ವಾಣಿಜ್ಯ ತಜ್ಞ ಪ್ರೊ. ಬಿ.ಎಸ್. ರಾಮನ್ ನಿಧನ
ಮಂಗಳೂರು, ಜು.28: ತಮಿಳುನಾಡು ಮೂಲದವರಾದ, ವಾಣಿಜ್ಯ ಕ್ಷೇತ್ರದಲ್ಲಿ ತಜ್ಞರಾಗಿ, ಗುರುವಾಗಿ ಗುರುತಿಸಿಕೊಂಡಿದ್ದ ಪ್ರೊ. ಬಿ.ಎಸ್. ರಾಮನ್ ಇಂದು ತಮ್ಮ ಊರಾದ ಊಟಿಯಲ್ಲಿ ನಿಧನರಾಗಿದ್ದಾರೆ.
81ರ ಹರೆಯದ ಅವರು ವಾಣಿಜ್ಯ ಕ್ಷೇತ್ರದಲ್ಲಿ ಅಪಾರ ಪ್ರೌಢಿಮೆಯನ್ನು ಹೊಂದಿದ್ದವರು. ಅಕೌಂಟೆನ್ಸಿ ವಿಷಯದಲ್ಲಿ ಬರೆದಿರುವ ಹಲವು ಪುಸ್ತಕಗಳು ಕಾಲೇಜು ಪಠ್ಯಗಳಾಗಿ ಹೆಸರು ಪಡೆದಿವೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ 35 ವರ್ಷಗಳ ಕಾಲ ವಾಣಿಜ್ಯ ಉಪನ್ಯಾಕರಾಗಿ ಅವರು ಸೇವೆ ಸಲ್ಲಿಸಿದ್ದಾರೆ.
1960ರಲ್ಲಿ ಅಲೋಶಿಯಸ್ ಕಾಲೇಜು ಸೇರಿದ್ದ ಅವರು, ಅತ್ಯಂತ ಕಟ್ಟುನಿಟ್ಟಿನ ಗುರುಗಳಾಗಿದ್ದರು ಮಾತ್ರವಲ್ಲದೆ, ವಿದ್ಯಾರ್ಥಿಗಳು ಮೆಚ್ಚುವ ಶಿಕ್ಷಕರಾಗಿಯೂ ಗುರುತಿಸಿಕೊಂಡವರು. ಲೆಕ್ಕಶಾಸ್ತ್ರದಲ್ಲಿ ಅಪಾರ ಪರಿಣತಿಯನ್ನು ಅವರು ಪಡೆದಿದ್ದು, ಮಂಗಳೂರಿನ ಬಹುತೇಕ ಲೆಕ್ಕ ಪರಿಶೋಧಕರು ಬಿ.ಎಸ್. ರಾಮನ್ ಅವರಿಂದ ಸಲಹೆ ಸೂಚನೆಗಳನ್ನೂ ಪಡೆಯುತ್ತಿದ್ದರು.
2016ರಲ್ಲಿ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘವು ಅವರಿಗೆ ‘ದಿ ಎಮಿನಿಯಂಟ್ ಅಲೋಶಿಯಸ್ ಪ್ರಶಸ್ತಿ’ ನೀಡಿ ಗೌರವಿಸಿತ್ತು.
ಮಂಗಳೂರು ಭಾಗದಲ್ಲಿ ಬಿಬಿಎ ಕೋರ್ಸ್ ಆರಂಭಿಸಿದ ಖ್ಯಾತಿಯೂ ಬಿ.ಎಸ್. ರಾಮನ್ ಅವರಿಗೆ ಸಲ್ಲುತ್ತದೆ. ರಾಮನ್ ಅವರು ಲೆಕ್ಕಶಾಸ್ತ್ರ, ವಾಣಿಜ್ಯ, ಅರ್ಥಶಾಸ್ತ್ರ ಹಾಗೂ ವ್ಯವಹಾರ ಕಾನೂನು ವಿಷಯಗಳಲ್ಲಿ 100ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಇವರ ಪುಸ್ತಕಗಳು ದೇಶದ ಹಲವು ವಿಶ್ವವಿದ್ಯಾ ಲಯಗಳಲ್ಲಿ ಪಠ್ಯಗಳಾಗಿವೆ.
ಉಪನ್ಯಾಸಕ ವೃತ್ತಿಯಿಂದ ನಿವೃತ್ತಿಯ ಬಳಿಕವೂ ಹಲವು ವರ್ಷ ಮಂಗಳೂರಿನಲ್ಲಿ ನೆಲೆಸಿದ್ದ ಅವರು, ನಾಲ್ಕು ವರ್ಷ ಬೆಂಗಳೂರಿನಲ್ಲಿದ್ದರು. ಬಳಿಕ ಕೆಲ ಸಮಯದ ಹಿಂದಷ್ಟೇ ತಮ್ಮ ಹುಟ್ಟೂರಾದ ಊಟಿಗೆ ಅವರು ತೆರಳಿದ್ದರು.
ಮೃತ ಬಿ.ಎಸ್. ರಾಮನ್ರವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಶಿಷ್ಯ ವರ್ಗವನ್ನು ಅಗಲಿದ್ದಾರೆ.