ಎ.5 ರಂದು ತಮಿಳುನಾಡು ಬಂದ್
ಕೆಎಸ್ಸಾಟಿಸಿ ಬಸ್ ಸಂಚಾರ ಸ್ಥಗಿತ
ಬೆಂಗಳೂರು, ಎ. 4: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ಎ.5 ರಂದು ತಮಿಳುನಾಡು ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ತಮಿಳುನಾಡು ಮಾರ್ಗದ ಬಸ್ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿರುವುದನ್ನು ವಿರೋಧಿಸಿ ಎ.5ರಂದು ತಮಿಳುನಾಡು ಬಂದ್ಗೆ ಡಿಎಂಕೆ ನೇತೃತ್ವದಲ್ಲಿ ವಿಪಕ್ಷಗಳು ಕರೆ ನೀಡಿವೆ. ಆ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆಯಿಂದ ಸಂಜೆವರೆಗೂ ಕರ್ನಾಟಕದಿಂದ ತಮಿಳುನಾಡಿನ ಯಾವುದೇ ಭಾಗಕ್ಕೂ ಕೆಎಸ್ಸಾರ್ಟಿಸಿ ಬಸ್ ಸಂಚಾರ ಇರುವುದಿಲ್ಲ ಎಂದು ತಿಳಿದು ಬಂದಿದೆ.ಗುರುವಾರ ರಾತ್ರಿ ಎಂದಿನಂತೆ ಕೆಎಸ್ಸಾರ್ಟಿಸಿ ಬಸ್ ಸೇವೆ ಎಂದಿನಂತೆ ಇರಲಿದೆ.
ಆರು ವಾರಗಳಲ್ಲಿ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಫೆ.16ರಂದು ಆದೇಶ ನೀಡಿತ್ತು. ಈ ಅವಧಿ ಮಾರ್ಚ್ 29ಕ್ಕೆ ಅಂತ್ಯವಾಗಿದ್ದು, ಆದೇಶಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಹಾಗೂ ತಮಿಳುನಾಡು ಸರಕಾರ ಮಾ.31ರಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ.
ಆದೇಶದಲ್ಲಿ, ಕಾವೇರಿ ನದಿ ನೀರು ಹಂಚಿಕೆಯಲ್ಲಿ 270 ಟಿಎಂಸಿ ಇದ್ದ ಕರ್ನಾಟಕ ರಾಜ್ಯದ ಪಾಲನ್ನು 14.75 ಟಿಎಂಸಿನಷ್ಟು ಹೆಚ್ಚಿಸಲಾಗಿದೆ. ಇದರಿಂದ ಕಾವೇರಿ ಜಲ ವಿವಾದ ನ್ಯಾಯಮಂಡಳಿ ನೀಡಿದ್ದ ತೀರ್ಪು ಪರಿಷ್ಕರಣೆಯಾಗಿದೆ. ಸಿಎಂಬಿ ರಚಿಸುವವರೆಗೂ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದು ಡಿಎಂಕೆ ಎಚ್ಚರಿಸಿದೆ.