ನನಗೂ ರತನ್ಗೌಡ ಕುಟುಂಬಕ್ಕೂ ಸಂಬಂಧ ಇಲ್ಲ: ಮಾಜಿ ಶಾಸಕ ಎಂ.ಶ್ರೀನಿವಾಸ್ ಸ್ಪಷ್ಟನೆ
ಮಂಡ್ಯ, ಎ.11: ವಿಷ ಸೇವಸಿ ಆತ್ಮಹತ್ಯೆಗೆ ಯತ್ನಿಸಿರುವ ಶ್ರೀನಿವಾಸಪುರ ಗೇಟ್ ನಿವಾಸಿಗಳಾದ ರತನ್ಗೌಡ ಹಾಗೂ ಅವರ ತಂದೆ, ತಾಯಿ ಅವರಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಶಾಸಕ ಎಂ.ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಕಾಣದ ಕೈಗಳು ಈ ಪ್ರಕರಣದಲ್ಲಿ ನನ್ನ ತೇಜೋವಧೆ ಮಾಡಲು ಕೆಲಸ ಮಾಡಿವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಂಗಳವಾರ ರಾತ್ರಿ ರತನ್ಗೌಡ, ತಂದೆ ರವಿಕುಮಾರ್, ತಾಯಿ ವಿಜಿಯಮ್ಮ ಕೌಟುಂಬಿಕ ಕಲಹದಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದಕ್ಕೆ ನಾನು ಮತ್ತು ನನ್ನ ಬೆಂಬಲಿಗರು ಕಾರಣವೆಂದು ರತನ್ಗೌಡ ಸೆಲ್ಫಿ ವಿಡಿಯೋದಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ. ಆದರೆ, ಆ ಮೂವರನ್ನೂ ನಾನು ನೋಡಿಯೇ ಇಲ್ಲ ಎಂದು ಅವರು ಹೇಳಿದರು.
ಸೆಲ್ಫಿ ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಪೊಲೀಸರನ್ನು ವಿಚಾರಿಸಿದಾದ ರತನ್ಗೌಡ, ಹನಕೆರೆ ಗ್ರಾಮದ ಕಾಂಗ್ರೆಸ್ ಮುಖಂಡ ರಾಜೇಗೌಡರ ತಮ್ಮ ಕಸ್ತೂರಿ ಎಂದು ಸೆಲ್ಫಿ ವಿಡಿಯೋದಲ್ಲಿ ಹೇಳಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ನನಗೆ ರತನ್ಗೌಡನಾಗಲೀ ಆತನ ತಂದೆ-ತಾಯಿಯಾಗಲೀ ಗೊತ್ತಿಲ್ಲ. ನಾನು ಅವರನ್ನು ನೋಡಿಯೂ ಇಲ್ಲ. ಈಗಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಬಯಸಿರುವ ನನ್ನ ಮೇಲೆ ವ್ಯವಸ್ಥಿತವಾಗಿ ಕಾಣದ ಕೈಗಳು ಅಪಪ್ರಚಾರ ನಡೆಸುತ್ತಿವೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲದಿದ್ದರೂ ನನ್ನ ಹೆಸರನ್ನು ಬಳಸಿರುವ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಈ ಬಗ್ಗೆ ನಾನು ಪೊಲೀಸರಲ್ಲಿ ನಿನ್ನೆಯೇ ವಿಚಾರಿಸಿದಾಗ ಅವರು ರತನ್ಗೌಡ ಹನಕೆರೆ ಗ್ರಾಮದ ಕಾಂಗ್ರೆಸ್ ಮುಖಂಡ ರಾಜೇಗೌಡರ ಪುತ್ರಿ ಕಸ್ತೂರಿ ಎಂಬುವರನ್ನು ಮದುವೆಯಾಗಿದ್ದಾರೆ. ಕೌಟುಂಬಿಕ ಕಲಹದಿಂದ ವಿಷ ಸೇವಿಸಿದ್ದಾರೆ ಎಂಬುದು ತಿಳಿದು ಬಂದಿದೆ ಎಂದು ಅವರು ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆತಂದ ರತನ್ಗೌಡ ಅವರಿಂದ ನನ್ನ ಬಗ್ಗೆ ಸಲ್ಲದ ಆರೋಪ ಮಾಡಿ ಸೆಲ್ಫಿ ವಿಡಿಯೋ ಮಾಡಲಾಗಿದೆ ಎಂದ ಅವರು, ಪೊಲೀಸರ ನಿಷ್ಪಕ್ಷಪಾತ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ ಎಂದರು.
ಜೆಡಿಎಸ್ ಮುಖಂಡರಾದ ಅಶ್ವತ್, ಅಶೋಕ್, ರವಿ, ಚೆನ್ನಪ್ಪ, ಸಿದ್ದರಾಜು ಹಾಗೂ ದೇವರಾಜು ಉಪಸ್ಥಿತರಿದ್ದರು.