ತೆಂಗಿನ ಜೀನ್ ಬ್ಯಾಂಕ್ ಮುಚ್ಚುವುದಿಲ್ಲ: ಡಾ.ಪಿ.ಚೌಡಪ್ಪ
ಮಂಗಳೂರು, ಜು.27: ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಬಳಿಯ ತೆಂಗಿನ ಜೀನ್ ಬ್ಯಾಂಕ್ 300 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದ್ದು, ಅದನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಈ ಕುರಿತು ಕೇಂದ್ರ ಉನ್ನತಾಧಿಕಾರ ಸಮಿತಿಯ ಮುಂದೆ ಅಫಿದವಿತ್ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್ಐ)ಯ ನಿರ್ದೇಶಕ ಡಾ.ಪಿ.ಚೌಡಪ್ಪ ಹೇಳಿದ್ದಾರೆ.
ನಗರದಲ್ಲಿ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಈ ಬಗ್ಗೆ ಬಂದ ವರದಿಗಳಲ್ಲಿ ಹುರುಳಿಲ್ಲ. ಕಿದುವಿ ನಲ್ಲಿರುವ ತೆಂಗಿನ ಜೀನ್ ಬ್ಯಾಂಕ್ ದಕ್ಷಿಣ ಏಷ್ಯಾದ ಪ್ರಥಮ ಬ್ಯಾಂಕ್ ಎಂದೇ ಗುರುತಿಸಿಕೊಂಡಿವೆ. ತೆಂಗಿನ ಜೀನ್ ಬ್ಯಾಂಕ್ ಸ್ಥಾಪನೆಗೆ 1970ರಲ್ಲಿ ಲೀಸ್ ಆಧಾರದಲ್ಲಿ ಅರಣ್ಯ ಇಲಾಖೆ ಅಧೀನದಲ್ಲಿದ್ದ 300 ಎಕರೆ ಜಾಗ ನೀಡಲಾಗಿತ್ತು. ಈ ಲೀಸ್ ಅವಧಿ 2000ರಲ್ಲಿ ಮುಕ್ತಾಯಗೊಂಡಿದೆ. ಈ ನಡುವೆ ದೇಶಾದ್ಯಂತ ಅರಣ್ಯ ಇಲಾಖೆಯ ಅಧೀನದಲ್ಲಿರುವ ಜಾಗಗಳನ್ನು ಮರಳಿ ಪಡೆಯುವಂತೆ ಕೇಂದ್ರ ಸರಕಾರದ ಉನ್ನತಾಧಿಕಾರ ಸಮಿತಿಯು ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಸೂಚಿಸಿತ್ತು. ಅದರಂತೆ ಜೀನ್ ಬ್ಯಾಂಕ್ ಕಾರ್ಯಾಚರಿಸುತ್ತಿರುವ ಅರಣ್ಯ ಇಲಾಖೆಯ ಜಾಗವನ್ನು ಮರಳಿಸಲು ಇಲ್ಲವೇ ಲೀಸ್ ಅವಧಿ ವಿಸ್ತರಣೆಗೆ 19 ಕೋ.ರೂ. ಪಾವತಿಸುವಂತೆ ಸಚಿವಾಲಯವು ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ ಎಂದು ಅವರು ತಿಳಿಸಿದರು.
ಈ ಜೀನ್ ಬ್ಯಾಂಕ್ ಕೂಡ ಎಕರೆಗಟ್ಟಲೆ ತೆಂಗಿನ ಸಸಿಗಳನ್ನು ಹೊಂದಿದ್ದು, ಅರಣ್ಯಕ್ಕೆ ಪೂರಕವಾದ ಕೆಲಸ ಮಾಡುತ್ತಿದೆ. ಈ ಬ್ಯಾಕ್ ಸರಕಾರಿ ವ್ಯವಸ್ಥೆಯಾಗಿರುವುದರಿಂದ ಲೀಸ್ ಅವಧಿ ವಿಸ್ತರಣೆಗೆ ವಿಧಿಸಲಾಗಿರುವ 19 ಕೋ.ರೂ ಹಣವನ್ನು ಮನ್ನಾ ಮಾಡುವಂತೆ ಕೋರಲಾಗುವುದು. ಅಲ್ಲದೆ ಈ ಕೇಂದ್ರವನ್ನು ಇಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜು.30ರಂದು ದೆಹಲಿಯ ಅಧಿಕಾರಿಗಳನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲಾಗುವುದು ಎಂದು ಚೌಡಪ್ಪ ನುಡಿದರು.
ಸಿಪಿಸಿಆರ್ಐ ತನ್ನ ತಂತ್ರಜ್ಞಾನವನ್ನು ಹ್ಯಾಂಗ್ಯೋ ಸಂಸ್ಥೆಗೆ ನೀಡಿ ತೆಂಗಿನಿಂದ ಐಸ್ಕ್ರೀಂ ತಯಾರಿಸಿದೆ. ದೆಹಲಿಯಲ್ಲಿ ಇತ್ತೀಚೆಗೆ ಇದರ ಬಿಡುಗಡೆಯೂ ಆಗಿದೆ. ಕೇವಲ ತೆಂಗಿನ ಹಾಲು ಮತ್ತು ಕೊಬ್ಬರಿ ಬಳಸಿ ತಯಾರಿಸಿದ ಈ ಐಸ್ಕ್ರೀಂ ಉತ್ತಮ ಪೌಷ್ಟಿಕಾಂಶಗಳನ್ನೊಳಗೊಂಡಿದೆ ಎಂದು ಚೌಡಪ್ಪ ನುಡಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಕೆ.ಮುರಳೀಧರನ್, ಡಾ.ರವಿ ಭಟ್ ಉಪಸ್ಥಿತರಿದ್ದರು.