ಲೇಖಕಿ ವಿಜಯಗೌರಿ ಕೆ.ಆರ್.
ಮಂಗಳೂರು, ಎ. 19: ನಿವೃತ್ತ ಶಿಕ್ಷಕಿ, ಹಿರಿಯ ಲೇಖಕಿ ವಿಜಯಗೌರಿ ಪಕ್ಕಳ ಕೆ.ಆರ್. (73) ಅಲ್ಪ ಕಾಲದ ಅಸೌಖ್ಯ ದಿಂದ ಗುರುವಾರ ಮುಂಜಾನೆ ನಿಧನರಾದರು.
ಮಂಗಳೂರು ಕದ್ರಿಕಂಬಳ ನಿವಾಸಿಯಾದ ಅವರು ನವಭಾರತ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಪತ್ರಕರ್ತ, ಸಿ.ಪಿ.ಎಂ. ಧುರೀಣ ದಿ. ಕೆ.ಎಂ.ರಘುವೀರ ಶೆಟ್ಟಿ ಅವರ ಪುತ್ರಿ.
ಜೆಪ್ಪು ಸಂತ ಜೆರೋಸಾ ಪ್ರೌಢಶಾಲೆಯಲ್ಲಿ 38 ವರ್ಷ ಹಿಂದಿ ಶಿಕ್ಷಕಿಯಾಗಿದ್ದ ವಿಜಯ ಗೌರಿ ಕನ್ನಡ ಮತ್ತು ತುಳು ಭಾಷೆಯಲ್ಲಿ ಕತೆ, ಕವಿತೆ ಮತ್ತು ಲೇಖನಗಳನ್ನು ಬರೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಎರಡನೇ ಬ್ಯಾಚ್ ವಿದ್ಯಾರ್ಥಿನಿಯಾಗಿದ್ದ ಅವರು ತಮ್ಮ ಗುರುಗಳಾದ ಎಸ್.ವಿ.ಪರಮೇಶ್ವರ ಭಟ್ಟರ ಬಗ್ಗೆ 'ಎಸ್ವಿ ಪಿ ಬದುಕು-ಬರಹ' ಎಂಬ ಕೃತಿಯನ್ನು ಬರೆದು ಪ್ರಕಟಿಸಿದ್ದಾರೆ. ಹಲವು ಕವಿಗೋಷ್ಠಿ ಮತ್ತು ಸಾಹಿತ್ಯ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಸಮ್ಮಾನವನ್ನೂ ಪಡೆದಿದ್ದಾರೆ.
ಪತಿ ಕುಕ್ಕಾಜೆ ದಾಸಪ್ಪ ಪಕ್ಕಳ , ಏಕೈಕ ಪುತ್ರಿ ವಿದ್ಯಾ ಮೂಕಾಂಬಿಕ ಹಾಗೂ ಅಳಿಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸೇರಿದಂತೆ ಮೊಮ್ಮಕ್ಕಳು ಮತ್ತು ಅಪಾರ ಶಿಷ್ಯವರ್ಗ ಮತ್ತು ಬಂಧುಬಳಗವನ್ನು ಅವರು ಅಗಲಿದ್ದಾರೆ. ವಿಜಯಗೌರಿ ಅವರ ಅಂತಿಮ ಇಚ್ಛೆಯಂತೆ ಗುರುವಾರ ನೇತ್ರದಾನ ಪ್ರಕ್ರಿಯೆಯನ್ನು ನಡೆಸಲಾಗಿದೆ.