ಸುಪ್ರೀಂ ಕೋರ್ಟ್ ತೀರ್ಪು ಅಂತಿಮವಲ್ಲ: ಶಾಸಕ ಸಿ.ಟಿ.ರವಿ
ಬಾಬಾಬುಡಾನ್ ಗಿರಿ-ದತ್ತಪೀಠ ವಿವಾದ
ಚಿಕ್ಕಮಗಳೂರು, ಎ.9: ಬಾಬಾಬುಡಾನ್ಗಿರಿ-ದತ್ತಪೀಠದ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅಂತಿಮ ತೀರ್ಪಲ್ಲ. ತೀರ್ಪಿನ ಬಗ್ಗೆ ಸಹಮತವಿಲ್ಲ ಎಂದಾದರೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ರಾಜ್ಯ ಸರಕಾರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ನಾಗಮೋಹನ್ದಾಸ್ ಸಮಿತಿ ಮೂಲಕ ಏಕಪಕ್ಷೀಪಯವಾಗಿ ವರದಿ ತಯಾರಿಸಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದರಿಂದ ಈ ವರದಿಯಲ್ಲಿನ ಶಾಖಾದ್ರಿಗೆ ಸಂಬಂಧಿಸಿದ ಶಿಫಾರಸನ್ನು ನ್ಯಾಯಾಲಯ ಒಪ್ಪಿದೆ. ಈ ಕಾರಣಕ್ಕೆ ಸದ್ಯದ ತೀರ್ಪು ಕಾಂಗ್ರೆಸ್ನ ತೀರ್ಪಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ವಿಚಾರ ಜನತಾ ನ್ಯಾಯಾಲಯಲ್ಲಿ ಚರ್ಚೆಗೊಳಪಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಬಾ ಬುಡಾನ್ಗಿರಿ-ದತ್ತಪೀಠ ವಿಚಾರ ಸಂಬಂಧ ಜಿಲ್ಲೆಯ ಜೆಡಿಎಸ್ ಮುಖಂಡರು ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡಬಾರದೆಂದು ಉಚಿತ ಸಲಹೆ ನೀಡಿದ್ದಾರೆ. ಆದರೆ ಈ ವಿಚಾರದಲ್ಲಿ ಆರಂಭದಿಂದಲೂ ಕಾಂಗ್ರೆಸ್ ಪಕ್ಷ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಸದ್ಯ ನ್ಯಾಯಾಲಯ ನೀಡಿರುವ ತೀರ್ಪಿನ ಹಿಂದೆಯೂ ಕಾಂಗ್ರೆಸ್ ಪಕ್ಷದ ರಾಜಕೀಯವಿದೆ ಎಂದು ಆರೋಪಿಸಿದ ಅವರು, ಸದಸ್ಯ ತೀರ್ಪು ಅಂತಿಮ ತೀರ್ಪಲ್ಲ. ನಾಗಮೋಹನ್ದಾಸ್ ಸಮಿತಿ ಲಭ್ಯವಿರುವ ಕಂದಾಯ, ಮುಜರಾಯಿ ದಾಖಲೆಗಳು ಹಾಗೂ ಜನರ ಅಭಿಪ್ರಾಯ ಸಂಗ್ರಹಿಸದೇ ಸಿದ್ಧಪಡಿಸಿದ ವರದಿಯನ್ನು ಕಾಂಗ್ರೆಸ್ ಸರಕಾರ ಒಪ್ಪಿ, ಸುಪ್ರೀಕೋರ್ಟಿಗೆ ಸಲ್ಲಿಸಿತ್ತು. ಆ ವರದಿಯಲ್ಲಿನ ಪೂಜಾ ವಿಧಿಗಳಿಗೆ ಸಂಬಂಧಿಸದ ಅಂಶಗಳನ್ನು ಮಾತ್ರ ನ್ಯಾಯಾಲಯ ಒಪ್ಪಿದ್ದು, ಶಾಖಾದ್ರಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳಿಗೆ ಅನುವು ಮಾಡಿಕೊಟ್ಟಿದೆ. ಆದರೆ ಇದು ಕಾಂಗ್ರೆಸ್ ಸರಕಾರ ಮತ ಬ್ಯಾಂಕ್ಗಳ ಕ್ರೋಢೀಕರಣಕ್ಕಾಗಿ ನೀಡಿದ ವರದಿಯಾಗಿದ್ದು, ಬಹುತೇಕ ಹಿಂದುಗಳಿಗೆ ಈ ತೀರ್ಪಿನ ಬಗ್ಗೆ ಸಹಮತವಿಲ್ಲ. ಈ ತೀರ್ಪಿನ ಬಗ್ಗೆ ಪರಾಮರ್ಶೆಯಾಗಲೇಬೇಕು. ಈ ಸಂಬಂಧ ಕಾನೂನು ಹೋರಾಟ ರೂಪಿಸಲಾಗುವುದು. ಜನತಾ ನ್ಯಾಯಾಲಯದಲ್ಲೂ ಈ ವಿಚಾರವನ್ನು ಕೊಡೊಯ್ದು ಪರ ವಿರೋಧದ ಚರ್ಚೆ ನಡೆಸುವುದಾಗಿ ಶಾಸಕ ರವಿ ತಿಳಿಸಿದರು.
