ಆತ್ಮದ ಬಾಗಿಲು ತೆರೆಯುವ ಶಿಕ್ಷಣ ಇಂದಿನ ಅಗತ್ಯ: ಕಲ್ಲಡ್ಕ ಪ್ರಭಾಕರ ಭಟ್
ವಿವೇಕಾನಂದದಲ್ಲಿ ಶೈಕ್ಷಣಿಕ ಕಾರ್ಯಾಗಾರ
ಪುತ್ತೂರು, ಜು. 28: ಪ್ರಸ್ತುತ ದೇಶದ ವ್ಯಕ್ತಿಗಳ ಆತ್ಮಗಳಿಗೆ ಕತ್ತಲು ಕವಿದಿದ್ದು, ಅದನ್ನು ಸರಿಸುವ ಪ್ರಯತ್ನ ಶಿಕ್ಷಣದಿಂದ ಆಗಬೇಕು. ಆತ್ಮದ ಬಾಗಿಲನ್ನು ತೆರೆದು ದೇಶದ ಉನ್ನತಿಕೆಯ ವಿಚಾರಧಾರೆಗಳನ್ನು ಅಂತರಂಗಕ್ಕೆ ಇಳಿಸುವ ಕಾರ್ಯಕ್ಕೆ ಅಧ್ಯಾಪಕರು ಮುಂದಾಗಬೇಕು. ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವ ಕಾರ್ಯ ಇಂದಿನ ಅಗತ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ಪುತ್ತೂರಿನ ನೆಹರು ನಗರದಲ್ಲಿರುವ ವಿವೇಕಾನಂದ ಕ್ಯಾಂಪಸ್ನಲ್ಲಿ ವಿದ್ಯಾಭಾರತಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜುಗಳ ಸಹಯೋಗದಲ್ಲಿ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಹಂತದ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಾಗಿ ಶನಿವಾರ ಏರ್ಪಡಿಸಲಾಗಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಕಲ್ಪನೆ ನಮ್ಮ ದೇಶದ್ದಾಗಿದ್ದರೂ ವಾಸ್ತವದಲ್ಲಿ ಅದು ಸಾಕಾರಗೊಳ್ಳದಿರುವುದು ವಿಷಾದನೀಯ. ಮನೆಯಿಂದಲೇ ದೊರಕಬೇಕಿದ್ದ ಉತ್ಕೃಷ್ಟ ಶಿಕ್ಷಣ ಇಂದು ಮನೆ - ಶಾಲೆ ಎರಡೂ ಕಡೆ ದೊರಕುವುದಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಹೆಚ್ಚಿನ ಜವಾಬ್ಧಾರಿಯನ್ನು ವಹಿಸಿಕೊಳ್ಳಬೇಕಿದೆ. ಶಿಕ್ಷಣದಲ್ಲಿನ ಕೊರತೆಯನ್ನು ನೀಗಿಸುವ ಯತ್ನ ಭರದಿಂದ ಸಾಗಬೇಕಿದೆ ಎಂದು ಅವರು ತಿಳಿಸಿದರು.
ನಿಗದಿತ ಪಾಠಪ್ರವಚನಗಳಲ್ಲದೆ ಯಾವ ಹೊಸ ಸಂಗತಿಯನ್ನು ವಿದ್ಯಾರ್ಥಿಗಳಿಗೆ ನೀಡಬಹುದು ಎಂಬುದೇ ನಮ್ಮ ಶಿಕ್ಷಣದ ಆದ್ಯತೆಯಾಗಬೇಕು. ನಾವು ತರಗತಿಗಳಲ್ಲಿ ಯಾವ ದೃಷ್ಟಿಯನ್ನು ಮಕ್ಕಳಿಗೆ ನೀಡುತ್ತೇವೆ ಎಂಬುದೇ ಮಕ್ಕಳ ನಾಳೆಯ ಉತ್ಕರ್ಷಕ್ಕೆ ಕಾರಣವಾಗುತ್ತವೆ. ಹಾಗಾಗಿ ಶಿಕ್ಷಣದಲ್ಲಿ ಹೊಸತನವನ್ನು ನೀಡುವ ಕಾಯಕ ತರಗತಿಯಲ್ಲಿ ನಡೆಯಬೇಕು ಎಂದು ಹೇಳಿದರು.
ವಿದ್ಯಾಭಾರತಿಯ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಗೌಡ ಕುಂಡಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜೀವನ್ದಾಸ್ ಇದ್ದರು. ವಿದ್ಯಾಭಾರತಿಯ ಜಿಲ್ಲಾ ಕಾರ್ಯದರ್ಶಿ ಲೋಕಯ್ಯ ಡಿ ಪ್ರಸ್ತಾವನೆಗೈದು ಸ್ವಾಗತಿಸಿದರು.
ಕಾಲೇಜಿನ ಉಪಪ್ರಾಂಶುಪಾಲ ಪರಮೇಶ್ವರ ಶರ್ಮ ವಂದಿಸಿದರು. ಉಪನ್ಯಾಸಕಿ ಅಕ್ಷತಾ ನಿರೂಪಿಸಿದರು. 28ಪಿಟಿಆರ್4 :ಕಾರ್ಯಾಗಾರದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ಅವರು ಮಾತನಾಡಿದರು.