2019ರೊಳಗೆ ದ.ಕ. ಜಿಲ್ಲಾಧಿಕಾರಿ ನೂತನ ಕಚೇರಿ ಕಟ್ಟಡ ಪೂರ್ಣ: ಯು.ಟಿ.ಖಾದರ್
ಮಂಗಳೂರು, ಜು.27: ಪಡೀಲ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ದ.ಕ. ಜಿಲ್ಲಾಧಿಕಾರಿಯ ನೂತನ ಕಚೇರಿಯ ಕಟ್ಟಡ ಸಂಕೀರ್ಣ 2019ರ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರ ಹೊರವಲಯದ ಪಡೀಲ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾಧಿಕಾರಿಯ ನೂತನ ಕಚೇರಿ ಕಟ್ಟಡ ಸಂಕೀರ್ಣದ ಕಾಮಗಾರಿಯನ್ನು ಇಂದು ವೀಕ್ಷಿಸಿದ ಬಳಿಕ ಅವರು ಸುದ್ದಿಗಾರ ರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸುಮಾರು 2.18 ಲಕ್ಷ ಚದರ ಅಡಿ ವಿಸ್ತೀರ್ಣದ ತಳ ಅಂತಸ್ತು ಸೇರಿ ಎರಡು ಮಹಡಿಯ ಕಟ್ಟಡ ಸಂಕೀರ್ಣದ ಯೋಜನೆಗೆ ಸಿದ್ದರಾಮಯ್ಯ ನೇತೃತ್ವದ ಹಿಂದಿನ ರಾಜ್ಯ ಸರಕಾರ 41 ಕೋಟಿ ರೂ. ಮಂಜೂರು ಮಾಡಿತ್ತು. ಈ ಪೈಕಿ 10 ಕೋಟಿ ರೂ. ಬಿಡುಗಡೆ ಮಾಡಿದ್ದು ಕಳೆದ ನಾಲ್ಕು ತಿಂಗಳಲ್ಲಿ ಒಂದು ಹಂತದ ಕಾಮಗಾರಿ ನಡೆದಿದೆ. ನಿಗದಿತ ಸಮಯದೊಳಗೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪುರ್ಣಗೊಳಿಸಲಾಗುವುದು. ಹೆಚ್ಚುವರಿ ಅನುದಾನದ ಬಗ್ಗೆ ಹಾಲಿ ಮುಖ್ಯ ಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸವುದಾಗಿ ಸಚಿವರು ಹೇಳಿದರು.
ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಈ ಯೋಜನೆ ಆರಂಭಗೊಂಡಿದೆ. ಈ ಕಟ್ಟಡ ಸಂಕೀರ್ಣದಲ್ಲಿ 138 ಇಲಾಖೆಗಳು ಕಾರ್ಯನಿರ್ವಹಿಸಲಿವೆ.ತಳ ಅಂತಸ್ತಿನಲ್ಲಿ 230ಕ್ಕೂ ಅಧಿಕ ವಾಹನ ನಿಲುಗಡೆಗೆ ಸ್ಥಳಾವಕಾಶವಿರಲಿದೆ. ಹಾಲಿ ಪ್ರದೇಶದಲ್ಲಿದ್ದ ಸಾಮಾಜಿಕ ಅರಣ್ಯ ಇಲಾಖಾ ಕಚೇರಿಗೆ ಬಂಗ್ರ ಕೂಳೂರಿನಲ್ಲಿ ಸ್ಥಳಾವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಮುಖವಾಗಿ ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಕಚೇರಿಗಳು ಕಾರ್ಯನಿರ್ವಹಿಸಲಿವೆ. ನೂತನ ಜಿಲ್ಲಾಧಿಕಾರಿ ಕಚೇರಿಯ ಪಕ್ಕದಲ್ಲಿರುವ ಬಜಾಲ್, ಪಡೀಲ್ ಜಪ್ಪಿನ ಮೊಗರು ಪ್ರದೇಶದ ಸಂಪರ್ಕ ರಸ್ತೆಯ ಅಭಿವೃದ್ಧಿಯ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ಖಾದರ್ ನುಡಿದರು.
*ಭೂಪರಿವರ್ತನೆ, 11ಇ ನಕ್ಷೆ, ಸಿಂಗಲ್ ಸೈಟ್ ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಶನಿವಾರ ಕಂದಾಯ ಸಚಿವರ ಜೊತೆ ಮಾತುಕತೆ ನಡೆಸಲಾಗುವುದು ಎಂದು ಖಾದರ್ ತಿಳಿಸಿದರು.
*ತಾನಾಗಿದ್ದರೆ ಬುದ್ಧಿಜೀವಿಗಳಿಗೆ ಗುಂಡು ಹಾರಿಸಲು ಆದೇಶ ನೀಡುತ್ತಿದ್ದೆ ಎಂಬ ಬಿಜೆಪಿ ಶಾಸಕ ಬಸವ ಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಖಾದರ್, ಅವರ ಹೇಳಿಕೆಗಳ ಬಗ್ಗೆ ಮತದಾರರು ಯೋಚಿಸಬೇಕಾಗಿದೆ. ಗಾಂಧೀಜಿಯ ಕೊಲೆಯನ್ನು ಸಮರ್ಥಿಸುವವರಿಂದ, ಅದನ್ನು ವೈಭವೀಕರಿಸುವವರಿಂದ ಈ ರೀತಿಯ ಹೇಳಿಕೆಗಳು ಬರುತ್ತವೆ ಎಂದರು.
ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ. ಮಾಜಿ ಶಾಸಕ ಜೆ.ಆರ್.ಲೋಬೊ ಮಂಗಳೂರು ಮನಪಾ ಸದಸ್ಯ ಶಶಿಧರ ಹೆಗ್ಡೆ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ನಿರ್ಮಾಣ ಕಾಮಗಾರಿಯ ಇಂಜಿನಿಯರ್ಗಳು ಉಪಸ್ಥಿತರಿದ್ದರು.