ಕೊಣಾಜೆ: ಅಂತಾರಾಜ್ಯ ದನ ಕಳವು ಆರೋಪಿಯ ಬಂಧನ
ಕೊಣಾಜೆ, ಜು. 27: ಕೊಣಾಜೆ ಠಾಣೆ ವ್ಯಾಪ್ತಿಯ ಕೈರಂಗಳ ಗ್ರಾಮದ ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆ ಹಾಗೂ ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನದಿಂದ ದನ ಕಳವು ಮಾಡಿದ ಆರೋಪಿಗಳ ಪೈಕಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತನನ್ನು ಮಂಜೇಶ್ವರ ಮಚ್ಲಂಪಾಡಿಯ ಅಬ್ದುಲ್ಲಾ ಹುಸೈನ್(38) ಯಾನೆ ಹುಸೈನ್ ಮಂಜೇಶ್ವರ ಯಾನೆ ಜಾಕಿರ್ ಎಂದು ಗುರುತಿಸಲಾಗಿದೆ. ಈತನಲ್ಲಿದ್ದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈತ ಪಾಂಡೇಶ್ವರ ಮಹಾಲಿಂಗೇಶ್ವರ ದೇವಾಸ್ಥಾನದ 2 ದನ ಮತ್ತು ಕರುವನ್ನು ಕಳವು ಮಾಡಿದ್ದು ಹಾಗೂ ಈ ಕೃತ್ಯಕ್ಕೆ ರಿಟ್ಸ್ ಕಾರನ್ನು ಬಳಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ದನ ಕಳವಿಗೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಕಂಕನಾಡಿ ನಗರ ಠಾಣೆಯಲ್ಲಿ 2 ಪ್ರಕರಣ, ಮಂಗಳೂರು ದಕ್ಷಿಣ ಠಾಣೆಯಲ್ಲಿ 1 ಪ್ರಕರಣ, ಕೇರಳ ರಾಜ್ಯದ ಕಾಸರಗೋಡು ಕುಂಬ್ಳೆಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತದೆ. ಅಲ್ಲದೆ ಈತ ನೆತ್ತಿಲಪದವು, ಕಾಸರಗೋಡು, ವಿಟ್ಲ ಪರಿಸರದಲ್ಲಿ ಸೇರಿದಂತೆ ಹಲವಾರು ಕಡೆ ದನ ಕಳವು ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕರಾದ ಅಶೋಕ್ ಪಿ, ಸಿಬ್ಬಂದಿಗಳಾದ ಅಶೋಕ್, ಉಮೇಶ್, ಶಿವಕುಮಾರ್, ಹೋಂಗಾರ್ಡ್ ಸಿಬ್ಬಂದಿ ಗಿರೀಶ್ ಹಾಗೂ ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಪಾಲ್ಗೊಂಡಿದ್ದರು.