ವಿದ್ಯಾರ್ಥಿಗಳ ಜೀವನ ರೂಪಿಸುವುದು ವಿವಿಗಳ ಗುರುತರ ಜವಾಬ್ದಾರಿ : ಡಾ.ವೈ.ಎಸ್.ಸಿದ್ದೇಗೌಡ
ತುಮಕೂರು,ಎ.8:ಪ್ರತಿ ವಿದ್ಯಾರ್ಥಿಯ ಜೀವನ ರೂಪಿಸುವುದು ವಿಶ್ವವಿದ್ಯಾಲಯ ಮತ್ತು ಶಿಕ್ಷಣದ ಗುರುತರ ಜವಾಬ್ದಾರಿ ಯಾಗಿದೆ ಎಂದು ತುಮಕೂರು ವಿವಿ ಕುಲಪತಿ ಡಾ.ವೈ.ಎಸ್.ಸಿದ್ದೇಗೌಡ ತಿಳಿಸಿದ್ದಾರೆ.
ನಗರದ ಶ್ರೀಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ತುಮಕೂರು ವಿವಿ ಕಾಲೇಜು ಅಧ್ಯಾಪಕರ ಸಂಘ ಆಯೋಜಿಸಿದ್ದ ಉನ್ನತ ಶಿಕ್ಷಣದ ಉನ್ನತಿಗೆ ವೃತ್ತಿಪರ ಮೌಲ್ಯಗಳು ಎಂಬ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತಿದ್ದ ಅವರು,ತಾವು ಪಾಠ ಮಾಡುವ ವಿದ್ಯಾರ್ಥಿಗಳು ನಮ್ಮ ಮಕ್ಕಳಂತೆ ಎಂದು ತಿಳಿದು,ಬೋಧನೆ ಮಾಡಿದರೆ ಹೆಚ್ಚು ಫಲವನ್ನು ನಿರೀಕ್ಷಿಸಬಹುದು ಎಂದರು.
ಇಂದು ಶಿಕ್ಷಣವೆಂಬುದೇ ಕವಲು ದಾರಿಯಲ್ಲಿದೆ.ಈ ವೇಳೆ ಉನ್ನತ ಶಿಕ್ಷಣದಲ್ಲಿ ಮೌಲ್ಯಗಳ ಉನ್ನತ್ತೀಕರಣ ವಿಷಯದ ಬಗ್ಗೆ ಡಾ.ಇಂದಿರಾ ಅವರು ಮಾತನಾಡುತ್ತಿರುವುದು ಅತ್ಯಂತ ಸೂಕ್ತ ಎಂದೆನಿಸುತ್ತದೆ.ಶಿಕ್ಷಕನಾದವನಿಗೆ ಖಾಸಗಿ ಮತ್ತು ವೃತ್ತಿಪರ ಜೀವನವೆಂಬುದಿಲ್ಲ.ಅವರಡರ ನಡುವೆ ಸಮನ್ವಯತೆಯನ್ನು ಕಾಯ್ದುಕೊಂಡರೆ ಅದಕ್ಕಿಂತ ದೊಡ್ಡ ವೃತ್ತಿ ಗೌರವ ಮತ್ತೊಂದಿಲ್ಲ.ನಾಗರಿಕ ಸಮಾಜದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವುದೇ ನಿಜವಾದ ಮೌಲ್ಯ.ಇದು ವೃತ್ತಿಯ ಘನತೆಯನ್ನು ಹೆಚ್ಚಿಸುವುದರ ಜೊತೆಗೆ,ಉನ್ನತ ಶಿಕ್ಷಣದ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಡಾ.ವೈ.ಎಸ್. ಸಿದ್ದೇಗೌಡ ನುಡಿದರು.
ರಾಜ್ಯದಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಒಂದೇ ಪರೀಕ್ಷಾ ವೇಳಾಪಟ್ಟಿ ಇದ್ದರೂ,ತುಮಕೂರು ವಿವಿಯಲ್ಲಿ ಇದುವರೆಗು ಪರೀಕ್ಷೆಗಳು ನಡೆದಿಲ್ಲ.ಅದಕ್ಕಾಗಿಯೇ ಏಪ್ರಿಲ್ ಅಂತ್ಯದೊಳಗೆ ಪರೀಕ್ಷೆ ನಡೆಸಲು ನಿರ್ಧರಿಸಿದ್ದೇವೆ.ಇದರಿಂದ ಪ್ರತಿಭಾವಂತರು ಬೇರೆ ವಿವಿಗಳಿಗೆ ಸೇರಲು ಅನುಕೂಲವಾಗುತ್ತದೆ ಎಂದ ಅವರು, ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ಎಲ್ಲರೂ ಮುಕ್ತ ಮನಸ್ಸಿನಿಂದ ಕುಳಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದು ಅಧ್ಯಾಪಕ ವೃಂದಕ್ಕೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಭಾರತೀಯ ಸಮಾಜಶಾಸ್ತ್ರೀಯ ಸಂಗಧ ಅಧ್ಯಕ್ಷ ಹಾಗೂ ಮೈಸೂರು ವಿವಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಆರ್.ಇಂದಿರಾ,ಶಿಕ್ಷಕರು ಭೋಧನೆ ಮತ್ತು ಬದುಕಿನ ನಡುವೆ ಸಾಮ್ಯತೆಯನ್ನು ಕಾಪಾಡಿಕೊಳ್ಳುವುದೇ ನಿಜವಾದ ಮೌಲ್ಯ. ಪ್ರತಿಯೊಂದನ್ನು ನಮ್ಮ ವಿದ್ಯಾರ್ಥಿಗಳು ಅನುಕರಣೆ ಮಾಡುವುದರಿಂದ ಸಹದ್ಯೋಗಿಗಳೊಂದಿಗಿನ ನಮ್ಮ ನಡವಳಿಕೆ, ನಾವು ಬಳಸುವ ಭಾಷೆ ಪ್ರಭಾವ ಬೀರುತ್ತವೆ.ಹಾಗಾಗಿ ಅತ್ಯಂತ ಎಚ್ಚರಿಕೆಯ ಮತ್ತು ಗೌರವಯುತ ನಡವಳಿಕೆ ನಮ್ಮದಾಗಬೇಕು ಎಂದು ಸಲಹೆ ನೀಡಿದರು.
