ಸಾಮೂಹಿಕ ವಿವಾಹ ಬಡವರಿಗೆ ವರದಾನವಾಗಲಿದೆ: ನಟಿ ಮಾಲಾಶ್ರೀ
ಚಿಕ್ಕಮಗಳೂರು, ಮಾ.28: ಸರಳ ಸಾಮೂಹಿಕ ವಿವಾಹಗಳು ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸೀಮಿತಗೊಳ್ಳಬಾರದು. ನಗರ ಪ್ರದೇಶಗಳಲ್ಲೂ ಇಂತಹ ಮದುವೆಗಳಾದಾಗ ಅನಗತ್ಯ ಖರ್ಚುಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಚಲನಚಿತ್ರ ನಟಿ ಮಾಲಾಶ್ರಿ ಹೇಳಿದರು.
ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಆಶ್ರಯ ಸಾಮಜಿಕ ಸೇವಾ ಸಂಸ್ಥೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀಮಂತರು, ಬಡವರೆಂಬ ಬೇಧವನ್ನು ಬದಿಗೊತ್ತಿ ಸರಳ ರೀತಿಯಲ್ಲಿ ಸಾಮೂಹಿಕ ವಿವಾಹಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು. ಸರಳ ರೀತಿಯ ಮದುವೆಯಿಂದ ಬಡವರಿಗೆ ವರದಾನವಾಗಲಿದೆ. ಇಂತಹ ಮದುವೆಗಳು ಸಮಾಜದಲ್ಲಿ ಇನ್ನಷ್ಟು ಹೆಚ್ಚಾದಾಗ ಹೆಣ್ಣು ಹೆತ್ತವರಿಗೆ ಮಗಳ ಮದುವೆಯ ಬಗ್ಗೆ ಹೆಚ್ಚು ಕಷ್ಟ ಉಂಟಾಗಲಾರದು ಎಂದು ತಿಳಿಸಿದರು.
ನೂತನ ವಧು-ವರರು ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಒಂದು ಮಗು ಸಾಕೆನ್ನುವ ತೀರ್ಮಾನಕ್ಕೆ ಬಂದಿದ್ದೀರಿ. ಒಂದೇ ಮಗು ಸಾಕೆಂದು ಸುಮ್ಮನಿದ್ದರೆ ಕುಟುಂಬದ ಬೆಳವಣಿಗೆಗೆ ಕಷ್ಟಕರವಾಗಬಹುದು. ಹಾಗಾಗಿ 2 ಮ್ಕಕಳು ಬೇಕೆನ್ನುವ ನಿರ್ಧಾರಕ್ಕೆ ಬನ್ನಿ ಎಂದು ನೂತನ ವದುವರರಿಗೆ ಮಾಲಾಶ್ರೀ ಕಿವಿಮಾತು ಹೇಳಿದರು.
ಪ್ರಮಾಣವಚನ ಸ್ವೀಕಾರ:
ಮದುವೆ ಶುಭಗಳಿಗೆಯಲ್ಲಿ ಪರಸ್ಪರ ದಂಪತಿಯಾಗಿರುವ ನಾವು, 2 ದೇಹದ ಒಂದೇ ಜೀವಿಯಂತೆ ಅನ್ಯೂನತೆಯಿಂದ ಬಾಳುತ್ತೇವೆ. ಇಂದಿನಿಂದ ಎಲ್ಲಾ ಸುಖ ದುಖಃಗಳಲ್ಲಿ ಸಮಭಾಗಿಗಳಾಗುತ್ತೇವೆ. ಸರಳ ಮದುವೆ ಮೂಲಕ ಯಾವುದೇ ರೀತಿಯ ಆರ್ಥಿಕ ಹೊರೆಯಾಗದಂತೆ ವಿವಾಹ ಮಾಡಿಕೊಂಡಿರುವ ನಾವುಗಳು, ಇತರರಿಗೆ ಮಾದರಿಯಾಗಿ ಸರಳ ಮದುವೆಯಾಗುವಂತೆ ಪ್ರೋತ್ಸಾಹಿಸುತ್ತವೆ. ದೇಶದ ಸಂವಿಧನದಲ್ಲಿ ನಂಬಿಕೆಯುಳ್ಳವವರಾಗಿ ಆದರ್ಶ, ಜಾತ್ಯಾತೀತ, ಸಹೋದರತೆ, ಸಮಾನತೆ ಸಹಕಾರಕ್ಕಾಗಿ ಶ್ರಮಿಸುತ್ತೇವೆ. ಮಹನೀಯದರಾದ ಬುದ್ದ, ಬಸವ, ಅಂಬೇಡ್ಕರ್ ಕುವೆಂಪು ಅವರ ಸಮಾನತೆಯ ಚಿಂತನೆ ಜೀವನದಲ್ಲಿ ಅಳವಡಿಸಿಕೊಂಡು ಬಾಳುತ್ತೇವೆ ಎಂದು ವದುವರರಿಗೆ ಕಾರ್ಯಕ್ರಮದ ಆಯೋಜಕ ಎಂ.ಎಸ್.ಅನಂತ್ ಪ್ರಮಾಣವಚನ ಭೋಧಿಸಿದರು.