ದರ್ಗಾ ಬೇರೆ-ದತ್ತಪೀಠ ಬೇರೆ: ಬಾಬಾಬುಡಾನ್ಗಿರಿ ಮತ್ತು ದತ್ತಪೀಠ ಬೇರೆಬೇರೆಯಾಗಿದ್ದು, ಈ ಧಾರ್ಮಿಕ ಕೇಂದ್ರಗಳು ಬೇರೆ ಬೇರೆ ಸರ್ವೇ ನಂಬರ್ ಗಳಲ್ಲಿವೆ. 1818ರ ಕಂದಾಯ ದಾಖಲೆ ಸೇರಿದಂತೆ ಎಲ್ಲ ದಾಖಲೆಗಳಲ್ಲೂ ಬಾಬಾಬುಡಾನ್ಗಿರಿ ಎಂಬ ಉಲ್ಲೇಖವಿಲ್ಲ. ಹಿಂದಿನ ಎಲ್ಲ ದಾಖಲೆಗಳಲ್ಲೂ ಇನಾಂ ದತ್ತಾತ್ರೇಯ ಪೀಠ ಎಂಬ ಉಲ್ಲೇಖವಿದೆ. ಬಾಬಾಬುಡಾನ್ದರ್ಗಾವು ನಾಗೇನಹಳ್ಳಿಯ ಸ.ನಂ.57ರಲ್ಲಿದೆ. ದತ್ತಪೀಠ ಸ.ನಂ.195ರಲ್ಲಿದೆ. 1916, 1930, 1942ರ ಮೈಸೂರು ಸರಕಾರ ಗೆಜೆಟಿಯರ್ ನಲ್ಲೂ ದತ್ತಪೀಠ-ದರ್ಗಾ ಬೇರೆ ಬೇರೆ ಎಂಬ ಉಲ್ಲೇಖವಿದೆ. 1942ರ ಗೆಜೆಟಿಯರ್ ನಲ್ಲಿ ಮುಸ್ಲಿಮರ ದರ್ಗಾ ಇತ್ತೀಚೆಗೆ ನಿರ್ಮಿಸಿದ್ದು ಎಂಬ ಉಲ್ಲೇಖವಿದ್ದು, ದತ್ತಪೀಠದ ಮೇಲೆಯೇ ದರ್ಗಾ ನಿರ್ಮಿಸಲಾಗಿದೆ ಎಂದ ಸಿ.ಟಿ.ರವಿ, ಪೀಠವನ್ನು ವಕ್ಛ್ ಬೋರ್ಡ್ಗೆ ಸೇರಿಸಿದ್ದು ಮೊದಲ ಅಪರಾಧ. ವಕ್ಛ್ ಬೋರ್ಡ್ ಪೀಠದಲ್ಲಿದ್ದ ದತ್ತಪಾದುಕೆಗಳನ್ನು ತೆರವುಗೊಳಿಸಿದ್ದು 2ನೇ ಅಪರಾಧವಾಗಿದೆ. ಇದರ ವಿರುದ್ಧ ಈ ಹಿಂದೆ ನಾಗರಾಜರಾವ್ ಮತ್ತಿತರರು ಜಿಲ್ಲಾ ನ್ಯಾಯಾಲಯದ ಮೊರೆ ಹೋದಾಗ 1980ರಲ್ಲಿ ವಕ್ಛ್ ಬೋರ್ಡ್ನಿಂದ ಮುಜಾರಾಯಿ ಇಲಾಖೆಗೆ ದತ್ತಪೀಠವನ್ನು ವರ್ಗಾಯಿಸಿ ನ್ಯಾಯಾಲಯ ತೀರ್ಪಿ ನೀಡಿದೆ. ಇದರ ವಿರುದ್ಧ ವಕ್ಛ್ ಬೋರ್ಡ್ ರಿಟ್ ಸಲ್ಲಿಸಿದಾಗ ಹೈಕೋಟ್ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ. ನಂತರ ಸುಪ್ರೀಂಕೋರ್ಟ್ನಲ್ಲೂ ಇದೇ ತೀರ್ಪು ಬಂದಿದೆ ಎಂದರು.
