ಮೋದಿ ಸರಕಾರ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ: ಬಂಟ್ವಾಳ ಕಾಂಗ್ರೆಸ್
ಬಂಟ್ವಾಳ, ಜು. 27: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಈ ಹಿಂದೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಕೇಂದ್ರ ಸರಕಾರದ ಸಾಧನೆ ಶೂನ್ಯ ಎಂದು ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.
ಬಿ.ಸಿ.ರೋಡ್ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿ, ಪ್ರಧಾನಿ ಯಾಗಿ ಮೋದಿ ಅಧಿಕಾರಕ್ಕೆ ಸ್ವೀಕರಿಸಿದ ಬಳಿಕ ಭ್ರಷ್ಟಾಚಾರ ನಿರ್ಮೂಲನೆ, ಕಪ್ಪು ಹಣ ತರುವ ಆಶ್ವಾಸನೆ, ಸ್ವಚ್ಛ ಭಾರತ, ಲೋಕಪಾಲ ಮಸೂದೆ, ಉದ್ಯೋಗ ಖಾತರಿ ಕೇವಲ ಘೋಷಣೆಗಷ್ಟೇ ಸೀಮಿತವಾಗಿದೆ. ಆದರೆ, ವಾಸ್ತವವಾಗಿ ಶ್ರೀಮಂತರ ವಿಕಾಸ, ರೈತರಿಗೆ ಮೋಸ, ನೋಟ್ ಬ್ಯಾನ್ನಿಂದ ದುಷ್ಪರಿಣಾಮಗಳಾಗಿವೆ ಎಂದು ಆರೋಪಿಸಿದರು.
ವಿದೇಶಿ ನೀತಿಯ ವಿಚಾರದಲ್ಲಿ ಪಾಕಿಸ್ತಾನದೊಂದಿಗೆ ಮೃದು ಧೋರಣೆ ವಹಿಸಲಾಗುತ್ತಿದೆ. ಕೇಂದ್ರ ಸರಕಾರ ನಿರೀಕ್ಷೆಗಳನ್ನು ಹುಟ್ಟಿಸಿ ವಿಫಲ ಸರಕಾರ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದು, ಈಗ ಹುಸಿ ಘೋಷಣೆಯೊಂದಿಗೆ ಸುಳ್ಳಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಒಳಪಟ್ಟ ರಾಷ್ಟ್ರೀಯ ಹೆದ್ದಾರಿ, ಬಿ.ಸಿ.ರೋಡಿನ ಸರ್ವೀಸ್ ರಸ್ತೆ ಹದಗೆಟ್ಟಿದ್ದರೆ, ಸಂಸದರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೆ ಕೆಲಸವಾಗುತ್ತದೆ ಎಂದು ಭಾವಿಸಿದಂತಿದೆ. ಸಂಸದರು ತಮ್ಮ ವ್ಯಾಪ್ತಿಗೊಳಪಟ್ಟ ಹೆದ್ದಾರಿಯ ಗುಂಡಿಗಳನ್ನು ಮುಚ್ಚಿಸಲಿ. ಬಳಿಕ ಉಳಿದ ವಿಚಾರಗಳ ಕುರಿತು ಮಾತನಾಡಲಿ ಎಂದು ಟೀಕಿಸಿದರು.
ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಮಾತನಾಡಿ, ರಮಾನಾಥ ರೈ ಸಚಿವರಾಗಿದ್ದ ಸಂದರ್ಭ ಬಂಟ್ವಾಳ ಪುರಸಭೆ ಅಭೂತಪೂರ್ವ ಅಭಿವೃದ್ಧಿ ಹೊಂದಿದೆ ಎಂದರು. ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಮಾತನಾಡಿ, ರೈತರ ಸಾಲ ಮನ್ನಾಕ್ಕೆ ಮೋದಿ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಜಿಪಂ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪ್ರಮುಖರಾದ ಜಗದೀಶ ಕೊಲ, ಬೇಬಿ ಕುಂದರ್, ಮಾಧವ ಮಾವೆ, ಮುಹಮ್ಮದ್ ನಂದಾವರ, ಮಹೇಶ್ ನಾಯಕ್ ಉಪಸ್ಥಿತರಿದ್ದರು.