ಬ್ಲೂ ಫ್ಲ್ಯಾಗ್ ಮೂಲಕ ಬೀಚ್ ಅಭಿವೃದ್ಧಿ: ಪಡುಬಿದ್ರಿ ಸರ್ವೇಗೆ ಸ್ಥಳೀಯರ ವಿರೋಧ
ಪಡುಬಿದ್ರಿ,ಜು.12: ಪಡುಬಿದ್ರಿ ಬೀಚ್ಗೆ ನೀಲ ಪತಾಕೆ (ಬ್ಲೂ ಫ್ಲ್ಯಾಗ್) ಅಂತರಾಷ್ಟ್ರೀಯ ಮಾನ್ಯತೆ ಪಡೆಯಲಿದ್ದು, ಈ ನಿಟ್ಟಿನಲ್ಲಿ ಬೀಚ್ನ ಸಮಗ್ರ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಬುಧವಾರ ಸರ್ವೇ ನಡೆಸುತ್ತಿರುವುದನ್ನು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಬ್ಲೂ ಫ್ಲ್ಯಾಗ್ ಯೋಜನೆಗೆ ಭಾರತದಲ್ಲಿ 13 ಬೀಚ್ಗಳು ಆಯ್ಕೆಗೊಂಡಿಂದ್ದು, ರಾಜ್ಯದಲ್ಲಿ ಪಡುಬಿದ್ರಿ ಬೀಚ್ನ್ನು ಆಯ್ಕೆಗೊಳಿಸಿಲಾಗಿದೆ. ಬೀಚ್ನ್ನು ಸಮಗ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಪಂಚಾಯತ್ ಗ್ರಾಮಲೆಕ್ಕಿಗರೊಂದಿಗೆ ಪಡುಬಿದ್ರಿ ಬೀಚ್ನ ನಡಿಪಟ್ಣ ಮತ್ತು ಕಾಡಿಪಟ್ಣ ಪರಿಸರದಲ್ಲಿ ಜಾಗದ ಸರ್ವೇ ನಡೆಸಲು ಮುಂದಾಗಿದ್ದರು. ಆತಂಕಿತರಾದ ಸ್ಥಳೀಯರು ಸರ್ವೇ ನಡೆಸಲು ಬಂದವರನ್ನು ತಡೆದು ವಾಪಾಸು ಕಳುಹಿಸಿದ್ದಾರೆ.
ಬ್ಲೂ ಫ್ಲ್ಯಾಗ್ ಯೋಜನೆ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಅಭಿವೃದ್ಧಿಯ ಅಂಗವಾಗಿದ್ದು, ಇದರಿಂದ ಸ್ಥಳೀಯ ನಿವಾಸಿಗಳಿಗೆ ಯಾವುದೇ ರೀತಿಯ ತೊಡಕು ಉಂಟಾಗುವುದಿಲ್ಲ. ಈ ಪ್ರದೇಶದ ಮೀನುಗಾರಿಕಾ ರಸ್ತೆಯ ವಿಸ್ತರಣೆಗಾಗಿ ಸರ್ವೇ ನಡೆಸುತ್ತಿದ್ದರು. ಬ್ಲೂ ಫ್ಲ್ಯಾಗ್ ಯೋಜನೆಗೆ ಸಂಬಂಧಪಟ್ಟ ಅಭಿವೃದ್ಧಿ ಕಾರ್ಯಗಳು ಪಡುಬಿದ್ರಿಯ ಮುಖ್ಯ ಬೀಚ್ ಪರಿಸರದಲ್ಲಿ ನಡೆಸಲಾಗುತ್ತಿಲ್ಲ. ಮುಟ್ಟವಳಿವೆ ಸಮೀಪವಿರುವ ಸುಮಾರು 1 ಎಕರೆಯ ಸರ್ಕಾರಿ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ. ಮೀನುಗಾರಿಕೆಗೆ ಆತಂಕ ಬೇಡ. ರಸ್ತೆ ಅಗಲೀಕರಣಕ್ಕಾಗಿ ಕುಮ್ಕಿ ಜಾಗಗಳು ಮಾತ್ರ ಸರ್ವೇಗೆ ಒಳಗಾಗುತ್ತಿದೆ. ಉಳಿದಂತೆ ಮೀನುಗಾರರ ಒಂದಿಂಚು ಜಾಗವನ್ನೂ ಮುಟ್ಟಲಾಗುವುದಿಲ್ಲ. ಈ ಯೋಜನೆಯಿಂದ ಸ್ಥಳೀಯ ನಿವಾಸಿಗಳಿಗೆ ಬಹಳಷ್ಟು ಲಾಭವಾಗಲಿದೆ ಎಂದು ಉಡುಪಿ ಜಿಲ್ಲಾ ಬೀಚ್ ಪ್ರವಾಸೋಧ್ಯಮ ಅಭಿವೃದ್ಧಿ ಸಮಿತಿಯ ಮನೋಹರ್ ಶೆಟ್ಟಿ ತಿಳಿಸಿದ್ದಾರೆ.
ಬ್ಲೂ ಫ್ಲ್ಯಾಗ್ ಯೋಜನೆಯ ಮೂಲಕ ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಮೂಲಕ ಸಮಗ್ರ ಅಭಿವೃದ್ಧಿ ಪಡಿಸಲಾಗುವುದು. ಪರಿಸರ ಸ್ನೇಹಿಯಾಗಿ ಈ ಯೋಜನೆ ನಿರ್ಮಾಣಗೊಳ್ಳಲಿದೆ. ಇದು ಕೇಂದ್ರದ ಪರಿಸರದ ಇಲಾಖೆಯ ಯೋಜನೆಯಾಗಿದೆ. 500 ಮೀಟರ್ ವ್ಯಾಪ್ತಿಯೊಳಗಡೆ ಅಭಿವೃದ್ಧಿ ಪಡಿಸಲಾಗುವುದು. ಸರ್ಕಾರ ಜಮೀನಿನಲ್ಲೇ ಯೋಜನೆ ರೂಪಿಸಿಕೊಳ್ಳಲು ಸರ್ವೇ ನಡೆಸಲಾಗಿದೆ. ಯಾವುದೇ ಖಾಸಗಿ ಜಾಗವನ್ನು, ಮರ, ಗಿಡಗಳು ಹಾಗೂ ಯಾವುದೇ ಮನೆಗಳನ್ನು ತೆರವುಗೊಳಿಸುವುದಿಲ್ಲ. ಯೋಜನೆ ಬಗ್ಗೆ ಸಂದೇಹವಿದ್ದಲ್ಲಿ ಶುಕ್ರವಾರ ಸಭೆಯಲ್ಲಿ ಬಂದು ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರವಾಸೋಧ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ಪತ್ರಿಕೆಗೆ ತಿಳಿಸಿದ್ದಾರೆ.
ರಸ್ತೆ ಅಗಲೀಕರಣ, ಸರ್ವೇ ಕಾರ್ಯ ಮತ್ತು ಬ್ಲೂ ಫ್ಲ್ಯಾಗ್ ಯೋಜನೆಯ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸುವ ಸಲುವಾಗಿ ಜಿಲ್ಲಾಡಳಿತವು ಶುಕ್ರವಾರ ಸಂಜೆ ಸಾಗರ ವಿದ್ಯಾ ಮಂದಿರ ಶಾಲೆಯಲ್ಲಿ ಸಭೆ ಕರೆದಿದ್ದು ಕಾಡಿಪಟ್ಟಣ ಮತ್ತು ನಡಿಪಟ್ಣ ಊರುಗಳು ಮೊಗವೀರ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.