ದ.ಕ. ಜಿಲ್ಲಾ ಮಹಿಳಾ ಶಕ್ತಿ ಜಾಗೃತಿ ಸಮಾವೇಶ
ಮಂಗಳೂರು, ಜು.27: ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ಮಹಿಳಾ ಶಕ್ತಿ ಜಾಗೃತಿ ಸಮಾವೇಶವು ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆಯಿತು. ಮಹಿಳಾ ಶಕ್ತಿ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಬಲಗೊಳಿಸುವ ನಿಟ್ಟಿನಲ್ಲಿ ಮಹಿಳಾ ಶಕ್ತಿ ಪ್ರದರ್ಶನದ ಅಗತ್ಯವಿದೆ ಎಂದರು.
ಲೋಕಸಭೆಯಲ್ಲಿ ಈ ಬಾರಿ ಹೆಚ್ಚು ಸ್ಥಾನಗಳಿಸುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ಹೆಚ್ಚು ಶ್ರಮ ವಹಿಸಬೇಕು. ಮಹಿಳೆಯರು ಮನೆ-ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಬಗ್ಗೆ ಜಾಗೃತಿ ಮಾಡಬೇಕು. ಮಹಿಳಾ ಶಕ್ತಿಗಳನ್ನು ಸಂಘಟಿಸಬೇಕು ಎಂದರು.
ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೊ ಮಾತನಾಡಿ, ನಾವು ಪ್ರಧಾನಮಂತ್ರಿ ಅಭ್ಯರ್ಥಿ ರಾಹುಲ್ ಗಾಂಧಿ ಅವರಿಗೆ ನೇರವಾಗಿ ಕರೆ ಮಾಡಿ ಚರ್ಚಿಸಬಹುದು. ತಮ್ಮ ಮತದಾನ ಗುರುತು ಚೀಟಿಯ ಸಂಖ್ಯೆಯನ್ನು ಕಳುಹಿಸಿ ಅಹವಾಲು ಹೇಳಿಕೊಳ್ಳುವ ಅವಕಾಶ ಒದಗಿಸುವ ಯೋಜನೆ ಇದಾಗಿದೆ. ಯಾವುದೇ ದೂರು ದುಮ್ಮಾನಗಳಿದ್ದರೆ ಅದಕ್ಕೆ ಸ್ಪಂದಿಸಿ ಬಗೆಹರಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಮಮತಾ ಗಟ್ಟಿ, ಶೋಭಾ ಕೇಶವ, ಸುರೇಖಾ, ಭಾರತಿ ಬಿ.ಎಂ., ಪ್ರತಿಭಾ ಕುಳಾಯಿ, ಅಪ್ಪಿ, ಹಿಲ್ಡಾ ಆಳ್ವ, ಜೊಸ್ಪಿನ್ ಮತ್ತು ಬ್ಲಾಕ್ ಮಟ್ಟದ ಪದಾಧಿಕಾರಿಗಳು ಹಾಗೂ ಮೊದಲಾದವರು ಉಪಸ್ಥಿತರಿದ್ದರು.