ಮುರುಡೇಶ್ವರ: ಈಜಲು ತೆರಳಿದ ಯುವಕ ಸಮುದ್ರಪಾಲು
ಭಟ್ಕಳ, ಜು. 28: ಸಮುದ್ರದಲ್ಲಿ ಈಜಲು ತೆರಳಿದ ಪ್ರವಾಸಿಯೊಬ್ಬರು ನೀರುಪಾಲಾಗಿದ್ದು ಲೈಫ್ ಗಾರ್ಡ್ಸ್ ನೆರವಿನಿಂದ ಒರ್ವ ಯುವಕನನ್ನು ರಕ್ಷಣೆ ಮಾಡಿದ ಘಟನೆ ಶನಿವಾರ ಮುರುಡೇಶ್ವರ ಸಮುದ್ರ ದಡದಲ್ಲಿ ನಡೆದಿದೆ.
ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಕಿರಣಕುಮಾರ್ (18) ನೀರು ಪಾಲಾದ ಯುವಕ. ಇನ್ನೋರ್ವ ಕಾರ್ತಿಕ್ ಮುನಿರಾಜು (20) ಎಂಬುವವರನ್ನು ರಕ್ಷಣೆ ಮಾಡಲಾಗಿದೆ. ಬೆಂಗಳೂರಿನ ಯಲಹಂಕದ ಚಂದ್ರಶೇಖರ, ಸುರೇಶ, ಗೌರಮ್ಮ, ಚೈತ್ರಾ, ಗೌರಮ್ಮ, ಸಂದೇಶ ಶ್ರೀನಿವಾಸ ಸೇರಿ ಒಟ್ಟು ಜನ ಕುಟುಂಬ ಸದಸ್ಯರು ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದರು.
ಇವರಲ್ಲಿ ನಾಲ್ವರು ಸಮುದ್ರಕ್ಕೆ ಈಜಲು ತೆರಳಿದ್ದು, ಇಬ್ಬರು ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಹಾಗೂ ಲೈಪ್ ಗಾರ್ಡ್ ಸಿಬ್ಬಂದಿ ತಕ್ಷಣ ಒರ್ವನನ್ನು ರಕ್ಷಣೆ ಮಾಡಿದ್ದಾರೆ. ಆದರೆ ಇನ್ನೋರ್ವ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರವಾಸಿಗಳ ರಕ್ಷಣೆಗೆ ಸೂಕ್ತ ವ್ಯವಸ್ಥೆಯಿಲ್ಲ: ಸಮುದ್ರದಲೆಗೆ ಕೊಚ್ಚಿ ಹೋಗುತ್ತಿರುವ ಯುವಕನನ್ನು ತಮ್ಮ ಪ್ರಾಣ ಪಣಕ್ಕಿಟ್ಟು ರಕ್ಷಿಸಿದ ಲೈಫ್ ಗಾರ್ಡ್ಸ್ ಸಿಬ್ಬಂದಿಗಳಾದ ಶಶಿ ಮತ್ತು ಜಯರಾಮ್, ಮುರುಡೇಶ್ವರದಲ್ಲಿ ಪ್ರವಾಸಿಗರ ಮನತಣಿಸಲು ಬೋಟ್ ವ್ಯವಸ್ಥೆಯಿದೆ ಆದರೆ ಅವರ ಜೀವ ರಕ್ಷಣೆಗೆ ಯಾವುದೇ ಬೋಟ್ ಆಗಲಿ ಅಥವಾ ನೀರಿನ ಬೈಕ್ ಆಗಲಿ ಇರುವುದಿಲ್ಲ. ನಾವು ನಮ್ಮ ಪ್ರಾಣವನ್ನು ಪಣ್ಕಿಟ್ಟು ಪ್ರವಾಸಿಗರನ್ನು ರಕ್ಷಿಸುತ್ತೇವೆ ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ಯಾವುದೇ ರಕ್ಷಣೆಯಿಲ್ಲದೆ ಸಮುದ್ರದಲ್ಲಿ ಅಬ್ಬರವನ್ನು ಲೆಕ್ಕಿಸದೆ ಲೈಫ್ ಗಾರ್ಡ್ಸ್ಗಳು ಪ್ರವಾಸಿಗರನ್ನು ರಕ್ಷಿಸುತ್ತಾರೆ. ಇದು ನಿಜಕ್ಕೂ ಅಪಾಯಕಾರಿ ಕಾರ್ಯವೆಂದು ಸ್ಥಳದಲ್ಲಿ ಉಪಸ್ಥಿತ ಪ್ರವಾಸಿಗರು ಹೇಳುತ್ತಾರೆ.