ ಕಲ್ಯಾಣ್, ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಲೋಕೇಶ್ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕಿ ರೂಪ ಶಶೀಧರ್ ಭಾಗವಹಿಸಿದ್ದರು