ಮೈಸೂರು: ಕರ್ನಾಟಕದ ಬಸ್ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ
ಮೈಸೂರು,ಎ.12: ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ಕಿಡಿಗೇಡಿಗಳು ಕರ್ನಾಟಕದ ಸರ್ಕಾರಿ ಬಸ್ ಅನ್ನು ಅಡ್ಡಗಟ್ಟಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ ನಡೆಸಿತು.
ಮೈಸೂರು ನ್ಯಾಯಾಲಯದ ಗುರುವಾರ ಅನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ತಮಿಳುನಾಡು ಕನ್ನಡಿಗರ ಮೇಲೆ ಕಾವೇರಿ ನದಿ ವಿಚಾರವಾಗಿ ಖ್ಯಾತೆ ತೆಗೆದು ತೊಂದರೆ ಕೊಡುತ್ತಿದೆ. ರಾಜಕೀಯಕ್ಕೆ ಇತ್ತೀಚೆಗೆ ಎಂಟ್ರಿ ಕೊಡುತ್ತಿರುವ ಕನ್ನಡಿಗ ನಟ ರಜನೀಕಾಂತ್ ತಮ್ಮ ರಾಜಕೀಯ ಹಿತಾಸಕ್ತಿ ಮತ್ತು ಲಾಭಕ್ಕಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಒತ್ತಾಯಿಸಿರುವುದು ನೋವಿನ ಸಂಗತಿಯಾಗಿದೆ ಎಂದರು. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮರಣ ಶಾಸನವಾಗಲಿರುವ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸದೇ ರಾಷ್ಟ್ರೀಯ ಜಲನೀತಿಯನ್ನು ರೂಪಿಸಬೇಕು. ನಮ್ಮ ಜಲಾಶಯಗಳಲ್ಲಿರುವ ನೀರಿನ ಪ್ರಮಾಣವನ್ನು ಆಧರಿಸಿ ನೀರನ್ನು ಹಂಚಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪ್ರಜೀಶ್, ಪಿ.ಶಾಂತಮೂರ್ತಿ, ಸುನಿಲ್ ಕುಮಾರ್, ಗುರುಮಲ್ಲಪ್ಪ, ಶಾಂತರಾಜೇ ಅರಸ್, ನಂಜುಂಡಸ್ವಾಮಿ, ರವಿತೇಜ, ಜಗದೀಶ್, ಮಿನಿಬಂಗಾರಪ್ಪ, ಹರೀಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.