ಇಂದಿನ ಜನಾಕರ್ಷಣೆಯ ಲೋಕದಲ್ಲಿ ಕ್ಲಾಸ್ ರೂಮಿನಲ್ಲಿ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದು ಒಬ್ಬ ಶಿಕ್ಷಕನಿಗೆ ಸವಾಲಿನ ಕೆಲಸವೇ ಆಗಿದೆ.ಇಂತಹ ಸವಾಲಿನ ನಡುವೆಯೇ ನಾವು ಮಕ್ಕಳಿಗೆ ಸತ್ಯವನ್ನು ಮತ್ತು ಪ್ರಸ್ತುತ ಸನ್ನಿವೇಶಗಳ ಪರಿಚಯವನ್ನು ಮಾಡಿಸಬೇಕಾಗಿದೆ.ಕೇವಲ ಪಠ್ಯದಲ್ಲಿರುವುದನ್ನು ಹೇಳುವುದಷ್ಟೇ ಶಿಕ್ಷಕನ ಕೆಲಸವಲ್ಲ. ಪ್ರಸ್ತುತ ಸಮಾಜಕ್ಕೆ ಮಕ್ಕಳನ್ನು ಮುಖಾಮುಖಿಯಾಗಿಸುವುದೇ ನಿಜವಾದ ವೃತ್ತಿ. ಸಮಾಜದಲ್ಲಿ ನಡೆಯುತ್ತಿರುವ ವ್ಶೆರುದ್ಯಗಳ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಬೇಕು.ಗೊತ್ತಿಲ್ಲ,ನನ್ನ ಕೈಯಲ್ಲಿ ಆಗಲ್ಲ,ಹೆದರಿಕೆ ಎಂಬ ಪದಗಳನ್ನು ದೂರವಿಟ್ಟು,ತಪ್ಪು ಅನ್ನಿಸಿದ್ದನ್ನು ನೇರವಾಗಿ ಹೇಳಿ, ವಿದ್ಯಾರ್ಥಿಗಳಲ್ಲಿಯೂ ಒಳ್ಳೆಯದು, ಕೆಟ್ಟದರ ಬಗ್ಗೆ ಅರಿವು ಮೂಡಿಸಿ, ಭವಿಷ್ಯದಲ್ಲಿ ಮೌಲ್ಯಗಳನ್ನು ರೂಢಿಸಿಕೊಂಡು ಬೆಳೆವಂತೆ ಪ್ರೇರೆಪಿಸಿ ಎಂದು ಡಾ.ಎಂ.ಇಂದಿರಾ ತಿಳಿಸಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಟಿ.ಎಮ.ಮಂಜುನಾಥ್, ಕಾರ್ಯದರ್ಶಿ ಪ್ರೊ.ಡಿ.ಕೃಷ್ಣ,ವಲಯ ಅಧ್ಯಕ್ಷ ಡಾ.ಓ.ನಾಗರಾಜು,ಕಾರ್ಯದರ್ಶಿ ಡಾ.ನಾರಾಯಣ್, ಪ್ರೊ.ಶ್ರೀನಾಥ್ರಾಜ್, ಡಾ.ವೈ.ರಮೇಶ್, ಪ್ರೊ.ಶಿವಪೂಜಿಕೋಟಿ, ಪ್ರೊ.ರವಿಕುಮಾರ್, ಪ್ರೊ.ಮಂಜುನಾಥ್, ಡಾ.ಪ್ರಮೀಳಾಎಸ್.ಗೌಡ, ಡಾ.ಶೋಭಾಎಸ್.ಮಠ್, ಪ್ರೊ.ಟಿ.ಗಂಗಾಧರಯ್ಯ, ಡಾ.ಎಂ.ಪಿ.ಶಂಕರಪ್ಪ, ಪ್ರೊ.ಹೆಚ್.ವಿ.ವೇಣುಗೋಪಾಲ್, ಡಾ.ಜಿ.ತಿಪ್ಪೇಸ್ವಾಮಿ ಮತ್ತಿತರರು ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿವಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಡಿ.ಆರ್.ಮೋಹನ್ಕುಮಾರ್ ವಹಿಸಿದ್ದರು.