ಅವಳಿ ಜವಳಿ ಹಸುಳೆಗಳ ರಕ್ಷಣೆ: ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ
ಉಡುಪಿ, ಜು.27: ಉಡುಪಿ ಸರಕಾರಿ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ಅವಳಿ ಜವಳಿ ಗಂಡು ನವಜಾತ ಶಿಶುಗಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಿರುವ ಘಟನೆ ಇಂದು ನಡೆದಿದೆ.
ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ರಕ್ಷಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವ್ಯಾಪ್ತಿಗೆ ಬರುವ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಿ ಮಾನವೀಯತೆ ತೋರಿದ ಘಟನೆ ಶುಕ್ರವಾರ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸೂರು ಗ್ರಾಮದ 40 ವರ್ಷ ಪ್ರಾಯದ ಮಹಿಳೆಯೊಬ್ಬರ ಪತಿ ಅಪಘಾತದಿಂದ ಮರಣ ಹೊಂದಿ ದ್ದರು. ಬಳಿಕ ಆಕೆ ಜೀವನ ಸಾಗಿಸಲು ಮಂಗಳೂರಿಗೆ ವಲಸೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು. ಅಲ್ಲಿ ಆಕೆಗೆ ಕೂಲಿಕಾರ್ಮಿಕ ಬಾಗಲಕೋಟೆ ಜಿಲ್ಲೆಯ ಶಿರೋಳ ಗ್ರಾಮದ ವ್ಯಕ್ತಿಯೊಬ್ಬರ ಪರಿಚಯವಾಗಿ ಅವರನ್ನೇ ರಿಜಿಸ್ಟ್ರಾರ್ ಮದುವೆಯಾಗಿದ್ದರು.
ಈ ಮಹಿಳೆ ಮೇ 23ರಂದು ಮಂಗಳೂರು ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಗಂಡು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಬಳಿಕ ಇವರಿಬ್ಬರು ತಮ್ಮ ಊರಿಗೆ ತೆರಳಿದ್ದರು. ಇವರ ಮದುವೆಗೆ ಮನೆಯವರ ವಿರೋಧ ಇದ್ದ ಕಾರಣ ಅಲ್ಲಿ ಅವರಿಗೆ ಪ್ರವೇಶ ನೀಡಲಿಲ್ಲ ಎಂದು ತಿಳಿದು ಬಂದಿದೆ. ಅಸಹಾಯಕರಾದ ಇಬ್ಬರು ಹಸುಗೂಸುಗಳೊಂದಿಗೆ ಉಡುಪಿಗೆ ಬಂದು ಸರಕಾರಿ ಬಸು ನಿಲ್ದಾಣದಲ್ಲಿ ನೆಲೆಸಿದ್ದರು.
ಕುಡಿತ ಚಟ ಹೊಂದಿದ ಆ ವ್ಯಕ್ತಿ ಪತ್ನಿಯೊಂದಿಗೆ ಜಗಳವಾಡಿದ್ದು, ಇದೇ ಸಿಟ್ಟಿನಿಂದ ಮಹಿಳೆ ತನ್ನ ಎರಡು ಮಗುವನ್ನು ಇಂದು ಬಸ್ ನಿಲ್ಧಾಣದಲ್ಲಿ ಬಿಟ್ಟು ಹೋಗಿದ್ದರು. ಈ ಬಗ್ಗೆ ಸಾರ್ವಜನಿಕರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ದಾವಿಸಿದ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಈ ವಿಚಾರವನ್ನು ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಿದರು.
ಮಕ್ಕಳ ರಕ್ಷಣಾ ಘಟಕದ ಸಿಬ್ಭಂದಿಗಳಾದ ಗ್ಲೀಶಾ ಮಂತರೊ, ಸಂದೇಶ ಕೆ. ಸ್ಥಳಕ್ಕೆ ಧಾವಿಸಿ ದಂಪತಿಗಳ ಸಮೇತ ಹಸುಳೆಗಳನ್ನು ವಶಕ್ಕೆ ಪಡೆದು, ನಿಟ್ಟೂರಿನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ದಂಪತಿಯನ್ನು ಸಮಿತಿಯ ಅಧ್ಯಕ್ಷ ರೋನಾಲ್ಡ್ ಬಿ. ವಿಚಾರಣೆ ನಡೆಸಿ, ಬಳಿಕ ಲಕ್ಷ್ಮೀ ನಗರದಲ್ಲಿರುವ ಶ್ರೀಕೃಷ್ಣಾನುಗ್ರಹ ದತ್ತು ಸ್ವಿಕಾರ ಕೇಂದ್ರದಲ್ಲಿ ತಾಯಿ ಮಕ್ಕಳಿಗೆ ಆಶ್ರಯ ಕಲ್ಪಿಸುವ ವ್ಯವಸ್ಥೆ ಮಾಡಿದ್ದಾರೆ. ಪತಿಗೆ ಹೆಂಡತಿ ಮಕ್ಕಳನ್ನು ತಿಂಗಳಿಗೊಮ್ಮೆ ಭೇಟಿಯಾಗಲು ಸಮಿತಿ ಅವಕಾಶ ನೀಡಿದೆ.