ಚಿಕ್ಕಮಗಳೂರು: ಎಎಸ್ಸೈ ಯಿಂದ ಅತ್ಯಾಚಾರಕ್ಕೆ ಯತ್ನ; ಆರೋಪ
ಆರೋಪಿ ಎಎಸ್ಸೈ ಬಂಧನ; ಜಾಮೀನು
ಚಿಕ್ಕಮಗಳೂರು, ಮಾ.24: ಮಹಿಳೆಯೊಬ್ಬರ ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂಬ ಆರೋಪದಡಿ ಜಿಲ್ಲೆಯ ಎನ್.ಆರ್.ಪುರ ಪೊಲೀಸ್ ಠಾಣೆಯ ಎಎಸ್ಸೈ ಅವರನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ಶನಿವಾರ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಪೊಲೀಸ್ ಠಾಣೆಯ ಎಎಸ್ಸೈ ಕುಮಾರನಾಯ್ಕ ಎಂಬವರೇ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಬಂಧನಕ್ಕೊಳಗಾದ ಆರೋಪಿಯಾಗಿದ್ದು, ಶುಕ್ರವಾರ ಸಂಜೆ ಎನ್.ಆರ್.ಪುರ ತಾಲೂಕಿನ ಕೆರೆಮನೆ ಗ್ರಾಮಕ್ಕೆ ಎಎಸ್ಸೈ ಕುಮಾರನಾಯ್ಕ್ ಚುನಾವಣಾ ಕರ್ತವ್ಯದ ಮೇಲೆ ಗಸ್ತು ಹೋಗಿದ್ದರೆನ್ನಲಾಗಿದ್ದು, ಈ ವೇಳೆ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯೊಬ್ಬರ ಕರ್ತವ್ಯ ನಿರ್ವಹಿಸುರುವ ಬಗ್ಗೆ ಸಹಿ ಪಡೆಯಲು ಹೋಗಿದ್ದರು. ಈ ವೇಳೆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಅತ್ಯಾಚಾರಕ್ಕೆ ಯತ್ನಸಿದ್ದಾರೆಂದು ಕೆರೆಮನೆ ಗ್ರಾಮದ ಕೆಲ ನಾಗರಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಮಲೈ ಅವರಿಗೆ ಶನಿವಾರ ದೂರವಾಣಿ ಮೂಲಕ ಮಾಹಿತಿ ನೀಡಿ ಆರೋಪಿಸಿದ್ದರು.
ಘಟನೆ ಸಂಬಂಧ ಎಸ್ಪಿ ಅಣ್ಣಾಮಲೈ ಮಾರ್ಗದರ್ಶನದಲ್ಲಿ ಕೊಪ್ಪ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಕೆರೆಮನೆ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಮಹಿಳೆ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದು ಘಟನೆಯ ಸತ್ಯಾಸತ್ಯತೆ ಪರಿಶೀಲಿಸಿದ್ದಾರೆ. ಪರಿಶೀಲನೆಯಲ್ಲಿ ಎಎಸ್ಸೈ ಅತ್ಯಾಚಾರಕ್ಕೆ ಯತ್ನಿಸಿರವುದು ಮೇಲ್ನೋಟಕ್ಕೆ ಸತ್ಯ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಎನ್.ಆರ್.ಪುರ ಠಾಣೆಯ ಪೊಲೀಸರು ಆರೋಪಿ ಕುಮಾರನಾಯ್ಕನನ್ನು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಪ್ರಕಣರಣ ವಿಚಾರಣೆ ನಡೆಸಿರುವ ನ್ಯಾಯಾಧೀಶರು ಸದ್ಯ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆಂದು ತಿಳಿದು ಬಂದಿದೆ.