ಪಕ್ಷೇತರ ಅಭ್ಯರ್ಥಿಯಾಗಿ ಹೋರಾಟಗಾರ ಎಂ.ಬಿ.ನಾಗಣ್ಣಗೌಡ ಕಣಕ್ಕೆ
ಹಿತೈಷಿಗಳ ಸಮಾಲೋಚನಾ ಸಭೆಯಲ್ಲಿ ನಿರ್ಣಯ
ಮಂಡ್ಯ, ಎ.8: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಹೋರಾಟಗಾರ ಎಂ.ಬಿ.ನಾಗಣ್ಣಗೌಡ ಸ್ಪರ್ಧೆಗೆ ಹಿತೈಷಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ನಗರದ ವಿಜಯಲಕ್ಷ್ಮಿ ಸಮುದಾಯ ಭವನದಲ್ಲಿ ರವಿವಾರ ನಡೆದ ಸಮಾಲೋಚನಾ ಸಭೆಯಲ್ಲಿ ನೆರೆದಿದ್ದ ನೂರಾರು ಮಂದಿ ಕೈ ಎತ್ತುವ ಮೂಲಕ ನಾಗಣ್ಣಗೌಡರ ಸ್ಪರ್ಧೆಗೆ ಬೆಂಬಲ ಸೂಚಿಸಿದರು.
ಎಂ.ಬಿ.ನಾಗಣ್ಣಗೌಡರು ಕಳೆದ 20 ವರ್ಷಗಳಿಂದ ಜನಪರ, ಪ್ರಗತಿಪರ ಹೋರಾಟ ಮಾಡಿಕೊಂಡು ಬಂದವರು. ಇಂತಹವರು ವಿಧಾನಸಭೆ ಪ್ರವೇಶ ಮಾಡಬೇಕು. ಗೆಲ್ಲಿಸಿಕೊಂಡು ಬರುತ್ತೇವೆ ಎಂದು ನೆರೆದಿದ್ದವರು ಹೇಳಿದರು.
ಜನಪರ ಹೋರಾಟಗಾರ ಅಭಿಗೌಡ ಮಾತನಾಡಿ, ಸಿನಿಮಾ ನಟರು ಹಾಗೂ ಹಣವುಳ್ಳವರ ರಾಜಕೀಯ ಆಡಂಬೋಲವಾಗಿ ಮಂಡ್ಯ ಜಿಲ್ಲೆ ಮಾರ್ಪಟ್ಟಿದ್ದು ಪರಿಣಾಮ ಅಭಿವೃದ್ದಿಯಲ್ಲಿ ಉಳಿದೆಲ್ಲ ಜಿಲ್ಲೆಗಳಿಗಿಂತ ಹಿಂದುಳಿದಿದೆ. ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಹಾಗೂ ಮಂಡ್ಯದ್ದೆ ಆದ ರಾಜಕಾರಣವನ್ನು ಮುನ್ನೆಲೆಗೆ ತರುವ ಸಲುವಾಗಿ ಮಂಡ್ಯ ಅಭಿವೃದ್ದಿ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.
ಎಂ.ಬಿ.ನಾಗಣ್ಣಗೌಡ ಮಾತನಾಡಿ, ಮಂಡ್ಯ ನಗರದಲ್ಲೆ 25ಕ್ಕು ಹೆಚ್ಚು ಸ್ಲಂಗಳಿವೆ. ಈ ಕ್ಷೇತ್ರದ ಶಾಸಕರೆ ಈ ರಾಜ್ಯದ ವಸತಿ ಸಚಿವರಾದರೂ ಯಾವೊಂದು ಸ್ಲಂ ನಿವಾಸಿಗಳಿಗೂ ಮನೆ ಸಿಗಲಿಲ್ಲ. ಮಂಡ್ಯ ವಿಧಾನಸಭಾ ಕ್ಷೇತ್ರವೊಂದರಲ್ಲೆ 10 ಸಾವಿರಕ್ಕು ಹೆಚ್ಚು ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಇವರ ದುಡಿಮೆಯ ಬಹುಪಾಲು ಹಣ ಬಾಡಿಗೆಗೆ ಹೋದರೆ ಇವರು ಜೀವನ ಮಾಡುವುದಾದರೂ ಹೇಗೆ? ಇನ್ನು ಸರಕಾರಿ ಭೂಮಿಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ಎಂಬುದು ಹಗಲುಗನಸಾಗಿದೆ ಎಂದು ವಿಷಾದಿಸಿದರು.
ಗಣಿ, ರಿಯಲ್ ಎಸ್ಟೇಟ್. ಬೇನಾಮಿ ಹಣದ ಬೆಂಬಲವಿಲ್ಲದೆ ಮಂಡ್ಯ ಜಿಲ್ಲೆಯ ರಾಜಕಾರಣವನ್ನು ಸತ್ವಶಾಲಿಗೊಳಿಸುವ ನಿಟ್ಟಿನಲ್ಲಿ ನಮ್ಮ ಸ್ಪರ್ಧೇ ಇರಲಿದೆ ಎಂದು ಎಂದು ಭರವಸೆ ನೀಡಿದರು.
ಸ್ಲಂ ಮುಖಂಡರಾದ ಡವರಿ ಕೃಷ್ಣ, ಆರ್ ಬಾಬು, ಮಿಮ್ಸ್ನ ನಾನ್ ಕ್ಲಿನಿಕಲ್ ಕಾರ್ಮಿಕರ ಸಂಘದ ಚೆನ್ನರಾಜು, ವೆಂಕಟಲಕ್ಷ್ಮಿ, ಬೆಳ್ಳುಂಡಗೆರೆ ಪ್ರಭುಗೌಡ, ಬೂದನೂರು ಗ್ರಾಪಂ ಸದಸ್ಯ ಬಿ.ಕೆ.ಸತೀಶ್, ಹಳೇಬೂದನೂರು ಸುನಿಲ್, ಮಾರಸಿಂಗನಹಳ್ಳಿ ತಿಮ್ಮೇಗೌಡ, ಯತಗಳ್ಳಿ ಶಾರದಾ, ರತ್ನಮ್ಮ, ಸುನೀತಾ, ಫಾತಿಮಾ, ಇತರ ಮುಖಂಡರು ಸಭೆಯಲ್ಲಿ ಉಸ್ಥಿತರಿದ್ದರು.
ನಿರ್ಣಯಗಳು: ಮಂಡ್ಯ ಅಭಿವೃದ್ದಿ ವೇದಿಕೆ ಅಸ್ತಿತ್ವ, ಎಂ.ಬಿ.ನಾಗಣ್ಣಗೌಡ ಕಣಕ್ಕೆ, ಜಿಲ್ಲೆಯ ಸಮಗ್ರ ಅಭಿವೃದ್ದಿಯ ಮುನ್ನೋಟದ ಕೈಪಿಡಿ ಬಿಡುಗಡೆ, ಮುಂಬರುವ ಲೋಕಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧೆ ಹಾಗೂ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟ ನಿರ್ಧಾರ.