ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಡಿಸಿ ಅಗತ್ಯ ಕ್ರಮ ವಹಿಸಲಿ: ಸಿ.ಟಿ.ರವಿ
ಚಿಕ್ಕಮಗಳೂರು, ಎ.14: ನೀತಿ ಸಂಹಿತೆ ಕಾರಣದಿಂದಾಗಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಸಮಸ್ಯೆ ಬಗ್ಗೆ ಆದ್ಯತೆ ಮೇರೆಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಉದ್ಭವಿಸಿರುವ ಗ್ರಾಮಗಳಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಲಕ್ಯಾ, ಸಖರಾಯಪಟ್ಟಣ, ಸೇರಿದಂತೆ ಅನೇಕ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಇದೆ. ಸಮಸ್ಯೆಯಿರುವ ಗ್ರಾಮಗಳ ಪಟ್ಟಿಮಾಡಿ ಜಿಲ್ಲಾಡಳಿತಕ್ಕೆ ನೀಡಿದ್ದೇವೆ. ಸರಕಾರ ಬೋರ್ವೇಲ್ ಕೊರೆಸುತ್ತಿಲ್ಲ. ಬೇರೆ ಮೂಲಗಳಿಂದ ನೀರು ಕೊಡಲು ಅವಕಾಶ ನೀಡುತ್ತಿಲ್ಲ. ಸಖರಾಯಪಟ್ಟಣದಲ್ಲಿ ಮೂರು ದಿನಗಳ ಹಿಂದೆ ನೀರು ಪೂರೈಸುತ್ತಿದ್ದ ಟ್ಯಾಂಕರ್ ಲಾರಿಯನ್ನು ಸೀಜ್ ಮಾಡಿ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ದೇವಾಲಯದ ಹಣದಲ್ಲಿ ನೀರು ಪೂರೈಸಲಾಗುತ್ತಿದೆ ಎಂಬ ಬಗ್ಗೆ ಗ್ರಾಮಸ್ಥರು ದಾಖಲೆಗಳನ್ನು ನೀಡಿದ ಮೇಲೆ ಲಾರಿಗಳನ್ನು ಬಿಡಲಾಗಿದೆ ಎಂದರು.
ಗ್ರಾಮ ಪಂಚಾಯತ್ ಪಿಡಿಒಗಳು ಕುಡಿಯುವ ನೀರಿನ ಬಗ್ಗೆ ಜವಾಬ್ದಾರಿ ತೆಗೆದುಕೊಂಡು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾಗಿತ್ತು. ಆದರೆ ಪಿಡಿಒಗಳು ನೀರು ಸರಬರಾಜು ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ರಾಜಕೀಯ ಪಕ್ಷಗಳು ಬೆಂಬಲಿಗರು ನೀರು ಪೂರೈಸುವುದನ್ನು ತಡೆಯಲು ಸೂಚನೆ ನೀಡುತ್ತಿದ್ದಾರೆ. ಆದರೆ ಪರ್ಯಾಯ ವ್ಯವಸ್ಥೆ ಮಾಡುತ್ತಿಲ್ಲ. ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಹಾಗಾಗಿ ಜಿಲ್ಲಾಡಳಿತವೇ ಈ ಗ್ರಾಮಗಳಿಗೆ ನೀರು ಪೂರೈಸಲು ಅಗತ್ಯ ಕ್ರಮವಹಿಸಬೇಕೆಂದ ಅವರು, ನೀರು ನೀಡದಿದ್ದರೆ ಜನ ಧಂಗೆ ಏಳುತ್ತಾರೆ. ಆದ್ದರಿಂದ ಮೊದಲು ನೀರು ಕೊಡಿ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ ಎಂದರು.
ಎರಡು ತಾಲೂಕಿನ ಇಒಗಳನ್ನು ಕರೆದು ಮೀಟಿಂಗ್ ಮಾಡಿದ್ದೇನೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಪಿಡಿಒಗಳನ್ನು ಕರೆದು ಜವಾಬ್ದಾರಿ ವಹಿಸುವಂತೆ ಆಗ್ರಹಿಸಿದ್ದೇನೆ. ಕೆಲವು ಪಿಡಿಒಗಳು ಆರು ಗಂಟೆಯ ಮೇಲೆ ಫೋನ್ ಮಾಡಿದರೇ ನಮ್ಮ ಆಫೀಸ್ ಡ್ಯೂಟಿ ಮುಗಿದಿದೆ ಎಂದು ಉತ್ತರಿಸುತ್ತಾರೆ. ಚುನಾವಣೆ ವೇಳೆ ನೀತಿ ಸಂಹಿತೆ ಇರುವುದರಿಂದ ಜನಪ್ರತಿನಿಧಿಗಳು ಈ ಕೆಲಸ ಮಾಡಲಾಗುವುದಿಲ್ಲ. ಪಿಡಿಒಗಳು ಜನರ ನಡುವೆ ಇದ್ದು ಕೆಲಸ ಮಾಡಬೇಕು. ಆದರೆ ಅವರು ಉಡಾಫೆಯಾಗಿ ಉತ್ತರಿಸುತ್ತಾರೆ. ಚುನಾವಣಾ ಪ್ರತಿನಿಧಿಗಳಿಗೆ ನೀತಿ ಸಂಹಿತೆ ಅಡ್ಡಬರುತ್ತಿದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಜನರಿಗೆ ಸ್ವಂಧಿಸುವರು ಯಾರು ಎಂಬ ಸಮಸ್ಯೆ ತಲೆದೋರುತ್ತಿದೆ. ಆದ್ದರಿಂದ ಕುಡಿಯುವ ನೀರಿಗೆ ವಿಶೇಷ ಗಮನ ನೀಡುವಂತೆ ಮಾನವೀಯ ದೃಷ್ಠಿಯಿಂದ ಜಿಲ್ಲಾಡಳಿತದ ಮುಂದೆ ಮನವಿ ಮಾಡಲಾಗಿದೆ ಎಂದರು.
ಪಿಳ್ಳೇನಹಳ್ಳಿ ಗ್ರಾ.ಪಂ. ಮೂರು, ಸಖರಾಯಪಟ್ಟಣ ಒಂದು, ಬಾಣೂರು ಗ್ರಾ.ಪಂ. ಮೂರು, ನೀಡುಗಟ್ಟ ಆರು, ದೇವನೂರು ಐದು, ಹುಲಿಕೆರೆ ಮೂರು, ಜೋಡಿಹೊಚ್ಚೆಳ್ಳಿ ನಾಲ್ಕು, ಚಿಕ್ಕದೇವನೂರು ಮೂರು, ನಾಗೇನಹಳ್ಳಿ ಪಂಚಾಯತ್ ನಲ್ಲಿ ಐದು ಗ್ರಾಮದಲ್ಲಿ ಎಸ್.ಬಿದರೆ ಮೂರು, ಬಿಳಿಕಲ್ಲಳ್ಳಿ ಗ್ರಾಮದಲ್ಲಿ ನಾಲ್ಕು, ಮಲ್ಲೇನಹಳ್ಳಿ ಐದು, ದಾಸರಹಳ್ಳಿ ಎರಡು, ಬೆಳವಾಡಿ ಪಂಚಾಯತ್ ಒಂದು, ಹೀರೆಗೌಜ ನಾಲ್ಕು ಪಂಚಾಯತ್ ಗಳು ಸೇರಿದಂತೆ ಅನೇಕ ಪಂಚಾಯತ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.