ರೆಡ್ಕ್ರಾಸ್ನಿಂದ 70 ಫಲಾನುಭವಿಗಳಿಗೆ ಪರಿಹಾರ ಕಿಟ್ ವಿತರಣೆ
ಉಡುಪಿ, ಜು.27: ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಪ್ರಾಕೃತಿಕ ವಿಕೋಪದಿಂದ ಹಾನಿಯಾದವರ ಕುಟುಂಬಗಳಿಗೆ ಅವಶ್ಯಕ ಪರಿಹಾರ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮವು ಶುಕ್ರವಾರ ಅಜ್ಜರಕಾಡು ರೆಡ್ಕ್ರಾಸ್ ಭವನದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನೀ.ಬಿ.ವಿಜಯ ಬಲ್ಲಾಳ್ ಫಲಾನುಭವಿಗಳಿಗೆ ಪರಿಹಾರ ಸಾಮಾಗ್ರಿಗಳನ್ನು ವಿತರಿಸಿದರು. ಉಡುಪಿ, ಕುಂದಾಪುರ, ಕಾಪು, ಬ್ರಹ್ಮಾವರ ತಾಲೂಕಿನ ಆಯ್ದ 70 ಫಲಾನುಭವಿಗಳಿಗೆ ಪರಿಹಾರ ಸಾಮಾಗ್ರಿ ಗಳಾದ ಅಡುಗೆ ಪಾತ್ರೆ ಮತ್ತು ಇತರ ಸಲಕರಣೆಗಳಾದ ಬಕೆಟ್, ಸೀರೆ, ದೋತಿ, ಶಾಲು ಮತ್ತು ಸೊಳ್ಳೆ ಪರದೆಗಳನ್ನು ವಿತರಿಸಲಾಯಿತು.
ಅಧ್ಯಕ್ಷತೆಯನ್ನು ರೆಡ್ಕ್ರಾಸ್ ಜಿಲ್ಲಾ ಶಾಖೆಯ ಸಭಾಪತಿ ಡಾ.ಉಮೇಶ್ ಪ್ರಭು ವಹಿಸಿದ್ದರು. ಜಿಲ್ಲಾ ಉಪಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ. ಸ್ವಾಗತಿಸಿದರು. ಗೌರವ ಖಜಾಂಚಿ ಟಿ.ಚಂದ್ರಶೇಖರ್ ವಂದಿಸಿದರು. ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ. ಉಪಸ್ಥಿತರಿದ್ದರು. ಯುವ ರೆಡ್ಕ್ರಾಸ್ ಚಯರ್ಮೆನ್ ಜಯರಾಮ್ ಆಚಾರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರೂ ಪಿಸಿದರು.