ಮೂಡುಬಿದಿರೆ: ಕೆಂಪು ಕಲ್ಲು ಕೋರೆಗಳಿಗೆ ತಹಶೀಲ್ದಾರ್ ದಾಳಿ
ಮೂಡುಬಿದಿರೆ, ಜು. 27: ಬೆಳುವಾಯಿ ಹಾಗೂ ಪುತ್ತಿಗೆ ಗ್ರಾಮದ ಹಲವು ಕಡೆಗಳಲ್ಲಿ ಅನಧಿಕೃತವಾಗಿ ಕಾರ್ಯಚರಿಸುತ್ತಿದ್ದ ಕೆಂಪು ಕಲ್ಲಿನ ಕೋರೆಯ ಪ್ರದೇಶಗಳಿಗೆ ಮೂಡುಬಿದಿರೆ ತಹಶೀಲ್ದಾರ್ ರಶ್ಮಿ ಅವರು ತಮ್ಮ ಇಲಾಖಾ ಸಿಬ್ಬಂದಿಗಳೊಂದಿಗೆ ಶುಕ್ರವಾರ ದಿಢೀರ್ ದಾಳಿ ನಡೆಸಿ ಅಲ್ಲಿನ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರಲ್ಲದೆ ಎಚ್ಚರಿಕೆಯನ್ನು ನೀಡಿ ಬಂದಿದ್ದಾರೆ.
ತಹಶೀಲ್ದಾರ್ ದಾಳಿಯ ಮಾಹಿತಿ ತಿಳಿದು ಅಲ್ಲಿನ ಕಾರ್ಮಿಕರು ಸಾಮಾಗ್ರಿಗಳೊಂದಿಗೆ ಕೆಲಸ ಬಿಟ್ಟು ತೆರಳಿದ್ದಾರೆ. ಈ ವೇಳೆ ಅನಧಿಕೃತವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಐದು ಲಾರಿಗಳನ್ನು ತಹಶೀಲ್ದಾರ್ ತಡೆದು ನಿಲ್ಲಿಸಿ ಅದರಲ್ಲಿದ್ದ ಕೆಂಪು ಕಲ್ಲುಗಳನ್ನು ಕೆಳಗಿಳಿಸಿ ಲಾರಿ ಚಾಲಕರಿಗೆ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ.
ತಡೆಬೇಲಿ ಅಥವಾ ತಡೆಗೋಡೆ ಇಲ್ಲದೆ ಅಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿರುವ ಕಲ್ಲು ಕೋರೆಗಳು ಹಾಗೂ ಬಳಕೆಯಾದ ಬಳಿಕ ಮಣ್ಣು ತುಂಬಿಸಿ ಮುಚ್ಚದೆ ಬಿಟ್ಟಿರುವ ಕಲ್ಲು ಕೋರೆಗಳ ಬಗ್ಗೆ ತಹಶೀಲ್ದಾರ್ ಮಾಹಿತಿ ಸಂಗ್ರಹಿಸಿದ್ದಾರೆ.
ದಾಳಿ ವೇಳೆ ತಹಶೀಲ್ದಾರ್ ಜತೆ ಕಂದಾಯ ನಿರೀಕ್ಷಕ ಹ್ಯಾರಿಸ್, ತಹಶೀಲ್ದಾರ್ ಕಚೇರಿಯ ಬಾಲಚಂದ್ರ, ಮಾರ್ಪಾಡಿ ಗ್ರಾಮಕರಣಿಕ ಸಂತೋಷ್ ಪಾಲ್ಗೊಂಡಿದ್ದರು.