1989ರಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದ ಮೇರೆಗೆ ಶಾಖಾದ್ರಿ ನೇಮಿಸಿದ ಮುಜಾವರ್ರಿಂದ ಪೂಜೆಗೆ ಅವಕಾಶ ಕಲ್ಪಿಸಲಾಗಿದ್ದು, ಹಿಂದೂ ಧರ್ಮದವರಿಗೂ ಗುಹೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು. ಈ ವೇಳೆ ಶಾಖಾದ್ರಿ ಅವರ ಮೇಲೆ ಹಣ ದುರುಪಯೋಗದ ಆರೋಪ ನ್ಯಾಯಾಲಯದ ಮೆಟ್ಟಿಲೇರಿದಾಗ ಶಾಖಾದ್ರಿ ಇದರ ವಿರುದ್ಧ ರಿಟ್ ಸಲ್ಲಿಸಿದ್ದರು, ಇದನ್ನು ನ್ಯಾಯಾಲಯ ವಜಾ ಮಾಡಿದೆ ಎಂದ ಅವರು, ನಾಗಮೋಹನ್ದಾಸ್ ಸಮಿತಿ ನೀಡಿದ ವರದಿ ರಾಜಕೀಯ ಲಾಭ ಪಡೆಯಲು ನೀಡಿದ ವರದಿಯಾಗಿದ್ದು, ಈ ವರದಿಯಲ್ಲಿ ಶಾಖಾದ್ರಿ ಮೇಲಿನ ಹಣ ದುರುಪಯೋಗದ ಬಗ್ಗೆ ಉಲ್ಲೇಖವಿಲ್ಲ. ವಿವಾದವನ್ನು ಜೀವಂತವಾಗಿಡಲು ಕಾಂಗ್ರೆಸ್ ಸರಕಾರ ಮಾಡಿದ ಹುನ್ನಾರ ಇದಾಗಿದೆ. ಅಕ್ರಮ ಎಸಗಿರುವ ಶಾಖಾದ್ರಿ ಕುಟುಂಬಕ್ಕೆ ಧಾರ್ಮಿಕ ಮುಖಂಡತ್ವ ನೀಡಿರುವುದನ್ನು ನಾವು ಒಪ್ಪುವುದಿಲ್ಲ. ಯಾವುದೇ ಕಾರಣಕ್ಕೂ ಈ ಧಾರ್ಮಿಕ ಕೇಂದ್ರದ ಉಸ್ತುವಾರಿಯನ್ನು ಶಾಖಾದ್ರಿಗೆ ನೀಡಬಾರದು ಎಂದು ರವಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ವೇಣುಗೋಪಾಲ್, ನಗರಸಭೆ ಸದಸ್ಯ ತಮ್ಮಯ್ಯ, ಬಿಜೆಪಿ ಮುಖಂಡ ಕೋಟೆ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಸರಕಾರ 35 ವರ್ಷಗಳ ವಿವಾದ ಬಗೆಹರಿಯದಂತೆ ಮಾಡಿದೆ. ನ್ಯಾಯಾಲಯಕ್ಕೆ ಸರಕಾರ ನೀಡಿರುವ ಏಕಪಕ್ಷೀಯ ವರದಿಯಿಂದ ಈ ತೀರ್ಪು ಬಂದಿದೆ. ಇದರ ವಿರುದ್ಧ ಕಾನೂನು ಹೋರಾಟ ಮುಂದುವರಿಯಲಿದ್ದು, ವರದಿ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು. ಅಲ್ಲದೇ ಚುನಾವಣೆ ಘೋಷಣೆಯಾದ ಬಳಿಕ ನಾಗಮೋಹನ್ದಾಸ್ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ. ಇದರ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದೆ.
- ಸಿ.ಟಿ.ರವಿ, ಶಾಸಕ
ಮುತಾಲಿಕ್ ಆರೋಪದಿಂದ ಯಾರಿಗೆ ನಷ್ಟ ಎಂಬ ಬಗ್ಗೆ ಅವರು ಚಿಂತಸಬೇಕಿದೆ. ದತ್ತಪೀಠ ಎಲ್ಲಿದೆ ಎಂಬುದನ್ನು ಮುತಾಲಿಕ್ ಅವರಿಗೆ ತೋರಿಸಿದವನೇ ನಾನು. ದತ್ತ ಜಯಂತಿ ಸಂದರ್ಭ ಅವರು ಭೇಟಿ ನೀಡಿ ಕೈಮುಗಿದದ್ದು ಬಿಟ್ಟರೇ ಈ ಸಂಬಂಧ ಅವರು ಯಾವ ಹೋರಾಟವನ್ನೂ ಮಾಡಿಲ್ಲ. ಟೀಕಿಸುವ ಮುನ್ನ ಮುತಾಲಿಕ್ ದತ್ತಪೀಠದ ಬಗ್ಗೆ ಮಾಡಿರುವ ಹೋರಾಟಗಳೇನು ಎಂಬ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು.
- ಸಿ.ಟಿ.ರವಿ, ಶಾಸಕ