ಕೇಂದ್ರ ಕಸಾಪ ಬೈಲಾ ತಿದ್ದುಪಡಿ ವಿರೋಧಿಸಿ ಧರಣಿ
ಮಂಡ್ಯ, ಎ.8: ಇತ್ತೀಚೆಗೆ ಉಡುಪಿಯ ಕೋಟಾದಲ್ಲಿ ನಡೆದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಕಾನೂನು ಬಾಹಿರವಾಗಿ ಮಾಡಲಾಗಿರುವ ಪರಿಷತ್ತಿನ ಬೈಲಾ ತಿದ್ದುಪಡಿ ತಿರಸ್ಕರಿಸಲು ಆಗ್ರಹಿಸಿ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ರವಿವಾರ ಧರಣಿ ನಡೆಯಿತು.
ಅಜೀವ ಶುಲ್ಕವನ್ನು 260 ರೂ.ನಿಂದ 500 ರೂ.ಗೆ ಹೆಚ್ಚಿಸಿರುವುದು, ಕಾರ್ಯಕಾರಿ ಸಮಿತಿ ಅಧಿಕಾರಾವಧಿಯನ್ನು ಮೂರು ವರ್ಷದಿಂದ ಐದು ವರ್ಷಕ್ಕೆ ವಿಸ್ತರಿಸಿ ತಿದ್ದುಪಡಿ ತಂದಿರುವುದು ಕಾನೂನು ಬಾಹಿರ ಎಂದು ಅವರು ಆರೋಪಿಸಿದರು.
ಈ ಹಿಂದೆ ಶ್ರೀಹರಿಕೃಷ್ಣ ಪುನರೂರು ಅಧ್ಯಕ್ಷರಾಗಿದ್ದಾಗ ಮಂಡ್ಯದಲ್ಲಿ ಕಸಾಪ ಸರ್ವ ಸದಸ್ಯರ ಸಭೆ ನಡೆಸಿ ಇಂತಹದ್ದೇ ಪ್ರಯತ್ನ ನಡೆಸಲಾಗಿತ್ತು. ಆದರೆ, ಅನೇಕ ಹೋರಟಗಾರರ ಫಲವಾಗಿ ಈ ಪ್ರಯತ್ನ ವಿಫಲವಾಯಿತು. ಜತೆಗೆ ಈ ಪ್ರಯತ್ನಕ್ಕೆ ಹೈಕೋರ್ಟ್ ತಡೆಯಾಜ್ಞೆ ಸಹ ನೀಡಿತ್ತು ಎಂದು ಅವರು ಹೇಳಿದರು.
ಮತ್ತೊಮ್ಮೆ ಇಂತಹ ಪ್ರಯತ್ನಕ್ಕೆ ಹಾಲಿ ಅಧ್ಯಕ್ಷ ಮನುಬಳಿಗಾರ್ ಕೈ ಹಾಕಿರುವುದು ಮೂರ್ಖತನ. ಅಧಿಕಾರದ ಲಾಲಾಸೆಗಾಗಿ ಹಾಲಿ ಅಧ್ಯಕ್ಷರು ಇಂತಹ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಮಾಣಿಕತೆ ಹಾಗೂ ಸರಳತೆಗೆ ಹೆಸರಾಗಿರುವ ಕಸಾಪ ಸಮ್ಮೇಳನಗಳು ಸಹ ಸರಳವಾಗಿ ನಡೆಯಬೇಕು. ಹಿಂದೆ ಇದ್ದಂತೆ ಮೂರು ವರ್ಷಕ್ಕೆ ಅಧಿಕಾರವನ್ನು ಇಳಿಸಬೆಕು. ಬೈಲಾ ತಿದ್ದುಪಡಿ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಲೇಖಕರಾದ ಮಾ.ರಾಮಕೃಷ್ಣ, ಕೆ.ಮಾಯಿಗೌಡ, ಚಲುವೇಗೌಡ, ರಾಮೇಗೌಡ, ಲೋಕೇಶ್ ಚಂದಗಾಲು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಎಚ್.ಎಷ್.ಮುದ್ದೇಗೌಡ, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಸ್ವರ್ಣಸಂದ್ರ ಕೃಷ್ಣ, ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಸತೀಶ್ ಜವರೇಗೌಡ, ಹಾರೋಹಳ್ಳಿ ಪುಟ್ಟಸ್ವಾಮಿ, ಪತ್ರಕರ್ತ ಮಾದರಹಳ್ಳಿ ರಾಜು, ಇತರರು ಪಾಲ್ಗೊಂಡಿದ್ದರು.