ಸುಂಕ ವಸೂಲಿ ನಿಲ್ಲಿಸಲು 10 ದಿನಗಳ ಗಡುವು: ಅಬ್ದುಲ್ ಸಲೀಮ್
ಟೋಲ್ಗೇಟ್ ತೆರೆದು ಜನರಿಂದ ಲೂಟಿ
ಮಂಗಳೂರು, ಜು.28: ತೊಕೊಟ್ಟು ಮತ್ತು ಹೆಜಮಾಡಿ ವರೆಗೆ ಟೋಲ್ಗೇಟ್ನ್ನು ತೆರೆದು ಜನರಿಂದ ಸುಂಕವನ್ನು ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು 10 ದಿನಗಳ ಗಡುವುದು ನೀಡಲಾಗುವುದು ಎಂದು ಕಾಂಗ್ರೆಸ್ನ ಅಲ್ಪಸಂಖ್ಯಾತರ ಕರಾವಳಿ ವಲಯ ಅಧ್ಯಕ್ಷ ಯು.ಬಿ. ಅಬ್ದುಲ್ ಸಲೀಮ್ ತಿಳಿಸಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಟೋಲ್ಗೇಟ್ನಲ್ಲಿ ತೆರಿಗೆ ಸಂಗ್ರಹಿಸುವುದನ್ನು ನಿಲ್ಲಿಸದಿದ್ದರೆ ಜನರನ್ನು ಸೇರಿಸಿಕೊಂಡು ಬೀದಿಗಿಳಿಯಲಿದ್ದೇವೆ. ಕೇರಳ ಮತ್ತು ಕರ್ನಾಟಕ ಗಡಿಭಾಗದ ಜನರು ಪಕ್ಷಾತೀತವಾಗಿ ಟೋಲ್ಗೇಟ್ ಬಂದ್ ಮಾಡಲು ಕಾಂಗ್ರೆಸ್ ಜೊತೆ ಸಿದ್ದರಾಗಿದ್ದಾರೆ ಎಂದು ಅವರು ತಿಳಿಸಿದರು.
ಶೇ.85ರಷ್ಟು ಕಾಮಗಾರಿ ಪೂರ್ಣಗೊಂಡರೆ ಮಾತ್ರ ಟೋಲ್ನ್ನು ಸಂಗ್ರಹಿಸಬೇಕು. ನವಯುಗ ಕಂಪೆನಿಯು ಕಾಮಗಾರಿ ಪೂರ್ಣಗೊಳಿಸಲು ತನ್ನ ಬಳಿ ಹಣವಿಲ್ಲ ಎನ್ನುತ್ತದೆ. ಆದರೆ ವಿದೇಶಗಳಲ್ಲಿ ದೊಡ್ಡ ದೊಡ್ಡ ಕಾಂಟ್ರಾಕ್ಟ್ಗಳನ್ನು ಹಿಡಿದು ಪೂರ್ಣಗೊಳಿಸುತ್ತಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಪ್ರಾರಂಭವಾಗಿ 9 ವರ್ಷಗಳು ಕಳೆಯುತ್ತಾ ಬಂದಿದೆ. ಈ ವೇಳೆ ಹಲವು ಪ್ರಾಣಹಾನಿ ಸಂಭವಿವೆ. ತೊಕ್ಕೊಟ್ಟು ಜಂಕ್ಷನ್ ಕಾಮಗಾರಿ 5 ವರ್ಷಗಳಿಂದ ಸ್ಥಗಿತಗೊಂಡಿದೆ. ಕಾಮಗಾರಿಯ ಸ್ಥಿತಿಗತಿಯನ್ನು ಪರಿಶೀಲಿಸುವ ಗೋಜಿಗೆ ಸಂಸದ ನಳಿನ್ಕುಮಾರ್ ಕಟೀಲ್ ಮುಂದಾಗಿಲ್ಲ. ಮುಂದಿನ ಚುನಾವಣೆಯಲ್ಲಿ ಜನರು ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಈಶ್ವರ್ ಉಳ್ಳಾಲ, ಡಿಸಿಸಿ ಉಪಾಧ್ಯಕ್ಷ ಸದಾಶಿವ ಉಳ್ಳಾಲ, ಕಾರ್ಪೊರೇಟರ್ ಅಬ್ದುಲ್ ರವೂಫ್, ನಗರಸಭೆ ಅಧ್ಯಕ್ಷ ಕುಂಞಿ ಮೋನು, ಸದಸ್ಯ ಮುಹಮ್ಮದ್ ಮುಕಚ್ಚರಿ, ಸಿ.ಎಂ. ರವೂಫ್, ಸೂರಜ್ ಪಾಲ್, ಆರಿಫ್ ಬಂದರ್, ನಜೀರ್ ಬಜಾಲ್ ಮತ್ತಿತರರಿದ್ದರು.