ಅಡಿಕೆ, ಕರಿಮೆಣಸು ಆಮದಿಗೆ ಕಠಿಣ ನಿಯಮ: ಸಂಸದೆ ಶೋಭಾ
ಉಡುಪಿ, ಜು.28: ರಾಜ್ಯದ ಅಡಿಕೆ ಬೆಳಗಾರರಿಗೆ ನೆಮ್ಮದಿ ತರುವ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರಕಾರ, ವಿದೇಶಿ ಅಡಿಕೆ ಆಮದಿಗೆ ಈಗಿರುವ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುವ ಮೂಲಕ ಕೇಂದ್ರ ಸರಕಾರದ ವಾಣಿಜ್ಯ ಇಲಾಖೆ ಕಿ.ಗ್ರಾಂಗೆ 251ರೂ.ಗಿಂತ ಕಡಿಮೆ ದರದ ಅಡಿಕೆ ಆಮದಿಗೆ ಸಂಪೂರ್ಣ ನಿಷೇಧ ಹೇರಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಅಡಿಕೆ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ತಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಅಡಿಕೆ ಬೆಳೆಗಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈಗಾಗಲೇ ಬೆಳೆ ನಷ್ಟದಿಂದ ಕಂಗೆಟ್ಟಿರುವ ಸ್ಥಳೀಯ ಅಡಿಕೆ ಬೆಳೆಗಾರರು ಬೆಳೆದ ಅಡಿಕೆಗೆ ಕೇಂದ್ರ ಸರಕಾರದ ಈ ನಿರ್ಧಾರದಿಂದ ಬೇಡಿಕೆ ಹೆಚ್ಚಲಿದೆ ಎಂಬ ವಿಶ್ವಾಸವನ್ನು ಪತ್ರಿಕಾ ಹೇಳಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ.
ಗುಣಮಟ್ಟದಲ್ಲೂ ಉತ್ತಮವಾಗಿರುವ ಸ್ಥಳೀಯ ಅಡಿಕೆಯ ಲಭ್ಯತೆಯಿಂದ ಗ್ರಾಹಕರಿಗೂ ಉತ್ತಮ ಗುಣಮಟ್ಟದ ಅಡಿಕೆ ದೊರೆಯಲಿದೆ ಎಂದು ಅಭಿಪ್ರಾಯ ಪಟ್ಟಿರುವ ಶೋಭಾ, ಕ್ಷೇತ್ರದ ಇನ್ನೊಂದು ಪ್ರಮುಖ ಬೆಳೆಯಾದ ಕರಿಮಣಸಿನ ಆಮದಿಗೂ ಇದೇ ತೆರನಾದ ಕಠಿಣ ನಿಯಮವನ್ನು ಕೇಂದ್ರ ವಿಧಿಸಿದ್ದು, 500ರೂ.ಗಿಂತ ಕಡಿಮೆ ಬೆಲೆಯ ಕರಿಮಣಸಿನ ಆಮದಿಗೆ ಸಂಪೂರ್ಣ ನಿರ್ಬಂಧ ಹೇರಿದೆ ಎಂದು ತಿಳಿಸಿದ್ದಾರೆ.