ದ.ಕ.: ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018 ಕೈಪಿಡಿ ಬಿಡುಗಡೆ
ಮಂಗಳೂರು, ಜು.27: ಸ್ವಚ್ಛ ಭಾರತ ಮಿಶನ್( ಗ್ರಾ.) ಯೋಜನೆಯಡಿ ಗ್ರಾಮ ನೈರ್ಮಲ್ಯ ಸುಧಾರಣೆ ಮಾಡುವ ನಿಟ್ಟಿನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018ಕ್ಕೆ ಚಾಲನೆ ನೀಡಿದೆ. ಈ ಮೂಲಕ ಆಗಸ್ಟ್ 1ರಿಂದ ಸರಕಾರದಿಂದ ನಿಯೋಜಿತ ಸರ್ವೇ ಏಜೆನ್ಸಿಯ ತಂಡವು ಗ್ರಾಮಗಳಿಗೆ ಭೇಟಿ ನೀಡಿ ನಿಗದಿಗೊಳಿಸಿದ ಮಾನದಂಡಗಳ ಅನ್ವಯ ಪರಿಶೀಲಿಸಿ ನೈರ್ಮಲ್ಯದ ಬಗ್ಗೆ ವೌಲ್ಯ ಮಾಪನ ಮಾಡಿ ಜಿಲ್ಲೆಗಳಿಗೆ ಶ್ರೇಯಾಂಕ ನೀಡಲಿದ್ದಾರೆ ಎಂದು ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿಂದು ದ.ಕ. ಜಿಪಂ ಸ್ವಚ್ಛ ಭಾರತ ಮಿಶನ್ ಸರ್ವೇಕ್ಷಣ ಗ್ರಾಮೀಣ -2018 ಕೈಪಿಡಿಯನ್ನು ಬಿಡುಗಡೆಗೊಳಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸ್ವಚ್ಛ ಸರ್ವೇಕ್ಷಣ ತಂಡವು ದೇಶಾದ್ಯಂತ 698 ಜಿಲ್ಲೆಗಳು, 6,980 ಗ್ರಾಮಗಳು ಸೇರಿದಂತೆ 34,900 ಸಾರ್ವಜನಿಕ ಸ್ಥಳಗಳನ್ನು ಸಂದರ್ಶನಕ್ಕೆ ಒಳಪಡಿಸಿ 50 ಲಕ್ಷ ನಾಗರಿಕರ ಸಂದರ್ಶನ ಮತ್ತು ಅಭಿಪ್ರಾಯಗಳನ್ನು ಸಮಿತಿ ಸಂಗ್ರಹಿಸಲಿದೆ. ಸಮುದಾಯದಲ್ಲಿನ ಸ್ವಚ್ಛತೆಯ ದೃಷ್ಟಿಕೋನ ಅವರ ಶಿಫಾರಸುಗಳು ಮತ್ತು ಸ್ವಚ್ಛ ಭಾರತ ಮಿಶನ್ (ಗ್ರಾ)ಎಂ.ಐ.ಎಸ್. ಜಿಲ್ಲೆಗಳು ಸಾಧಿಸಿರುವ ಪ್ರಗತಿಗಳು ಹಾಗೂ ಸಮಗ್ರ ಶುಚಿತ್ವದ ನಿಯತಾಂಕಗಳ ಆಧಾರದಲ್ಲಿ ಜಿಲ್ಲೆ ಹಾಗೂ ರಾಜ್ಯಗಳಿಗೆ ಶ್ರೇಯಾಂಕಗಳನ್ನು ನೀಡಲಾಗುವುದು ಎಂದು ಸಚಿವ ಯು.ಟಿ.ಖಾದರ್ ವಿವರಿಸಿದರು.
ಆಗಸ್ಟ್ 1ರಿಂದ 30ರವರೆಗೆ ಜಿಲ್ಲೆಯ ಸಾರ್ವಜನಿಕ ಸ್ಥಳಗಳು, ಶಾಲೆಗಳು, ಅಂಗನವಾಡಿ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ, ಸಂತೆ ನಡೆಯುವ ಸ್ಥಳಗಳಲ್ಲಿ ಕುಡಿಯುವ ನೀರು ಸಂಗ್ರಹಿಸುವ ಸ್ಥಳಗಳು, ಪಂಚಾಯತ್ ಕಚೇರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಗ್ರಾಮದ ಮುಖ್ಯ ಬೀದಿಗಳಲ್ಲಿ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಶೌಚಾಲಯಗಳ ಸುಸ್ಥಿತಿಯ ಬಗ್ಗೆ ಸಮೀಕ್ಷೆ ನಡೆಯಲಿದೆ. ಸಾರ್ವಜನಿಕರು ಸಹಕಾರ ನೀಡಬೇಕೆಂದು ಸಚಿವರು ಹೇಳಿದರು.
ದ.ಕ. ಜಿಲ್ಲೆಯಲ್ಲಿ 124 ಶೌಚಾಲಯಗಳು ನಿರ್ಮಾಣ ಹಂತದಲ್ಲಿದ್ದು, ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ದ.ಕ. ಜಿಪಂ ಸಿಇಒ ಡಾ.ಎಂ.ಆರ್.ರವಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಜೆ.ಆರ್.ಲೋಬೊ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.