ತುಮಕೂರು: ತಬ್ಬಲಿಯ ಶಿಕ್ಷಣಕ್ಕೆ ಆಸರೆಯಾದ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್
ತುಮಕೂರು.ಏ.03: ಐಎಎಸ್ ಅಧಿಕಾರಿಗಳೆಂದರೆ ಕೇವಲ ಕಾನೂನಿನ ಅಡಿಯಲ್ಲಿಯೇ ಕೆಲಸ ಮಾಡುವವರು, ಮಾನವೀಯತೆ, ಅನುಕಂಪಕ್ಕೆ ಇವರ ಬಳಿ ಅವಕಾಶವೇ ಇಲ್ಲ ಎಂಬ ಮಾತುಗಳನ್ನು ಅನೇಕ ಜನ ಐಎಎಸ್ ಅಧಿಕಾರಿಗಳ ಕಾರ್ಯ ವೈಖರಿಯನ್ನು ನೋಡಿದಾಗ ಅನ್ನಿಸುತ್ತದೆ. ಇದಕ್ಕೆ ತದ್ವಿರುದ್ದವೆಂಬಂತೆ ತುಮಕೂರು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಅವರ ವರ್ತನೆಯಿದ್ದು, ತಂದೆಯಿಲ್ಲದೆ, ತಾಯಿ ಮತ್ತು ತಾತನ ಆಶ್ರಯದಲ್ಲಿ ಬೆಳೆಯುತ್ತಿರುವ ತಬ್ಬಲಿ ಹುಡುಗನೊಬ್ಬನ ಚುರುಕುತನವನ್ನು ಗಮನಿಸಿ, ಆತನ ಇಚ್ಚೆಯಂತೆ, ನಗರದಲ್ಲಿ ಓದಲು ಅಗತ್ಯವಿರುವ ವ್ಯವಸ್ಥೆ ಮಾಡಲು ಮೋಹನ್ರಾಜ್ ಮುಂದೆ ಬಂದಿದ್ದಾರೆ.
ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಬಿಡುವಿಲ್ಲದ ಕೆಲಸದ ನಡುವೆಯೂ ಏಪ್ರಿಲ್ 02ರ ಸೋಮವಾರ ತಮ್ಮ ಕುಟುಂಬ ಸಮೇತ ಸಿದ್ದಗಂಗಾ ಮಠಕ್ಕೆ ತೆರಳಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆಯುವ ವೇಳೆ, ತಮ್ಮ ತಾಯಿ, ತಾತನೊಂದಿಗೆ ಮಠಕ್ಕೆ ಆಗಮಿಸಿದ್ದ 7ನೇ ತರಗತಿಯ ಬಾಲಕನೊಬ್ಬ ಸ್ವಾಮೀಜಿಯವರನ್ನು ನೋಡಲೆಬೇಕೆಂಬ ಹಠದಲ್ಲಿ ಪರದಾಡುತ್ತಿದುದ್ದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಆತನಿಗೆ ಸ್ವಾಮೀಜಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು.
ಈ ವೇಳೆ ಹುಡುಗನ ಚುರುಕುತನ, ಆತನ ವಾಕ್ಚಾತುರ್ಯ, ಒಳ್ಳೆಯ ನಡವಳಿಕೆಯನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಆತನನ್ನು ವಿಚಾರಿಸಿದಾಗ ತಾನು ಡಾನ್ ಬೋಸ್ಕೋ ಶಾಲೆಯಲ್ಲಿ ಓದುತ್ತಿರುವ ಪುನೀತ್, ತಾನು ಉನ್ನತ ವ್ಯಾಸಾಂಗವನ್ನು ಪ್ರತಿಷ್ಠಿತ ಶಾಲೆಯಲ್ಲಿ ಮಾಡಬೇಕೆಂಬ ಇಚ್ಚೆಯನ್ನು ವ್ಯಕ್ತಪಡಿಸಿದ್ದಾನೆ. ಬಾಲಕನ ಇಚ್ಚೆಯನ್ನು ಅರಿತ ಜಿಲ್ಲಾಧಿಕಾರಿಗಳು, ಅತನ ಪೋಷಕರಿಗೆ ಕಚೇರಿಗೆ ಬಂದು ಕಾಣುವಂತೆ ಸಲಹೆ ನೀಡಿದ್ದರು.
ಜಿಲ್ಲಾಧಿಕಾರಿಗಳ ಸಲಹೆಯಂತೆ ತಮ್ಮ ಕಚೇರಿಗೆ ಬಂದ ಪುನೀತ್ ಮತ್ತು ಆತನ ಪೋಷಕರೊಂದಿಗೆ ಮಾತನಾಡಿದ ಕೆ.ಪಿ.ಮೋಹನ್ರಾಜ್, ಪೋಷಕರು ಹಾಗೂ ಬಾಲಕನ ಇಚ್ಚೆಯಂತೆ ಆತನ ಸಂಪೂರ್ಣ ಓದಿನ ಖರ್ಚು, ವೆಚ್ಚವನ್ನು ವಹಿಸಿಕೊಳ್ಳುವ ಭರವಸೆ ನೀಡಿದ್ದು, ಹುಡುಗನ ಮುಂದಿನ ಶೈಕ್ಷಣಿಕ ವರ್ಷದಿಂದ ರೆಸಿಡೆನ್ಸಿಯಲ್ ಶಾಲೆಯಲ್ಲಿ ಕಲಿಯಲು ಅವಕಾಶ ಮಾಡಿಕೊಡುವ ವಾಗ್ದಾನ ಮಾಡಿದ್ದಾರೆ.
ಪುನೀತ್ ನ ಊರು ಕೋರಾ ಹೋಬಳಿ ಅಂಚೆಹಳ್ಳಿ ಗ್ರಾಮ. ಆತ ಚಿಕ್ಕವನಿರುವಾಗಲೇ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ರಾಧಾಮಣಿ ಹಾಗೂ ತಾತನ ಆರೈಕೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಪುನೀತನ ತಾಯಿ ಖಾಸಗಿ ಶಾಲೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದು, ಮಗನನ್ನು ಡಾನ್ಬಾಸ್ಕೋ ಶಾಲೆಯವರು ನಡೆಸುವ ಅನಾಥಾಲಯದಲ್ಲಿ ಇಟ್ಟು ವಿದ್ಯಾಬ್ಯಾಸ ಮಾಡಿಸುತ್ತಿದ್ದಾರೆ. ಪ್ರಸ್ತುತ ಸದರಿ ಶಾಲೆಯಲ್ಲಿ ಕನ್ನಡ ಮಾದ್ಯಮ ಮಾತ್ರ ಕಲಿಯಲು ಅವಕಾಶವಿದ್ದು, ಉನ್ನತ ವಿದ್ಯಾಭ್ಯಾಸದ ಕನಸು ಹೊತ್ತಿರುವ ಈತನಿಗೆ ಒಳ್ಳೆಯ ಶಾಲೆಯಲ್ಲಿ ಅಂಗ್ಲಮಾಧ್ಯಮದಲ್ಲಿ ಕಲಿಯಲು ಅವಕಾಶ ಮಾಡಬೇಕೆಂಬುವುದು ಜಿಲ್ಲಾಧಿಕಾರಿಗಳ ಮನದ ಇಂಗಿತವಾಗಿದೆ.