ಉಡುಪಿ: ಸ್ಥಳೀಯ ಸರಕಾರಗಳ ಬಲವರ್ಧನೆಗೆ ಸಚಿವರೊಂದಿಗೆ ಚರ್ಚೆ
ಉಡುಪಿ, ಜು.28: ಸ್ಥಳೀಯ ಸಂಸ್ಥೆಗಳ ಬಲವರ್ಧನೆಗಾಗಿ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಸ್ಥಳೀಯ ಸರಕಾರಗಳಿಂದ ಆಯ್ಕೆಯಾದ ವಿಧಾನ ಪರಿಷತ್ತಿನ ಶಾಸಕರು ರಾಜ್ಯ ಪಂಚಾಯತ್ರಾಜ್, ಕಾನೂನು ಮತ್ತು ಸಂಸದೀಯ ಸಚಿವ ಕೃಷ್ಣ ಬೈರೇಗೌಡ ರೊಂದಿಗೆ ಇಂದು ಬೆಂಗಳೂರಿನಲ್ಲಿ ಸುಧೀರ್ಘ ಚರ್ಚೆ ನಡೆಸಿದರು.
ಸ್ಥಳೀಯ ಸರಕಾರವಾದ ಗ್ರಾಮ ಸರಕಾರಕ್ಕೆ ಪ್ರಮುಖವಾಗಿ ಕೇಂರಳ ಮಾದರಿಯಂತೆ ‘3ಎಫ್’ಗಳನ್ನು ನೀಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿರುವ ಗ್ರಂಥಾಲಯ, ಅಂಗನವಾಡಿ, ಶಾಲೆಗಳು ಸೇರಿದಂತೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಇಲಾಖೆಗಳನ್ನು ಗ್ರಾಮ ಸರಕಾರವಾದ ಗ್ರಾಪಂಗಳೇ ಉಸ್ತುವಾರಿ ನೋಡಿಕೊಳ್ಳಬೇಕು ಎಂದವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಈ ಮೊದಲು ಬಾಪೂಜಿ ಸೇವಾ ಕೇಂದ್ರದಲ್ಲಿ ಒಟ್ಟು 100 ಸೇವೆಗಳನ್ನು ಇಲಾಖೆ ನೀಡುತ್ತದೆ ಎಂದು ಹೇಳಿದ್ದರೂ, ಪ್ರಸ್ತುತ ಒಂದೂ ಸೇವೆಯನ್ನು ನೀಡದೆ ಬಾಪೂಜಿ ಸೇವಾ ಕೇಂದ್ರಗಳು ಅನಾಥವಾಗಿವೆ. ಗ್ರಾಪಂಗಳಲ್ಲಿ ಬಾಪೂಜಿ ಸೇವಾ ಕೇಂದ್ರದ ನಿರ್ವಹಣೆಗೆ ಸಿಬ್ಬಂದಿಗಳನ್ನು ಮತ್ತು ಕಂಪ್ಯೂಟರ್ ವ್ಯವಸ್ಥೆ ಗಳನ್ನು ಮಾಡಬೇಕು. ಪಡಿತರ ಚೀಟಿ ಸೇವಾ ಶುಲ್ಕವನ್ನು ಗ್ರಾಪಂಗಳೇ ಇರಸಿಕೊಳ್ಳಬೇಕು.
ಅಲ್ಲದೇ ಗ್ರಾಪಂಗಳಲ್ಲಿ ಖಾಲಿಯಿರುವ ಲೆಕ್ಕ ಸಹಾಯಕರು ಗ್ರೇಡ್-2 ಕಾರ್ಯದರ್ಶಿಗಳನ್ನು ಕೂಡಲೇ ನೇಮಕ ಮಾಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿಯ ಬಾಕಿ ಸುಮಾರು 5,000 ಕೋಟಿ ರೂ.ಗಿಂತ ಜಾಸ್ತಿ ಇದ್ದು, ತೆರಿಗೆ ಕ್ರೋಢಿಕರಣ ಮಾಡಲು ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆಯನ್ನು ನೀಡಬೇಕು ಎಂದವರು ಸಚಿವರನ್ನು ಒತ್ತಾಯಿಸಿದರು.
ಗ್ರಾಪಂ, ತಾಪಂ ಹಾಗೂ ಜಿಪಂ ಸದಸ್ಯರ ವೇತನವನ್ನು ಹೆಚ್ಚಿಸಬೇಕು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ಬಿ-ದರ್ಜೆಗೇರಿಸಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಸಚಿವ ಕೃಷ್ಣೇ ಭೈರೇಗೌಡರನ್ನು ಒತ್ತಾಯಿಸಿದರು. ಸಚಿವರು ಬೇಡಿಕೆ ಗಳನ್ನು ಆಲಿಸಿ, ಈಗ ಸಲ್ಲಿಸಿದ ಬೇಡಿಕೆಗಳಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಬ್ಧನಿರುವುದಾಗಿ ಭರವಸೆ ನೀಡಿದರು.