ಬಿಜೆಪಿ ರಾಜ್ಯ ನಾಯಕರ ನಡೆಗೆ ಬೇಸರ: ಚುನಾವಣೆಯಲ್ಲಿ ತಟಸ್ಥವಾಗಿರಲು ಸೊಗಡು ಶಿವಣ್ಣ ಬಣ ತೀರ್ಮಾನ
ತುಮಕೂರು,ಎ.25: ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿರುವ ಹಿನ್ನೆಲೆಯಲ್ಲಿ ತುಮಕೂರು ನಗರವೂ ಸೇರಿದಂತೆ, ಜಿಲ್ಲೆಯ 11 ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದೆ ತಟಸ್ಥರಾಗಿರಲು ತೀರ್ಮಾನಿಸಲಾಗಿದೆ ಎಂದು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2013ರ ಚುನಾವಣೆ ನಂತರ ಕೆಜೆಪಿಯಿಂದ ಬಿಜೆಪಿಗೆ ಬಂದ ಅಪ್ಪ, ಮಕ್ಕಳು ಸಂಪೂರ್ಣವಾಗಿ ಪಕ್ಷದ ಮೂಲಕ ಕಾರ್ಯಕರ್ತರನ್ನು ಕಡೆಗಣಿಸಿದ್ದು, ತುರ್ತು ಪರಿಸ್ಥಿತಿ ಕಾಲದಲ್ಲಿ ಜೈಲಿಗೆ ಹೋಗಿ ಪಕ್ಷ ಕಟ್ಟಿದ ನನ್ನನ್ನು ಸೇರಿದಂತೆ ಮೂಲ ಕಾರ್ಯಕರ್ತರನ್ನು ಕಡೆಗಣಿಸಿ, ಕೆಜೆಪಿಯಿಂದ ಬಿಜೆಪಿಗೆ ಬಂದವರಿಗೆ ಟಿಕೇಟ್ ನೀಡಲಾಗಿದೆ. ಇದರಿಂದ ಕಾರ್ಯಕರ್ತರು, ಮುಖಂಡರು ಬೇಸರಗೊಂಡಿದ್ದು ,ಬಿಜೆಪಿ ಪಕ್ಷದ ಕಾರ್ಯಕರ್ತರಾಗಿದ್ದುಕೊಂಡೇ ಚುನಾವಣೆಯಲ್ಲಿ ತಟಸ್ಥವಾಗಿರಲು ನಿರ್ಧರಿಸಲಾಗಿದೆ. ಮೇ.12 ನಂತರ ಪಕ್ಷವನ್ನು ಸದೃಢವಾಗಿ ಕಟ್ಟಲು ಶ್ರಮಿಸುವುದಾಗಿ ತಿಳಿಸಿದರು.
ಕಳೆದ 2013 ರಲ್ಲಿ ನಡೆದ ಚುನಾವಣೆಯಲ್ಲಿ ಕೆಲ ಮೂಲ ಬಿಜೆಪಿ ಕಾರ್ಯಕರ್ತರು ಕೆಜೆಪಿ ಸೇರ್ಪಡೆಗೊಂಡು, ಅಲ್ಲಿಯೂ ನೆಲೆಯೂರಲಾರದೆ ವಾಪಸ್ ಬಿಜೆಪಿಗೆ ಬಂದಿದ್ದಾರೆ. ನಮ್ಮದು ಹಿಂದುಗಳ ರಕ್ಷಣೆಗೆ ಇರುವ ಪಕ್ಷ. ಆದ್ದರಿಂದ 2018ರ ಚುನಾವಣೆಯ ಫಲಿತಾಂಶದ ನಂತರ ಪಕ್ಷವನ್ನು ಸದೃಢವಾಗಿ ಕಟ್ಟುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಎಸ್.ಶಿವಣ್ಣ ತಿಳಿಸಿದರು.
ಅಪ್ಪ, ಮಕ್ಕಳಿಂದ ಬಿಜೆಪಿ ಕಾರ್ಯಕರ್ತರ ಕಡೆಗಣನೆ ಎಷ್ಟರ ಮಟ್ಟಿಗೆ ಇದೆ ಎಂದರೆ, ಇತ್ತೀಚೆಗೆ ನಗರದ ಸಿದ್ಧಗಂಗಾ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಭೇಟಿ ನೀಡಿದ್ದ ಸಂದರ್ಭದಲ್ಲಿ ನಾಲ್ಕು ಬಾರಿ ಶಾಸಕ, ಎರಡು ಬಾರಿ ಸಚಿವನಾಗಿದ್ದ ನನಗೆ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ.ಬಿ.ನಂದೀಶ್ ಅವರಿಗೆ ತಲಾ ಒಂದೊಂದು ಪಾಸು ವಿತರಿಸಿದ್ದು ಬಿಟ್ಟರೆ, ಇದುವರೆಗೂ ಪಕ್ಷ ಕಟ್ಟಿ ಬೆಳೆಸಿದ ಕಾರ್ಯಕರ್ತರಿಗೆ ಪಾಸ ನೀಡಿರಲಿಲ್ಲ. ಹೀಗಾದರೆ ಪಕ್ಷ ಮುನ್ನೆಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಅಪ್ಪ ಮಕ್ಕಳಿಂದಾಗಿ ಇಡೀ ಜಿಲ್ಲೆಯಲ್ಲಿ ಬಿಜೆಪಿ ನೆಲಕಚ್ಚಲಿದೆ ಎಂದು ಭವಿಷ್ಯ ನುಡಿದರು.
ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ವೈ ಅವರು ಜಿಲ್ಲೆಯ ಬಿಜೆಪಿ ಜವಾಬ್ದಾರಿಯನ್ನು ಮಾಜಿ ಸಂಸದ ಜಿ.ಎಸ್. ಬಸವರಾಜು ಮತ್ತು ಪುತ್ರ ಜಿಲ್ಲಾಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್ ಕೈಗೆ ಅಧಿಕಾರ ಕೊಟ್ಟು ನಂತರ ಜಿಲ್ಲೆಯಲ್ಲಿ ಬಿಜೆಪಿ ಸರ್ವನಾಶಕ್ಕೆ ಕಾರಣವಾಗಿದ್ದಾರೆ. ಅವರೊಂದಿಗೆ ಇರುವವರೆಲ್ಲಾ ಪೇಮೆಂಟ್ ಕಾರ್ಯಕರ್ತರು. ವಿವಿಧ ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದವರು. ಮೀಟರ್ ಬಡ್ಡಿ ದಂಧೆ ನಡೆಸುವವರು. ಪರರ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕಿದವರು. ಇಂತಹವ ರೊಂದಿಗೆ ಚುನಾವಣಾ ಪ್ರಚಾರಕ್ಕೆ ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದ ಎಸ್.ಶಿವಣ್ಣ, ಪಕ್ಷದ ಮಾನ, ಮರ್ಯಾದೆ ಉಳಿಯಬೇಕು ಎಂಬ ಕಾರಣಕ್ಕೆ ನಾವು ಈ ಬಾರಿ ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ. ರಾಜಿ ಸಂಧಾನಕ್ಕಾಗಿ ಬಿ.ಎಸ್.ವೈ ನಮ್ಮ ಮನೆ ಬಾಗಿಲಿಗೆ ಬರುವುದು ಬೇಡ ಎಂದರು.
ಈಗ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿ ವಲಸಿಗರಿಗೆ ಪಕ್ಷದ ಟಿಕೇಟ್ ನೀಡಿದ್ದು, ಜಿಲ್ಲೆಯಾದ್ಯಂತ ಅಸಮಾಧಾನ ಭುಗಿಲೆದ್ದಿದೆ. ಚಿಕ್ಕನಾಯಕನಹಳ್ಳಿಯಲ್ಲಿ ಕೆ.ಎಸ್.ಕಿರಣ್ಕುಮಾರ್, ತುರುವೇಕೆರೆ ಯಲ್ಲಿ ಚೌದ್ರಿ ನಾಗೇಶ್, ಗುಬ್ಬಿಯಲ್ಲಿ ದಿಲೀಪ್, ಪಾವಗಡದಲ್ಲಿ ಕೃಷ್ಣಾನಾಯ್ಕ ಸೇರಿದಂತೆ ಶಿರಾ, ಕೊರಟಗೆರೆ, ಮಧುಗಿರಿ ತಾಲೂಕುಗಳಲ್ಲೂ ಸಹ ಮೂಲ ಬಿಜೆಪಿ ಅಭ್ಯರ್ಥಿಗಳು ಟಿಕೆಟ್ ವಂಚಿತರಾಗಿದ್ದು, ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರ ನಡೆಗೆ ತೀವ್ರ ಕೆಂಡಾಮಂಡಲವಾಗಿದ್ದಾರೆ ಎಂದು ಹೇಳಿದರು.
ಶಿರಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಘೋಣೆಯಾಗಿದ್ದ ಬಿ.ಕೆ.ಮಂಜುನಾಥ್ ಗೆ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳಿಗೆ ಅಸಮಾಧಾನಗೊಂಡು ಟಿಕೆಟ್ ನಿರಾಕರಿಸಿದ್ದಾರೆ. ಅದೇ ರೀತಿ ಮಧುಗಿರಿಯಲ್ಲಿ ಮತ್ಯಾರನ್ನೋ ಗೆಲ್ಲಿಸುವ ಸಲುವಾಗಿ ಬಿಜೆಪಿ ಟಿಕೆಟ್ ನೀಡಿದ್ದ ಮಾಜಿ ವಿಪ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್ ಟಿಕೆಟ್ ನಿರಾಕರಿಸಿದ್ದಾರೆ. ಇಷ್ಟೇ ಅಲ್ಲದೆ ಪಾವಗಡದಲ್ಲಿ ನಾಗರಿಕರ ಕಷ್ಟ ಸುಖಗಳಿಗೆ ಸ್ಪಂದಿಸುವ ವಕೀಲ ಕೃಷ್ಣಾನಾಯ್ಕಗೆ ಟಿಕೆಟ್ ನೀಡುವುದು ಬಿಟ್ಟು, ದುಡ್ಡಿರುವವರಿಗೆ ಟಿಕೆಟ್ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಅಪ್ಪ ಮಗನಿಂದ ಪಕ್ಷ ಜಿಲ್ಲೆಯಲ್ಲಿ ಸರ್ವನಾಶವಾಗುವುದಂತೂ ಸತ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್, ಶಾಂತರಾಜು, ಪಂಚಾಕ್ಷರಯ್ಯ, ಕೆ.ಪಿ.ಮಹೇಶ್, ಪ್ರಕಾಶ್, ಚಂದನ್ಕುಮಾರ್, ಏಕಾಂತ್, ನವೀನ್ಕುಮಾರ್, ಬನಶಂಕರಿ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.