44 ವರ್ಷಗಳ ಹೋರಾಟಕ್ಕೆ ಸಂದ ಜಯ: ಪ್ರಮೋದಾ ದೇವಿ ಒಡೆಯರ್
ರಾಜ ಮನೆತನದ ಆದಾಯ, ಸಂಪತ್ತು ತೆರಿಗೆ ಗೊಂದಲ ಅಂತ್ಯ
ಮೈಸೂರು,ಎ.5: ಕಳೆದ ಸುಮಾರು 44 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ರಾಜಮನೆತನದ ಆದಾಯ ಮತ್ತು ಸಂಪತ್ತು ತೆರಿಗೆ ಗೊಂದಲ ಅಂತ್ಯವಾಗಿದ್ದು, ಸುಪ್ರೀಂ ಕೋರ್ಟ್ನಲ್ಲಿ ಜಯ ಸಿಕ್ಕಿದೆ ಎಂದು ಪ್ರಮೋದಾ ದೇವಿ ಒಡೆಯರ್ ಹೇಳಿದರು.
ಮೈಸೂರು ಅರಮನೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆದಾಯ ಮತ್ತು ಸಂಪತ್ತು ತೆರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ನಡೆಯುತಿತ್ತು. ತಮ್ಮ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಂತರ ನಾನು ಪ್ರಕರಣದ ವ್ಯಾಜ್ಯವನ್ನು ಮುಂದುವರೆಸಿಕೊಂಡು ಬಂದಿದ್ದು, ಸುಮಾರು 44 ವರ್ಷಗಳ ಹೋರಾಟಕ್ಕೆ ನ್ಯಾಯ ದೊರೆತಿದೆ ಎಂದು ತಿಳಿಸಿದರು.
ಅರಮನೆಯ ಆಸ್ತಿ ಹಾಗೂ ಸಂಪತ್ತಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ರಾಜ ಮನೆತನ ಸರಿಯಾದ ತೆರಿಗೆ ಪಾವತಿ ಮಾಡಿಲ್ಲ ಎಂದು 44 ವರ್ಷಗಳ ಹಿಂದೆ ಅರಮನೆಗೆ ಸಂಬಂಧಿಸಿದಂತೆ ಆಸ್ತಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಹೆಚ್ಚುವರಿ ತೆರಿಗೆ ಪಡೆದಿದ್ದರು. ಈ ಬಗ್ಗೆ ಅಂದು ರಾಜಮನೆತನದವರು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದರು. 2012 ರಲ್ಲಿ ತೀರ್ಪು ರಾಜ ಮನೆತನದವರ ಪರವಾಗಿ ಬಂದಿತ್ತು. ನಂತರ 2 ವರ್ಷಗಳ ಕಾಲ ಅವರ ಆಸ್ತಿಯ ಲೆಕ್ಕಾಚಾರ ಮಾಡಿ ಆದಾಯ ತೆರಿಗೆ ಇಲಾಖೆಗೆ ಕೋರ್ಟ್ ಹೆಚ್ಚುವರಿ ತೆರಿಗೆಯನ್ನು ರಾಜಮನೆತನಕ್ಕೆ ವಾಪಸ್ ಮಾಡುವಂತೆ ಆದೇಶ ನೀಡಿದೆ. ಅದರಂತೆ ಹೆಚ್ಚುವರಿ ಹಣ ನಮಗೆ ಬಂದಿರುವುದು ಸಂತೋಷವಾಗಿದೆ ಎಂದು ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ರಾಜಕಾರಣಕ್ಕೆ ಬರುವುದಿಲ್ಲ: ನಾನು ರಾಜಕೀಯ ಪ್ರವೇಶ ಮಾಡುವುದಿಲ್ಲ. ಈಗಾಗಲೇ ನಾನು ಸ್ಪಷ್ಟಪಡಿಸಿದ್ದೇನೆ. ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ಯಾವ ರಾಜಕೀಯ ಪಕ್ಷದ ಪರವಾಗಿಯೂ ನಾನು ಪ್ರಚಾರ ಮಾಡುವುದಿಲ್ಲ. ಅರಮನೆಗೆ ಅಮಿತ್ ಶಾ ಸೌಜನ್ಯಯುತ ಭೇಟಿಯನ್ನಷ್ಟೇ ನೀಡಿದ್ದರು. ಅವರು ನನ್ನ ಜೊತೆ ರಾಜಕೀಯ ಚರ್ಚೆ ಮಾಡಿಲ್ಲ. ಈ ಹಿಂದೆ ಅಡ್ವಾಣಿ ಸೇರಿದಂತೆ ಹಲವು ರಾಜಕಾರಣಿಗಳು ಭೇಟಿ ನೀಡಿದ್ದಾರೆ. ಚುನಾವಣೆ ಸಮಯವಾದುದರಿಂದ ಅಮಿತ್ ಶಾ ಭೇಟಿ ಮಹತ್ವ ಪಡೆದುಕೊಂಡಿದೆ ಅಷ್ಟೆ. ನಾನು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡುವುದಿಲ್ಲ, ಯದುವೀರ್ ರಾಜಕೀಯ ಪ್ರವೇಶ ಅವರಿಗೆ ಬಿಟ್ಟಿದ್ದು, ನಾನು ಅವರ ವೈಯಕ್ತಿಕ ವಿಚಾರದಲ್ಲಿ ತಲೆ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅರಮನೆ ಅಧಿಕಾರಿ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.