ಗುಂಪು ಹಿಂಸೆಗಳಿಗೆ ಸಾವರ್ಕರ್ ಹಿಂದುತ್ವ ಸಿದ್ಧಾಂತದ ಪ್ರಭಾವ ಕಾರಣ: ಜಿ.ರಾಜಶೇಖರ್
ಉಡುಪಿ, ಜು. 28: ಭಾರತದಲ್ಲಿ ನಡೆಯುತ್ತಿರುವ ಹಿಂದುತ್ವದ ಕೊಲೆಗಳಿಗೆ ಯಾವುದೇ ತರ್ಕವೂ ಇಲ್ಲ, ವಾದವೂ ಇಲ್ಲ, ನ್ಯಾಯವೂ ಇಲ್ಲ. ಇದು ಹಿಂದುತ್ವವು ಈ ದೇಶವನ್ನು ಯಾವ ಸ್ಥಿತಿಗೆ ಕೊಂಡೊಯ್ದಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂದು ಹಿರಿಯ ಚಿಂತಕ ಜಿ. ರಾಜಶೇಖರ್ ಹೇಳಿದ್ದಾರೆ.
ಪ್ರಗತಿಪರ ಚಿಂತನೆಯ ಸ್ವಾಮಿ ಅಗ್ನಿವೇಶ್ ಮೇಲಿನ ಹಲ್ಲೆ ಹಾಗೂ ಗುಂಪು ಹಿಂಸೆಯನ್ನು ಖಂಡಿಸಿ ಮತ್ತು ಸರಕಾರಗಳು ಇಂತಹ ಘಟನೆಯ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿಯ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟ(ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ)ವು ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಸಂವಿಧಾನದ ಉಳಿವಿಗಾಗಿ ಕರ್ನಾಟಕ ಚಳವಳಿಗಳು ಮತ್ತು ಸಹಭಾಗಿ ಸಂಘಟನೆಗಳ ಜೊತೆ ಗೂಡಿ ಅಜ್ಜರಕಾಡಿನ ಹುತಾತ್ಮ ಚೌಕದ ಬಳಿ ಶನಿವಾರ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಸಾವರ್ಕರ್ ಪ್ರಣೀತ ಹಿಂದುತ್ವ ಸಿದ್ಧಾಂತವನ್ನು ಈ ದೇಶದ ಬೀದಿ ಬೀದಿ ಗಳಲ್ಲಿ ಜಾರಿಗೊಳಿಸುತ್ತಿರುವ ಪರಿಣಾಮವಾಗಿ ಇಂದು ಗುಂಪು ಹಿಂಸೆ ಮತ್ತು ಅದರ ಭಾಗವಾದ ಸ್ವಾಮಿ ಅಗ್ನಿವೇಶ್ ಮೇಲಿನ ಹಲ್ಲೆ ಹಾಗೂ ಕಳೆದ ಹಲವು ವರ್ಷಗಳಿಂದ ಮುಸ್ಲಿಮರು ಹಾಗೂ ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಆದುದರಿಂದ ಸ್ವಾಮಿ ಅಗ್ನಿವೇಶ್ ಮೇಲಿನ ಹಲ್ಲೆ, ಜಾನುವಾರು ವಿಚಾರಕ್ಕೆ ಸಂಬಂಧಿಸಿದ ಕೊಲೆಗಳನ್ನು ಖಂಡಿಸುವ ಜೊತೆಗೆ ಸಾವರ್ಕರ್ ಸಿದ್ಧಾಂತವನ್ನು ಕೂಡ ನಾವೆಲ್ಲ ಖಂಡಿಸಬೇಕಾಗಿದೆ ಎಂದರು.
ದಸಂಸ ಮುಖಂಡ ಸುಂದರ್ ಮಾಸ್ತರ್ ಮಾತನಾಡಿ, ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ದಲಿತರು, ಹಿಂದುಳಿದವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಭದ್ರತೆ ಇಲ್ಲವಾಗಿದೆ. ಗೋವಿನ ವಿಚಾರಕ್ಕೆ ಗುಂಪು ಹಲ್ಲೆಗಳ ಮೂಲಕ ಕೊಲೆ ಮಾಡುವ ಘಟನೆಗಳು ಇಂದು ಎಲ್ಲ ಕಡೆಗಳಲ್ಲಿ ಹೆಚ್ಚುತ್ತಿವೆ. ಇಂತಹ ಹಿಂಸೆ ಗಳು ನಡೆಯುತ್ತಿದ್ದರೂ ದೇಶವನ್ನು ಆಳುವವರು ಕಣ್ಣು ಮುಚ್ಚಿ ಕೂತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಂವಿಧಾನ ಬದ್ಧವಾಗಿ ಆಳ್ವಿಕೆ ಮಾಡುವ ಹಾಗೂ ಕಾನೂನಿಗೆ ಮಾನ್ಯತೆ ನೀಡುವ ಸರಕಾರವ್ನು ಆಯ್ಕೆ ಮಾಡಬೇಕಾಗಿದೆ ಎಂದರು.
ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಅಧ್ಯಕ್ಷ ಶ್ಯಾಮ ರಾಜ್ ಬಿರ್ತಿ, ಸಂವಿಧಾನ ಉಳಿವಿಗಾಗಿ ಕರ್ನಾಟಕ ಇದರ ಸಂಯೋಜಕ ವಾಸು ನೇಜಾರು, ಹಿರಿಯ ಚಿಂತಕ ಫಣಿರಾಜ್, ಜಮಾಅತೆ ಇಸ್ಲಾಮೀ ಹಿಂದ್ನ ಇದ್ರೀಸ್ ಹೂಡೆ, ಹರ್ಷ ಕುಮಾರ್ ಕುಗ್ವೆ, ದಸಂಸ ಮುಖಂಡರಾದ ಎಸ್.ಎಸ್. ಪ್ರಸಾದ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಅಬ್ದುಲ್ ಅಝೀಝ್ ಉದ್ಯಾವರ, ಸಲಾವುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.