ದನಕಳವು ಪ್ರಕರಣ: ಆರೋಪಿ ಬಂಧನ
ಮಂಗಳೂರು, ಜು.28: ಎಡಪದವಿನ ಮನೆಯೊಂದರ ಹಟ್ಟಿಯಿಂದ ಹಾಗೂ ಬೋರುಗುಡ್ಡೆಯಲ್ಲಿ ಕಟ್ಟಿಹಾಕಿದ ದನಕಳವು ಮಾಡಿದ ಪ್ರಕರಣದ ಆರೋಪಿ ಯನ್ನು ಬಜಪೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕೃಷ್ಣಾಪುರ ಕಾಟಿಪಳ್ಳ ನಿವಾಸಿ ಮುಹಮ್ಮದ್ ನಯೀಮ್ (19) ಬಂಧಿತ ಆರೋಪಿ. ಆರೋಪಿಯಿಂದ ಕೆಂಪು ಬಣ್ಣದ ಸ್ವಿಪ್ಟ್ ಕಾರು ವಶಪಡಿಸಿಕೊಳ್ಳಲಾಗಿದೆ.
ಜ.27ರಂದು ತೆಂಕ ಎಡಪದವಿನ ಮನೆಯೊಂದರ ಹಟ್ಟಿಯಲ್ಲಿ ಕಟ್ಟಿದ ದನವನ್ನು ಮನೆಯವರಿಗೆ ಬೆದರಿಸಿ ಕಳವು ಮಾಡಲಾಗಿತ್ತು. ಇದು ಮಾತ್ರವಲ್ಲದೆ ಬೋರುಗುಡ್ಡೆ ಧ್ವಜಸ್ತಂಬದ ಬಳಿ ಮಲಗಿದ್ದ ದನವನ್ನು ಕೆಂಪು ಸ್ವಿಪ್ಟ್ ಕಾರಿನಲ್ಲಿ ಆರೋಪಿಗಳು ಕಳವು ಮಾಡಿದ್ದರು. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿತ್ತು.
ಜು. 28ರಂದು ಬೆಳಗ್ಗೆ 10:30ಕ್ಕೆ ಗಂಜಿಮಠದ ನಾರ್ಲಪದವು ಕ್ರಾಸ್ ಬಳಿ ಆರೋಪಿ ನಯೀಮ್ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈತ ಮುಚ್ಚೂರು, ನೀರುಡೆಯ ಮನೆಗಳಿಂದ ದನ ಕಳವು ಮಾಡಿ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ಸುರತ್ಕಲ್ ಠಾಣೆಯಲ್ಲೂ ದನಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣವಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಎಸಿಪಿ ರಾಜೇಂದ್ರ ಮಾರ್ಗದರ್ಶನದಂತೆ ಬಜಪೆ ಇನ್ಸ್ಪೆಕ್ಟರ್ ಪರಶಿವಮೂರ್ತಿ ಮತ್ತು ಸಿಬ್ಬಂದಿಯಾದ ಪೂವಪ್ಪ, ಚಂದ್ರಮೋಹನ್, ಭರತ್, ಶಶಿಧರ, ಪ್ರೇಮಾನಂದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.