ಇದಕ್ಕೂ ಮುನ್ನ 19 ಜೋಡಿಗಳಿಗೆ ಚಿತ್ರನಟಿ ಮಾಲಾಶ್ರೀ ಮಾಂಗಲ್ಯ ವಿತರಿಸಿದರು. ಪ್ರಾರಂಭದಲ್ಲಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ 19 ಜೋಡಿ ವದೂವರರು ಪೂಜೆ ಸಲ್ಲಿಸಿ, ನಂತರ ವಾಧ್ಯದೊಂದಿಗೆ ಮೆರವಣಿಗೆ ಮೂಲಕ ಮೂಹೂರ್ತ ನಡೆಯುವ ಸ್ಥಳ ಅಡ್ಯಂತಾಯ ರಂಗಮಂದಿರಕ್ಕೆ ಆಗಮಿಸಿದರು.
ಸಾಮೂಹಿಕ ವಿವಾಹಕ್ಕೂ ತಟ್ಟಿದ ನೀತಿ ಸಂಹಿತೆಯ ಬಿಸಿ: ಮಾ.27ರಿಂದ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಸಾಮೂಹಿಕ ವಿವಾಹಕ್ಕೆ ಕೆಲ ಅಡೆತಡೆಗಳು ಎದುರಾದವು. 17 ವರ್ಷದಿಂದ ಸರಳ ಸಾಮೂಹಿಕ ವಿವಾಹ ಆಯೋಜಿಸಿಕೊಂಡು ಬಂದಿದ್ದ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಅವರು, ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಕೊನೆ ಕ್ಷಣದಲ್ಲಿ ಬೂರಿ ಭೋಜನವನ್ನು ಕೈಬಿಟ್ಟು, ಸರಳ ರೀತಿಯಲ್ಲಿ ಊಟದ ವ್ಯವಸ್ಥೆ ಮಾಡಲಾಯಿತು. ರಾಜಕಾರಣಿಗಳು ಮದುವೆ ಕಾರ್ಯದಿಂದ ದೂರ ಉಳಿಯುವಂತಾಯಿತು. ಪೊಲೀಸರ ಕಣ್ಗಾವಲಿನಲ್ಲಿ ಮದುವೆ ಕಾರ್ಯ ಯಶಸ್ವಿಯಾಗಿ ನಡೆಯಿತು.
ಜಿ.ಪಂ. ಸದಸ್ಯ ಪ್ರಭಾಕರ್, ತಾ.ಪಂ. ಸದಸ್ಯ ದೇವರಾಜು, ಪ.ಪಂ. ಅಧ್ಯಕ್ಷೆ ರಮೀಜಾಭಿ, ಸದಸ್ಯರಾದ ಪಾರ್ವತಮ್ಮ, ಸುಲೋಚನಾ, ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಬಿ.ಎಸ್.ಜಯರಾಂ, ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಆಶ್ರಯ ಸಾಮಜಿಕ ಸೇವಾ ಸಂಸ್ಥೆ ಕಾರ್ಯದರ್ಶಿ ಹೊಸಕೆರೆ ರಮೇಶ್, ನಿದೇರ್ಶಕರಾದ ನಯನ ಮೋಟಮ್ಮ, ಎಂ.ಎಸ್.ಅನಂತ್, ಮುಖಂಡರಾದ ಬಿ.ಎಂ.ಶಂಕರ್, ವೆಂಕಟರಾಮ್, ಚೇತನಾ ಸಗುನಯ್ಯ, ಎನ್.ಆರ್.ನಾಗರತ್ನ, ಅಕ್ರಮ್ ಹಾಜಿ, ಎಂ.ಎಂ.ಲಕ್ಷ್ಮಣ್ಗೌಡ, ಹೇಮಶೇಖರ್, ಹಾಲಯ್ಯ, ಲೋಕವಳ್ಳಿ ರಮೇಶ್, ಬಕ್ಕಿ ಮಂಜು ಮತ್ತಿತರರು ಉಪಸ್ಥಿತರಿದ್ದರು.