ದಾವಣಗೆರೆ: ಟಗರು ಚಿತ್ರದ ನಾಯಕ ಶಿವರಾಜಕುಮಾರ್ ಹಾಗೂ ಚಿತ್ರತಂಡದಿಂದ ಮೆರವಣಿಗೆ
ಟಗರು ಚಿತ್ರ ಯಶಸ್ವಿ 50ನೇ ದಿನ ಪೂರೈಕೆ
ದಾವಣಗೆರೆ,ಮಾ.26: ಟಗರು ಚಿತ್ರ ಯಶಸ್ವಿ 50ನೇ ದಿನ ಪೂರೈಸಿದ ಹಿನ್ನಲೆಯಲ್ಲಿ ಸೋಮವಾರ ಟಗರು ಚಿತ್ರ ತಂಡದ ನಾಯಕ ಶಿವರಾಜಕುಮಾರ್ ಹಾಗೂ ಚಿತ್ರತಂಡ ದಾವಣಗೆರೆಯಲ್ಲಿ ಮೆರವಣಿಗೆ ನಡೆಸಿದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ತೆರೆದ ವಾಹನದಲ್ಲಿ ನಟ ಶಿವರಾಜ್ಕುಮಾರ್ ಹಾಗೂ ಚಿತ್ರತಂಡ ಟಗರು ಗೀತೆಯೊಂದಿಗೆ ಮೆರವಣಿಗೆ ನಡೆಸಿದರು. ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
'ಟಗರು ಚಲನಚಿತ್ರದಲ್ಲಿ ಉತ್ತಮ ಸಾಮಾಜಿಕ ಸಂದೇಶವಿದ್ದು, ಜನರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ರಾಜ್ಯದ ಎಲ್ಲಾ ಕಡೆಗಳಲ್ಲಿ ಚಿತ್ರಕ್ಕೆ ಒಳ್ಳೆಯ ಸ್ಪಂದನೆ ದೊರೆತಿರುವುದರಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ಶಿವಲಿಂಗ, ಮೈಲಾರಿ ಹೀಗೆ ಅನೇಕ ಚಿತ್ರಗಳಿಗೆ ಅಭಿಮಾನಿಗಳು ಸ್ಪಂದಿಸಿದ್ದಾರೆ. ದಾವಣಗೆರೆ ಜನತೆ ಚಿತ್ರಗಳಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ನಿಮ್ಮ ಆಶೀರ್ವಾದ ಹೀಗೆ ಇರಲಿ' ಎಂದು ಶಿವರಾಜಕುಮಾರ್ ಹೇಳಿದರು.
ಕುಣಿದು ಕುಪ್ಪಳಿಸಿದ ಶಿವಣ್ಣ:
ನಗರದ ಅಶೋಕ ಚಿತ್ರಮಂದಿರದಲ್ಲಿ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ನಟ ಶಿವರಾಜ್ಕುಮಾರ್ ಟಗರು ಚಿತ್ರದ ‘ವಾರೇ ನೋಟ ನೋಡೈತೇ’ ಚಿತ್ರಕ್ಕೆ ಕುಣಿದು ಕುಪ್ಪಳಿಸಿ, ಮನರಂಜಿಸಿದರು.
20 ನಿಮಿಷ ಕಾಯ್ದ ಚಿತ್ರತಂಡ:
ಅಶೋಕ್ ಚಿತ್ರಮಂದಿರ ಬಳಿ ರೈಲು ಬರುವ ಹಿನ್ನಲೆಯಲ್ಲಿ ರೇಲ್ವೆ ಗೇಟ್ ಹಾಕಿದ್ದರಿಂದ ನಟ ಶಿವರಾಜ್ಕುಮಾರ್ ಹಾಗೂ ತಂಡ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಊರಿಬಿಸಿಲಿನಲ್ಲಿಯೇ ಕಾಯುವಂತಾಯಿತು.
ಚಿತ್ರತಂಡದ ಶ್ರೀಕಾಂತ್, ನಟ ಧನಂಜಯ್, ಶಿವರಾಜ್ಕುಮಾರ್ ಅಭಿಮಾನಿಗಳ ಸಂಘದ ಎಚ್. ದುರುಗೇಶ್, ಯೋಗೇಶ್, ಕರ್ನಾಟಕ ಸಮರಸೇನೆ ಕಾರ್ಯಾಧ್ಯಕ್ಷ ಬಿ. ವಾಸುದೇವ ಮತ್ತಿತರರಿದ್ದರು.
ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ: ನಂತರ ಮಾತನಾಡಿದ ನಟ ಶಿವರಾಜ್ ಕುಮಾರ್, ನಾವು ಕಲಾವಿದರು. ನಮಗೆ ರಾಜಕೀಯ ಬೇಕಿಲ್ಲ. ಪತ್ನಿ ಗೀತಾ ಪ್ರಚಾರಕ್ಕೆ ಹೋಗುತ್ತಾರೆ. ಆದರೆ, ನಾನು ಹೋಗುವುದಿಲ್ಲ. ನನಗೆ ರಾಜಕೀಯ ಆಸಕ್ತಿಯೂ ಇಲ್ಲ ಎಂದ ಅವರು, ನಟ ಉಪೇಂದ್ರ ಅವರು ರಾಜಕೀಯಕ್ಕೆ ಹೋಗಿದ್ದು ಸಂತಸ ತಂದಿದೆ. ಒಳ್ಳೆಯ ಕಾರ್ಯಗಳಿಗೆ ನಮ್ಮ ಸಹಕಾರವಿದೆ ಎಂದರು.