ಕೊಣಾಜೆ: ವಿಶ್ವಮಂಗಳ ವಿದ್ಯಾಸಂಸ್ಥೆಯಲ್ಲಿ 'ಸ್ವಚ್ಚ ಗೆಳತಿ ಕಾರ್ಯಕ್ರಮ'
ಕೊಣಾಜೆ, ಜು. 28: ಕೊಣಾಜೆಯ ವಿಶ್ವಮಂಗಳ ವಿದ್ಯಾಸಂಸ್ಥೆ ಹಾಗೂ ಜಿಲ್ಲಾ ಪಂ.ತಿ ಸ್ವಚ್ಚಭಾರತ್ ಮಿಷನ್ , ಕೊಣಾಜೆ ಗ್ರಾಮ ಪಂ. ಸಹಯೋಗದಲ್ಲಿ ವಿಶ್ವಮಂಗಳ ಶಾಲೆಯಲ್ಲಿ ಶನಿವಾರ ವನಮಹೋತ್ಸವ ಮತ್ತು ಸ್ವಚ್ಚ ಗೆಳತಿ ಕಾರ್ಯಕ್ರಮವು ನಡೆಯಿತು.
ಜಿಲ್ಲಾ ಪಂ. ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಚ್ಚ ಗೆಳತಿ ಕಾರ್ಯಕ್ರಮವು ಉತ್ತಮ ಕಾರ್ಯಕ್ರಮವಾಗಿದ್ದು ಜಿಲ್ಲೆಯಾದ್ಯಂತ ಇಂತಹ ಕಾರ್ಯಕ್ರಮಕ್ಕೆ ಉತ್ತಮ ಪ್ರೋತ್ಸಾಹ ದೊರೆತಿದೆ. ವಿದ್ಯಾರ್ಥಿ ಸಮುದಾಯದಲ್ಲಿ ಬಹಳಷ್ಟು ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳಿಂದ ಸಾಧ್ಯವಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಂ.ಆರ್.ರವಿ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ವಚ್ಚತೆಯ ಬಗ್ಗೆ ಹೆಚ್ಚೆಚ್ಚು ಅರಿವು ಮೂಡಿಸುವ ಪ್ರಯತ್ನ ಮಾಡಬೇಕಿದೆ. ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಕಂಡಲ್ಲಿ ಎಸೆಯುವುದು ಸರಿಯಲ್ಲ, ಸ್ಯಾನಿಟರಿ ನ್ಯಾಪ್ಕಿನ್ಗಳ ವೈಜ್ಞಾನಿಕ ವಿಲೇವಾರಿ ಅಗತ್ಯ ವಾಗಿದೆ. ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಸುಡುವ ಇನ್ಸಿಂಡ್ರೇಟರ್ಸ್ ಸಾಧನವಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಈ ಸಾಧನವನ್ನು ಅಳವಡಿಸಬೇಕೆಂದು ಅವರು ಹೇಳಿದರು.
ಸ್ವಚ್ಚ ಭಾರತ್ ಮಿಷನ್ನ ಜಿಲ್ಲಾ ಉಸ್ತುವಾರಿ ಮಂಜುಳಾ ಅವರು ಮಾತನಾಡಿ, ಮುಂದಿನ ಎಂಟು ತಿಂಗಳಲ್ಲಿ ತಿಂಗಳ ನಾಲ್ಕನೇ ಶನಿವಾರ ಶಾಲಾ ಕಾಲೇಜುಗಳಲ್ಲಿ ವೈದ್ಯರಿಂದ ವೀಡಿಯೋ ಪ್ರಾತ್ಯಕ್ಷಿಕೆಯನ್ನು ನೀಡಿ ಸ್ವಚ್ಚತೆ ಜಾಗೃತಿಯ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ನಾಗೇಂದ್ರ ಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜಿಲ್ಲಾ ಪಂ. ಸದಸ್ಯೆ ಮಮತಾ ಗಟ್ಟಿ, ಕೊಣಾಜೆ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ, ಪಾರಂಪರಿಕ ವೈದ್ಯ ಶಂಕರಾನಂದ ಇನವಳ್ಳಿ, ಅರಣ್ಯಾಧಿಕಾರಿ ರವಿಕುಮಾರ್, ಜಿಲ್ಲಾ ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ ಪೂಜಾರಿ, ವಿದ್ಯಾಸಂಸ್ಥೆಯ ಕೋಶಾಧಿಕಾರಿ ಡಾ.ಪರಮೇಶ್ವರ, ಹರೀಶ್ ಪೂಜಾರಿ, ವಿಶ್ವಮಂಗಳ ವಿದ್ಯಾಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರಾದ ಅಂತು ಡಿಸೋಜ, ಶೋಭಾವತಿ, ಪ್ರಿಯಾ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವಮಂಗಳ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೊ.ಭೋಜ ಪೂಜಾರಿ ಸ್ವಾಗತಿಸಿದರು. ವಿಶ್ವಮಂಗಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ಶೆಟ್ಟಿ ವಂದಿಸಿದರು.