ಕೋಲಾರ: 24 ಗಂಟೆಯೊಳಗೆ ಫ್ಲೆಕ್ಸ್, ಬ್ಯಾನರ್ ತೆರವು: ಜಿಲ್ಲಾಧಿಕಾರಿ ಜಿ.ಸತ್ಯವತಿ
ಚುನಾವಣೆ ನೀತಿ ಸಂಹಿತೆ ಜಾರಿ
ಕೋಲಾರ,ಮಾ.27 ಕರ್ನಾಟಕ ವಿಧಾನಸಭಾ ಚುನಾವಣೆ-2018 ರ ದಿನಾಂಕ ಪ್ರಕಟವಾಗಿದ್ದು, ಈ ಕ್ಷಣದಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. 24 ಗಂಟೆಯೊಳಗೆ ಹೆದ್ದಾರಿ ಫಲಕಗಳು ಪ್ಲೆಕ್ಸ್, ಬ್ಯಾನರ್ ಗಳನ್ನು ತೆರವುಗೊಳಿಸಲಾಗುವುದು ಹಾಗೂ ರಾಜಕೀಯ ವ್ಯಕ್ತಿಗಳ ಭಾವಚಿತ್ರಗಳು ಹಾಗೂ ಮಾಹಿತಿಯನ್ನು ವೆಬ್ಸೈಟ್ಗಳಿಂದ ತೆಗೆದುಹಾಕುವಂತೆ ಸೂಚಿಸಲಾಗುವುದು ಎಂದು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿ.ಸತ್ಯವತಿಯವರು ತಿಳಿಸಿದರು.
ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್-17, 2018 ರಿಂದ ನಾಮಪತ್ರ ಸಲ್ಲಿಕೆ, ಏಪ್ರಿಲ್-24, 2018 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಎಪ್ರೀಲ್ 25, 2018 ರಂದು ನಾಮಪತ್ರಗಳ ಪರಿಶೀಲನೆ, ಏಪ್ರಿಲ್ 27, 2018 ರಂದು ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದು, ಮೇ 12, 2018 ರಂದು ಮತದಾನ ನಡೆದು ಮೇ 15, 2018 ಕ್ಕೆ ಮತ ಏಣಿಕೆ ನಡೆಯಲಿದ್ದು, ಎಲ್ಲಾ ಚುನಾವಣಾ ಪ್ರಕ್ರಿಯೆಗಳು ಮೇ 18, 2018 ರೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ನೀತಿ ಸಂಹಿತೆ ಜಾರಿಯಾಗಿರುವುದರಿಂದ ಚುನಾಯಿತ ಸಂಸ್ಥೆಗಳ ಅಧ್ಯಕ್ಷರು, ನಿಗಮ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ವಾಹನಗಳನ್ನು ಈ ಕೂಡಲೇ ಹಿಂದಕ್ಕೆ ಪಡೆಯಲಾಗುವುದು. ಜಿಲ್ಲೆಯ 20 ಕಡೆ ಚೆಕ್ಪೋಸ್ಟ್ ಸ್ಥಾಪಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಫ್ಲಯಿಂಗ್ ಸ್ಕ್ವಾಡ್ನ 3 ತಂಡಗಳಾಗಿ ಜಿಲ್ಲೆಗೆ ಒಟ್ಟು 48 ತಂಡಗಳನ್ನು ರಚಿಸಲಾಗುವುದು. 24*7 ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು, ದೂರವಾಣಿ ಸಂಖ್ಯೆಯನ್ನು ಇಂದು ಸಂಜೆಯೊಳಗೆ ಚುನಾವಣಾ ಆಯೋಗವು ನೀಡಲಿದೆ ಎಂದರು.
ಕೋಲಾರದಲ್ಲಿ ಒಟ್ಟು 11,83,967 ಜನ ಮತದಾರರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 1 ಮತಗಟ್ಟೆಗೆ 1200 ಜನ ಮತದಾರರು, ನಗರ ಪ್ರದೇಶಕ್ಕೆ 1 ಮತಗಟ್ಟೆಗೆ 1400 ಜನ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಕೋಲಾರ, ಮಾಲೂರು ಹಾಗೂ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಗಳನ್ನು ವೆಚ್ಚ ಸೂಕ್ಷ್ಮ ಕ್ಷೇತ್ರಗಳೆಂದು ಪರಿಗಣಿಸಲಾಗಿದ್ದು, ಈ ಕ್ಷೇತ್ರಗಳಿಗೆ ಪ್ರತ್ಯೇಕ ವೆಚ್ಚ ವೀಕ್ಷಕರನ್ನು ನೇಮಿಸಲಾಗುವುದು ಎಂದು ತಿಳಿಸಿದರು.
ಯಾವುದೇ ವ್ಯಕ್ತಿಯು 50 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ದಾಖಲೆ ಇಲ್ಲದೆ ತೆಗೆದುಕೊಂಡು ಹೋಗುವಂತಿಲ್ಲ. ಒಬ್ಬ ಅಭ್ಯರ್ಥಿಯು ಚುನಾವಣಾ ವೆಚ್ಚವಾಗಿ 28 ಲಕ್ಷದವರೆಗೆ ಖರ್ಚು ಮಾಡಬಹುದಾಗಿದೆ. ಯಾವುದೇ ಜಾಹೀರಾತುಗಳನ್ನು ಪ್ರಕಟಿಸುವ ಮುನ್ನ ಎಂ.ಸಿ.ಎಂ.ಸಿ ಕಮಿಟಿಯಿಂದ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಕೆ.ವಿದ್ಯಾಕುಮಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ಉಪಸ್ಥಿತರಿದ್ದರು.