ಕುಂದಾಪುರ: ಹಣಕ್ಕಾಗಿ ತಮ್ಮನಿಂದ ಅಕ್ಕನ ಕೊಲೆ
ಕುಂದಾಪುರ, ಜು.28: ಕುಂದೇಶ್ವರ ದೇವಸ್ಥಾನದ ಹಿಂಭಾಗ ವಡೇರ ಹೋಬಳಿ ಗ್ರಾಮದ ಹಂದೇರ ಕೇರಿ ಎಂಬಲ್ಲಿ ಹಣದ ವಿಷಯಕ್ಕೆ ಸಂಬಂಧಿಸಿ ಸಹೋದರಿಯನ್ನು ಸಹೋದರನೇ ಕತ್ತಿಯಿಂದ ಕಡಿದು ಕೊಲೆಗೈದ ಬಗ್ಗೆ ವರದಿಯಾಗಿದೆ.
ಕೊಲೆಗೀಡಾದವರನ್ನು ವಡೇರಹೋಬಳಿ ಗ್ರಾಮದ ಹಂದೇರ ಕೇರಿಯ ಶೀನ ಭಂಡಾರಿ ಎಂಬವರ ಮಗಳು ವಿಜಯ ಭಂಡಾರಿ (50) ಎಂದು ಗುರುತಿಸ ಲಾಗಿದೆ. ಕೊಲೆ ಆರೋಪಿ ಅಣ್ಣಪ್ಪ ಭಂಡಾರಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಿಜಯ ಭಂಡಾರಿ ಅವಿವಾಹಿತೆಯಾಗಿದ್ದು, ಇವರಿಬ್ಬರು ಒಂದೇ ವಠಾರ ದಲ್ಲಿ ಪ್ರತ್ಯೇಕ ಮನೆಗಳಲ್ಲಿ ವಾಸವಾಗಿದ್ದರು. ಸರಿಯಾಗಿ ಕೆಲಸಕ್ಕೆ ಹೋಗದ ಅಣ್ಣಪ್ಪಭಂಡಾರಿ ಹಣ ಹಾಗೂ ತನ್ನ ಮನೆ ಕೆಲಸವನ್ನು ಮಾಡಿಕೊಡುವಂತೆ ತನ್ನ ಅಕ್ಕ ವಿಜಯ ಭಂಡಾರಿಗೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಜು.22ರ ರಾತ್ರಿ ಅಣ್ಣಪ್ಪಭಂಡಾರಿ ಮನೆಗೆ ಬಂದು ವಿಜಯ ಭಂಡಾರಿಗೆ ಅವಾಚ್ಯವಾಗಿ ಬೈದು ಕತ್ತಿಯಿಂದ ಕಡಿದಿದ್ದ ಎನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿ ಯಾಗದೆ ಜು.28ರಂದು ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.